ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊಲದು ಬ್ಯಾಟ್ ಮಾಡಿದ ಭಾರತ ತಂಡವು ಪ್ರಥಮ ಇನಿಂಗ್ಸ್ನಲ್ಲಿ 471 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ಕಲೆಹಾಕಿದ್ದು 465 ರನ್ಗಳನ್ನು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ತಂಡವು 364 ರನ್ಗಳಿಗೆ ಆಲೌಟ್ ಆಯಿತು. ಅದರಂತೆ ಕೊನೆಯ ಇನಿಂಗ್ಸ್ನಲ್ಲಿ 371 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 82 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್, ನಮಗೆ ಪಂದ್ಯವನ್ನು ಗೆಲ್ಲಲು ಉತ್ತಮ ಅವಕಾಶವಿತ್ತು. ಆದರೆ ಎಲ್ಲರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ ಎಂದಿದ್ದಾರೆ. ಅದರಲ್ಲೂ ಕೆಳ ಕ್ರಮಾಂಕದ ಬ್ಯಾಟರ್ಗಳು ಎರಡೂ ಇನ್ನಿಂಗ್ಸ್ಗಳಲ್ಲಿ ಶೋಚನೀಯವಾಗಿ ವಿಫಲವಾಗಿದ್ದು ಟೀಮ್ ಇಂಡಿಯಾ ಸೋಲಿಗೆ ಕಾರಣವಾಯಿತು.
ಇನ್ನು ನಮ್ಮ ತಂಡದ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಈ ಕ್ಷೇತ್ರರಕ್ಷಣಾ ವಿಭಾಗದಲ್ಲಿ ನಾವು ಸುಧಾರಿಸಬೇಕಾಗಿದೆ. ಕ್ಯಾಚ್ಗಳನ್ನು ಕೈಬಿಟ್ಟಿದ್ದು ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ಕೊಡುಗೆ ನೀಡದಿರುವುದು ನಿರಾಸೆ ಮೂಡಿಸಿತು. ನಿನ್ನೆ, ನಾವು ಅವರಿಗೆ 430 ರನ್ಗಳ ಗುರಿ ನೀಡುವ ಬಗ್ಗೆ ಯೋಚಿಸುತ್ತಿದ್ದೆವು. ಆದರೆ ನಮ್ಮ ಕೊನೆಯ ವಿಕೆಟ್ಗಳು 25 ರನ್ಗಳಿಗೆ ಬಿದ್ದವು ಎಂದು ಶುಭ್ಮನ್ ಗಿಲ್ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ದ್ವಿತೀಯ ಇನಿಂಗ್ಸ್ನ ಮೊದಲ ವಿಕೆಟ್ ಬಿದ್ದ ನಂತರ ನಮಗೆ ಅವಕಾಶಗಳಿವೆ ಎಂದು ನನಗೆ ಅನಿಸಿತು. ಆದರೆ ನಾವಂದುಕೊಂಡಂತೆ ಎಲ್ಲವೂ ನಡೆಯಲಿಲ್ಲ. ಮೊದಲ ಪಂದ್ಯದಲ್ಲಿನ ತಪ್ಪುಗಳನ್ನು ನಾವು ಅದನ್ನು ಸರಿಪಡಿಸಬೇಕಿದೆ. ಅಂತಹ ಪಿಚ್ಗಳಲ್ಲಿ ಅವಕಾಶಗಳು ಸುಲಭವಾಗಿ ಬರುವುದಿಲ್ಲ. ಇವೆಲ್ಲವೂ ಕಲಿಯಬೇಕಾದ ವಿಷಯ. ಮುಂಬರುವ ಪಂದ್ಯದ ವೇಳೆ ಎಲ್ಲವೂ ಸುಧಾರಿಸುತ್ತದೆ ಎಂದು ಆಶಿಸುತ್ತೇವೆ ಎಂದು ಗಿಲ್ ಹೇಳಿದ್ದಾರೆ.
ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕೀರನ್ ಪೊಲಾರ್ಡ್
ಈ ಮೂಲಕ ಟೀಮ್ ಇಂಡಿಯಾದ ಸೋಲಿಗೆ ಭಾರತ ತಂಡದ ಕೆಳ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯ ಹಾಗೂ ಫೀಲ್ಡರ್ಗಳ ಕಳಪೆ ಪ್ರದರ್ಶನ ಮುಖ್ಯ ಕಾರಣ ಎಂದು ಶುಭ್ಮನ್ ಗಿಲ್ ಹೇಳಿದ್ದಾರೆ. ಇದಾಗ್ಯೂ ಜುಲೈ 2 ರಿಂದ ಶುರುವಾಗಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನಾವು ಕಂಬ್ಯಾಕ್ ಮಾಡುವ ವಿಶ್ವಾಸವನ್ನು ಟೀಮ್ ಇಂಡಿಯಾ ನಾಯಕ ವ್ಯಕ್ತಪಡಿಸಿದ್ದಾರೆ.