‘ಡಾ. ಬಿ.ಆರ್. ಅಂಬೇಡ್ಕರ್ರ ಅಖಂಡ ಭಾರತದ ಸಿದ್ಧಾಂತಕ್ಕೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ವಿರುದ್ಧವಾಗಿತ್ತು ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದ್ದಾರೆ.
ನಾಗ್ಪುರ: ‘ಡಾ. ಬಿ.ಆರ್. ಅಂಬೇಡ್ಕರ್ರ ಅಖಂಡ ಭಾರತದ ಸಿದ್ಧಾಂತಕ್ಕೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ವಿರುದ್ಧವಾಗಿತ್ತು. ಅವರ ಈ ನಿಲುವೇ ಸುಪ್ರೀಂಕೋರ್ಟ್ 370ನೇ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿಲುವನ್ನು ಎತ್ತಿಹಿಡಿಯಲು ಪ್ರೇರೇಪಣೆಯಾಗಿತ್ತು’ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಜೆಐ ಗವಾಯಿ, ‘ಇಡೀ ದೇಶವನ್ನು ಒಂದಾಗಿ ಇಡುವ ಕಾರಣಕ್ಕಾಗಿಯೇ ಡಾ. ಅಂಬೇಡ್ಕರ್ ಅವರು ಒಂದು ಸಂವಿಧಾನವನ್ನು ರಚಿಸಿದ್ದರು. ಅವರು ಎಂದಿಗೂ ರಾಜ್ಯವೊಂದಕ್ಕೆ ಪ್ರತ್ಯೇಕ ಸಂವಿಧಾನದ ಪರವಾಗಿ ಇರಲಿಲ್ಲ. ಅವರ ಈ ನಿಲುವೇ ಸುಪ್ರೀಂಕೋರ್ಟ್, 370ನೇ ವಿಧಿ ರದ್ದು ಆದೇಶವನ್ನು ಎತ್ತಿಹಿಡಿಯಲು ಪ್ರೇರೇಪಣೆ ನೀಡಿತ್ತು’ ಎಂದು ಹೇಳಿದ್ದಾರೆ.
370ನೇ ವಿಧಿ ರದ್ದು ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠದಲ್ಲಿ ನ್ಯಾ. ಗವಾಯಿ ಕೂಡ ಭಾಗವಾಗಿದ್ದರು.
‘ಭಾರತದಲ್ಲಿ ಸಮಾಜವಾದದ ಅಗತ್ಯವಿಲ್ಲ. ಜಾತ್ಯತೀತತೆ ನಮ್ಮ ಸಂಸ್ಕೃತಿಯ ಮೂಲವಲ್ಲ
ನವದೆಹಲಿ: ಸಂವಿಧಾನದ ಪೀಠಿಕೆ ಬದಲಾವಣೆ ಕುರಿತ ಆರ್ಎಸ್ಎಸ್ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ನೀಡಿದ್ದ ಹೇಳಿಕೆಯನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ‘ಭಾರತದಲ್ಲಿ ಸಮಾಜವಾದದ ಅಗತ್ಯವಿಲ್ಲ. ಜಾತ್ಯತೀತತೆ ನಮ್ಮ ಸಂಸ್ಕೃತಿಯ ಮೂಲವಲ್ಲ’ ಎಂದು ಚೌಹಾಣ್ ಹೇಳಿದ್ದಾರೆ.
ವಾರಾಣಸಿಯಲ್ಲಿ ನಡೆದ ಸಂವಿಧಾನ ಹತ್ಯಾ ದಿನ ಕಾರ್ಯಕ್ರಮದಲ್ಲಿ ತುರ್ತುಪರಿಸ್ಥಿತಿ ಸ್ಮರಿಸಿದ ಸಚಿವರು, ‘ತುರ್ತುಸ್ಥಿತಿ ಹೇರಿಕೆಯು ದೇಶದ ಭದ್ರತೆಗೆ ಹೊರಗಿಂದ ಅಥವಾ ಆಂತರಿಕವಾಗಿ ಬೆದರಿಕೆ ಉಂಟಾದಾಗ. ಆದರೆ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಧಾನಿ ಇಂದಿರಾ ಗಾಂಧಿ, ಸಚಿವ ಸಂಪುಟ ಸಭೆಯನ್ನೂ ಕರೆಯದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು’ ಎಂದು ಟೀಕಿಸಿದ್ದಾರೆ.
ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುತ್ತಾ, ‘ತುರ್ತುಸ್ಥಿತಿ ಹೇರಿಕೆಯಾದಾಗ 16 ವರ್ಷದವನಾಗಿದ್ದ ನನ್ನನ್ನೂ ಜೈಲಿಗಟ್ಟಲಾಗಿತ್ತು. ತುರ್ಕ್ಮನ್ ಗೇಟ್ ಬಳಿಯ ಮನೆಗಳನ್ನು ಧ್ವಂಸಗೊಳಿಸಿ, ಜನರ ಮೇಲೆ ಬುಲ್ಡೋಜರ್ ಹತ್ತಿಸಲಾಯಿತು. ಪ್ರತಿಭಟಿಸಿದವರಿಗೆ ಗುಂಡಿಕ್ಕಲಾಯಿತು. ಹೀಗೆ ಸಂವಿಧಾನವನ್ನು ಹತ್ಯೆ ಮಾಡಲಾಯಿತು. ಕಾಂಗ್ರೆಸ್ ಸಂವಿಧಾನದ ಹಂತಕ’ ಎಂದರು.