
ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕವಿ, ಸಾಹಿತಿ ಹಾಗೂ ಚಲನಚಿತ್ರ ಗೀತರಚನೆಕಾರರಾಗಿ ಪ್ರಸಿದ್ಧರಾಗಿರುವ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಖ್ಯಾತ ಸಾಹಿತಿ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆ, ಅವರನ್ನು ತಕ್ಷಣವಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಅವರಿಗೆ ಬಿಜಿಎಸ್ ಕೆಂಗೇರಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 79 ವರ್ಷದ ಖ್ಯಾತ ಸಾಹಿತಿ ಕಳೆದ ಒಂದು ವರ್ಷದಿಂದ ಅವರಿಗೆ ತೀವ್ರ ಮಂಡಿ ನೋವಿನ ಸಮಸ್ಯೆ ಇತ್ತು. ಇಂದು ಆರೋಗ್ಯದಲ್ಲಿ ಏರುಪೇರು ಆಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಾ. ದೊಡ್ಡರಂಗೇಗೌಡರು ಕನ್ನಡದ ಪ್ರಖ್ಯಾತ ಕವಿ, ಸಾಹಿತ್ಯಿಕ, ಚಲನಚಿತ್ರ ಗೀತಕರೂ ಆಗಿದ್ದರೆ, ತಾಂತ್ರಿಕವಾಗಿ ಪ್ರಾಧ್ಯಾಪಕರೂ ಹೌದು. ಅವರು ಮನುಜ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. 80 ಕ್ಕೂ ಹೆಚ್ಚು ಕೃತಿಗಳನ್ನು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಪ್ರಕಟಿಸಿದ್ದಾರೆ. ಗ್ರಾಮೀಣ ನುಡಿಮುತ್ತುಗಳು ಮೆರೆಯುವ ಗೀತಸಾಹಿತ್ಯದ ಮೂಲಕ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಚಲನಚಿತ್ರ ಗೀತರಚನೆಯಲ್ಲಿಯೂ ಹೆಸರಾಗಿರುವ ಅವರು “ಕನ್ನಡ ಪ್ರಗಾಥಗಳ ಸಾಮ್ರಾಟ್” ಎಂಬ ಗೌರವಪದವಿಗೂ ಪಾತ್ರರಾಗಿದ್ದಾರೆ.
ಕವಿಗಳು ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿಯವರು. ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್ಡಿ(ಡಾಕ್ಟರೇಟ್) ಪದವಿ ಪಡೆದಿದ್ದಾರೆ.
ಡಾ. ದೊಡ್ಡರಂಗೇಗೌಡರು ‘ಮಾಗಿಯ ಕನಸು’ ಮತ್ತು ‘ಸಾಧನೆ ಶಿಖರ’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ‘ಹಾರುವ ಹಂಸಗಳು’ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲ, ಅವರು ಸುಮಾರು ಹತ್ತು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಚಲನಚಿತ್ರ ಗೀತಗಳನ್ನು ರಚಿಸಿರುವ ಅವರು ಕನ್ನಡ ಚಿತ್ರರಂಗದಲ್ಲಿ ಗೀತಸಾಹಿತ್ಯದ ಖ್ಯಾತಿಯನ್ನೂ ಪಡೆದಿದ್ದಾರೆ. ಗ್ರಾಮೀಣ ಸೊಗಡಿನಿಂದ ಮೆರೆದ ಈ ಗೀತಗಳು ಅವರ ಸಾಹಿತ್ಯದ ವಿಶೇಷ ವೈಶಿಷ್ಟ್ಯವಾಗಿದೆ.