
ಚಿಕ್ಕನಾಯಕನಹಳ್ಳಿ : ಸಾಸಲು, ಶೆಟ್ಟಿಕೆರೆ ಮೂಲಕ ತಾಲ್ಲೂಕಿನ ಕೆರೆಗಳಿಗೆ ಹರಿಯುವ ಹೇಮಾವತಿ ಚಾನಲ್ ನೀರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಕೆ.ಬಿ.ಕ್ರಾಸ್ ಬಳಿ ಇರುವ ಗಡಬನಹಳ್ಳಿಯಲ್ಲಿ ತೂಬು ಎತ್ತುವ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯಲು ಚಾಲನೆ ನೀಡಿದರು.
ತೂಬು ಎತ್ತಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಹೂಳು ತುಂಬಿದ್ದ ಕಾಲುವೆಯನ್ನು ತೆರವು ಮಾಡಿ ಸರಾಗವಾಗಿ ನೀರು ಹರಿಸಿ ತಾಲ್ಲೂಕಿನ ರೈತರಿಗೆ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತೇವೆ. ನಿರಂತರವಾಗಿ ಮೂರು ತಿಂಗಳು ನೀರು ಹರಿಯಲಿದೆ. ಹತ್ತು ಬ್ರಿಡ್ಜ್ ಕೆಳಗೆ ಕಟ್ಟಿಕೊಂಡಿದ್ದ ಮಣ್ಣನ್ನು ತೆಗೆಸಲಾಗಿದೆ. ತಿಮ್ಲಾಪುರ ಕೆರೆ, ಸಾಸಲು ಕೆರೆ, ಪೆಮ್ಮಲದೇವರ ಕೆರೆ, ಶೆಟ್ಟಿಕೆರೆ ಕೆರೆ, ಹುಳಿಯಾರು ಕೆರೆ ನಂತರ ಬೋರನಕಣಿವೆಗೆ ನೀರು ಹರಿಯಲಿದೆ. ನೀರು ಹರಿಯುವ ಬಗ್ಗೆ ಯಾರಿಗೂ ಸಂಶಯ ಬೇಡ ಎಂದರು.
ಲೋಕಸಭಾ ಸದಸ್ಯರಾದ ವಿ.ಸೋಮಣ್ಣ ನವರು ಸಹ ತಾಲ್ಲೂಕಿನ ನೀರಾವರಿ ಯೋಜನೆಗೆ ಸಹಕರಿಸುತ್ತಿದ್ದಾರೆ. ನಾವೂ ಸಹ ಎರಡು – ಮೂರು ಬಾರಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ರಾಜ್ಯ ಸರ್ಕಾರದಿಂದ ತಾಲ್ಲೂಕಿನ ನೀರಾವರಿ ಯೋಜನೆಗೆ ಕಟ್ ಅಂಡ್ ಕವರ್ ಮಾಡಿಸಲು ಅನುದಾನದ ಹಣವನ್ನು ತರಿಸಲಿದ್ದೇವೆ. ಕಟ್ ಅಂಡ್ ಕವರ್ ಮಾಡಿಸದಿದ್ದರೆ ಪ್ರತಿ ವರ್ಷ ಹೂಳು ತುಂಬಲಿದೆ ಹಾಗಾಗಿ ಈ ಬಗ್ಗೆ ಸಚಿವರಾದ ವಿ.ಸೋಮಣ್ಣನವರಲ್ಲಿ ಹಿಂಬಾಲಿಸುತ್ತಿದ್ದೇನೆ. ತಾಲ್ಲೂಕಿಗೆ ನೀರು ಹರಿಸಲು ಹಿಂಬಾಲಿಸುತ್ತಿರುವ ಸಂಘಟಕರು, ಹೋರಾಟಗಾರರಿಗೆಲ್ಲಾ ಧನ್ಯವಾದಗಳು ತಿಳಿಸುತ್ತೇನೆ ಎಂದರು.
ಮುಂದಿನ ದಿನಗಳಲ್ಲಿ ಅಲ್ಲಲ್ಲೇ ಚೆಕ್ ಡ್ಯಾಂ ಮಾಡುವ ಯೋಚನೆಯಿದೆ. ನವಿಲೆ ಕೆರೆ ಬಳಿ ನೀರು ಹರಿಸಲು ರೈತರು ಮುಂದೆ ಬಂದಿದ್ದಾರೆ, 3.5 ಕೋಟಿವರೆಗೆ ಮಾತ್ರ ಈಗ ಪರಿಹಾರ ನೀಡಲಾಗಿದೆ. ರೈತರು ದಾಖಲೆಗಳನ್ನು ನೀಡಿ ಪರಿಹಾರ ಪಡೆದುಕೊಳ್ಳಬಹುದು. ಗ್ಯಾರೆಹಳ್ಳಿಗೆ ಹೋದಾಗ ರೈತರು ರಸ್ತೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಅವರ ಮನವಿಗೂ ಸ್ಪಂದಿಸಲಾಗುವುದು ಹಾಗೂ ಹೇಮಾವತಿ ನೀರಿಗೆ ಕಟ್ ಅಂಡ್ ಕವರ್ ಮಾಡಲು ಅನುದಾನಕ್ಕಾಗಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಹೇಮಾವತಿ ನಾಲಾ ಇಂಜನಿಯರ್ ಮಾತನಾಡಿ, ಹೇಮಾವತಿ ನೀರು ಹರಿಯುತ್ತಿರುವ ಚಾನಲ್ ನಲ್ಲಿ 148 ಕ್ಯೂಸೆಕ್ಸ್ ನೀರು ಹರಿಯುತ್ತಿದೆ. 6500 ಮೀಟರ್ ಉದ್ದವಿದ್ದು. ಇಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿರಲಿಲ್ಲ. ಶಾಸಕರ ಹಾಗೂ ಹಲವರ ಸಹಕಾರದಿಂದ ಹೂಳು ತೆಗೆಯಲಾಗಿದೆ. ಪ್ರತಿ ವರ್ಷ ಹೂಳು ತುಂಬುತ್ತಲೇ ಇದೆ ಹಾಗಾಗಿ ಸರ್ಕಾರದಿಂದ ಅನುದಾನ ಕೇಳುತ್ತಿದ್ದೇವೆ. ಶಾಸಕರು ಸಹ ಸಚಿವರಿಂದ ಅನುದಾನ ಕೇಳಿದ್ದಾರೆ.ಪ್ರತಿ ವರ್ಷ ಯಾವುದೇ ತೊಂದರೆಯಾಗದಂತೆ ನೀರು ಹರಿಯಲು ನಾವು ಸಹ ಯೋಜನೆ ರೂಪಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹೊನ್ನೆಬಾಗಿ ಶಶಿಧರ್, ಪುರಸಭಾ ಅಧ್ಯಕ್ಷ ಕೆಂಗಲ್ ದಯಾನಂದ್, ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ ಕಾಡೇನಹಳ್ಳಿ ನವೀನ್ ಸೇರಿದಂತೆ ಹಲವರು ಇದ್ದರು.
ನಮ್ಮ ಕೆಲಸದ ಬಗ್ಗೆ ನಿಂದಿಸುವವರು ಇರಬೇಕು, ಆಗಲೇ ನಮಗೆ ಮತ್ತಷ್ಟು ಕೆಲಸ ಮಾಡಲು ಪ್ರೋತ್ಸಾಹ, ಪ್ರೇರಣೆ ದೊರಕುವುದು.