
ತನ್ನ ಮೊದಲ ಸಿನಿಮಾ ‘ತಮಿಳನ್’ ಶೂಟಿಂಗ್ ವೇಳೆ ಸಹನಟ ವಿಜಯ್ರನ್ನು ನೋಡಲು ಸೇರುತ್ತಿದ್ದ ನೂರಾರು ಅಭಿಮಾನಿಗಳನ್ನು ಕಂಡು ತಾನು ಬೆರಗಾಗಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.
ಬಾಲಿವುಡ್ನಿಂದ ಹಾಲಿವುಡ್ವರೆಗೆ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಈಗ ಜಾಗತಿಕ ತಾರೆ. 2000ನೇ ಇಸವಿಯಲ್ಲಿ ‘ಮಿಸ್ ವರ್ಲ್ಡ್’ ಕಿರೀಟ ಗೆದ್ದ ಎರಡು ವರ್ಷಗಳ ನಂತರ ಪ್ರಿಯಾಂಕಾ ಚಿತ್ರರಂಗಕ್ಕೆ ಕಾಲಿಟ್ಟರು. ವಿಶೇಷ ಅಂದ್ರೆ, ಅವರ ಮೊದಲ ಸಿನಿಮಾ ತಮಿಳಿನ ‘ತಮಿಳನ್’. ಇದರಲ್ಲಿ ದಳಪತಿ ವಿಜಯ್ ನಾಯಕರಾಗಿದ್ದರು. ಇತ್ತೀಚೆಗೆ, ಆ ಸಿನಿಮಾದ ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿರುವ ಪ್ರಿಯಾಂಕಾ, ವಿಜಯ್ ಅವರ ಅಭಿಮಾನಿ ಬಳಗವನ್ನು ನೋಡಿ ತನಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
ಒಂದು ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಪ್ರಿಯಾಂಕಾ, “‘ತಮಿಳನ್’ ಸಿನಿಮಾ ನನ್ನ ಖ್ಯಾತಿಯ ಮೊದಲ ಹೆಜ್ಜೆ ಆಗಿತ್ತು. ನನ್ನ ಸಹನಟ ವಿಜಯ್ ಆಗಲೇ ದೊಡ್ಡ ಸ್ಟಾರ್. ನಾನು ಸೆಟ್ಗೆ ಹೋದಾಗ, ನೂರಾರು ಜನ ಅವರನ್ನು ನೋಡೋಕೆ, ಅವರ ಡ್ಯಾನ್ಸ್ ನೋಡೋಕೆ ಸೇರಿರುತ್ತಿದ್ದರು. ಅದು ನನ್ನ ಮೊದಲ ಸಿನಿಮಾ.
ಕ್ಯಾಮೆರಾ ಹಿಂದೆ ಏನು ನಡೆಯುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ. ಅವರ ಅಭಿಮಾನಿಗಳನ್ನು ನೋಡಿದಾಗ, ವಿಜಯ್ಗೆ ಒಂದು ರೀತಿ ದೈವಿಕ ಅನುಭವ ಆಗ್ತಿರಬೇಕು ಅಂತ ನನಗೆ ಅನಿಸಿತ್ತು. ಅದರಲ್ಲೂ ಭಾರತದಲ್ಲಿ, ಜನರು ಸಿನಿಮಾ ಮತ್ತು ಸ್ಟಾರ್ಗಳನ್ನು ತುಂಬಾನೇ ಇಷ್ಟಪಡುತ್ತಾರೆ, ಅದೊಂದು ಪ್ಯಾಷನ್ ಇದ್ದ ಹಾಗೆ” ಎಂದು ಹೇಳಿಕೊಂಡಿದ್ದಾರೆ.
ಖಳನಾಯಕನ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್
ಸದ್ಯ ಪ್ರಿಯಾಂಕಾ ಚೋಪ್ರಾ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಚರ್ಚೆಯಾಗುತ್ತಿದೆ. ವರದಿಗಳ ಪ್ರಕಾರ, ಅವರು ಎಸ್.ಎಸ್. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ನಾಯಕರಾಗಿದ್ದು, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ‘ಕುಂಭ’ ಎಂಬ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.