
ವೈಕುಂಠಪತಿ ನಾರಾಯಣ ಮತ್ತು ಲಕ್ಷ್ಮಿಗೂ ಯಾವುದೋ ಕಾರಣಕ್ಕೆ ಮಾತಾಗಿ ಲಕ್ಷ್ಮಿಗೆ ಕುದುರೆಯಾಗು ಎಂದು ವಿಷ್ಣು ಶಾಪ ಕೊಟ್ಟನು. ( ಇದು ಭಗವಂತನ ಲೀಲಾ ನಾಟಕದ ವೇದಿಕೆಗೆ ಪೂರ್ವ ತಯಾರಿ) ಶಾಪ ಕೊಟ್ಟಿದ್ದು ಏಕೆ ಎಂದು ಲಕ್ಷ್ಮಿ ಕೇಳಲಿಲ್ಲ. ಶಾಪದ ಪ್ರಭಾವದಿಂದ ಅವಳು ಯಮುನಾ ಮತ್ತು ತಮಸ ನದಿಗಳ ಸಂಗಮ ಜಾಗದಲ್ಲಿ ಹೆಣ್ಣು ಕುದುರೆಯಾಗಿ ಜನಿಸಿದಳು. ಲಕ್ಷ್ಮಿಗೆ ಪೂರ್ವ ಜನ್ಮದ ಸ್ಮೃತಿ ಇದ್ದು, ತಾನು ಶಾಪದಿಂದ ಕುದುರೆಯಾಗಿ ಇಲ್ಲಿರ ಬೇಕಾಗಿದೆ. ವೈಕುಂಠದಲ್ಲಿ ನಾರಾಯಣ ಹಾಯಾಗಿದ್ದಾನೆ ಎಂಬ ದುಃಖಕ್ಕಿಂತ, ತನ್ನ ಪತಿಯನ್ನು ಬಿಟ್ಟಿರ ಬೇಕಲ್ಲ ಎಂಬ ಹತಾಶೆ ನೋವು ಹೆಚ್ಚಾಗಿ, ತನ್ನ ಪತಿಯನ್ನು ಹೇಗಾದರೂ ಮಾಡಿ ಹತ್ತಿರ ಕರೆಸಿ ಕೊಳ್ಳಬೇಕು ಎಂಬ ಯೋಚನೆ ಬಂದಿತು. “ಶಿವ”ನನ್ನು ಕುರಿತು ಕಠಿಣ ತಪಸ್ಸು ಮಾಡಲು ಕುಳಿತಳು. ಅವಳ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ, ಲಕ್ಷ್ಮಿಯನ್ನು ಕೇಳಿದ ನೀನು ನನ್ನನ್ನು ಕುರಿತು ಯಾಕೆ ತಪಸ್ಸು ಮಾಡಿದೆ ನಿನಗೆ ಎಂತಹ ಕಠಿಣ ಸಮಸ್ಯೆ ಬಂದರೂ ಜಗತ್ಪರಿಪಾಲಕನಾದ ಶ್ರೀ ಹರಿ ಚಿಟಿಕೆ ಹೊಡೆಯುವುದರಲ್ಲಿ ಸರಿಪಡಿಸುತ್ತಿದ್ದ. ಹೀಗಿರುವಾಗ ನನ್ನನ್ನು ಆರಾಧಿಸಿದ್ದು ಏಕೆ ಎಂದು ಕೇಳಿದ.
ಲಕ್ಷ್ಮಿಯು, ಮಹಾದೇವ, ನನ್ನ ಪತಿ ನಾರಾಯಣ ಯಾವಾಗಲೂ ಧ್ಯಾನ ಮಾಡುತ್ತಿದ್ದರು ಒಂದು ದಿನ ಕೇಳಿದೆ, ಸ್ವಾಮಿ,ತ್ರಿಪುರಾಂತಕರಾದ ನೀವು ಎಲ್ಲರಿಗೂ ಒಡೆಯ ಎಂದು ನಾನು ನಿಮ್ಮನ್ನು ಮದುವೆ ಯಾಗಿದ್ದು, ಹೀಗಿರುವಾಗ ನೀವು ಯಾರನ್ನು ಧ್ಯಾನಿಸಬೇಕು ಎಂದು ಕೇಳಿದೆ. ಶ್ರೀಹರಿ ನಕ್ಕು, ನಾನು ಶಿವನ ಧ್ಯಾನ ಮಾಡುವೆ “ಪರಮೇಶ್ವರ ನನ್ನ ಪ್ರಾಣ, ನಾನು ಪರಮೇಶ್ವರನ ಪ್ರಾಣ” ನಾವಿಬ್ಬರೂ ಬೇರೆ ಬೇರೆ ಅಲ್ಲ, ಇಬ್ಬರೂ ಒಂದೇ. ನನಗೆ ಶಿವನು ಪ್ರಿಯನಾದರೆ ಶಿವನಿಗೆ ನಾನು ಪ್ರಿಯ. ಯಾರು ನಮ್ಮಿಬ್ಬರನ್ನು ಬೇರೆ ಬೇರೆ ಯಾಗಿ ನೋಡು ತ್ತಾರೋ ಅವರು ದೃಷ್ಟಿ ದೋಷಿ ಗಳಾಗಿರುತ್ತಾರೆ. ಯಾರೇ ನನ್ನ ಭಕ್ತರಾಗಿರಲಿ ಶಿವನಿಗೆ ಅಗೌರವ ತೋರಿದರೆ ಅವರಿಗೆ ರೌರವ ನರಕ ಪ್ರಾಪ್ತಿಯಾಗುತ್ತದೆ. ಅವರ ಪೂಜೆ -ಧ್ಯಾನ- ದಾನ – ಪಠಣ- ಬೋಧನೆ ಯಾವುದು ಫಲ ಕೊಡುವುದಿಲ್ಲ. ಇದೇ ಮಾತು ಶಿವನದು ಆಗಿದೆ. ಶಿವ ಭಕ್ತರಾದ ಯಾರೇ ಆದರೂ ವಿಷ್ಣುವಿಗೆ ಅಗೌರವ ತೋರಿದರೆ ಅವರಿಗೆ ರೌರವ ನರಕ ಪ್ರಾಪ್ತಿಯಾಗುತ್ತದೆ. ಹಾಗೆ ಅವರ ಶಿವ ಧ್ಯಾನ- ಶಿವ ಪೂಜೆ- ದಾನ- ಧರ್ಮ ಎಲ್ಲವೂ ವ್ಯರ್ಥ. ಇದು ಶಿವ ಮತ್ತು ವಿಷ್ಣುವಿನ ಒಮ್ಮತ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಹಾಗೆ, ಪುರಾಣಗಳೂ ಇದನ್ನೆ ಹೇಳುತ್ತವೆ. ಆದರೆ ಕ್ಷುಲ್ಲಕ ಮನಸ್ಸಿನ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಶಿವ ಮತ್ತು ವಿಷ್ಣುವಿನ ನಡುವೆ ಭೇದ ಕಲ್ಪಿಸಿ ಸಮಾಜ ಒಡೆಯುವ ಪಾತಕಿಗಳಾಗುತ್ತಿದ್ದಾರೆ. ಭಗವಂತ ಒಬ್ಬನೇ ಅವನ ರೂಪ ಹಲವು,
ಎಂದು ಜ್ಞಾನಿಗಳು, ವಿಚಾರವಂತರು, ಜ್ಞಾನಿಗಳು ಹೇಳುತ್ತಿದ್ದರೂ ಒಬ್ಬನೇ ಭಗವಂತನನ್ನು ಛಿದ್ರ ಛಿದ್ರ ಮಾಡಿ ನಾನು ಮೇಲು ತಾನು ಮೇಲು ಎಂದು ಸ್ವಯಂ ಘೋಷಣೆ ಮಾಡಿಕೊಂಡು ಜನರ ಐಕ್ಯತಾ ಭಾವವನ್ನು ಒಡೆಯುತ್ತಿದ್ದಾರೆ ಇದರ ಕರ್ಮ ಫಲ ಅವರಿಗೆ ಕಾದಿರುತ್ತದೆ ಎಂದು ಮಹಾ ತಪಸ್ವಿಗಳು, ತ್ರಿಕಾಲ ಜ್ಞಾನಿಗಳು ಪುರಾಣಗಳಲ್ಲಿ ಉಲ್ಲೇಖಿಸಿದ್ದಾರೆ.
ಮೇಲಿನ ಕಥೆಯಂತೆ, ಲಕ್ಷ್ಮಿಯು, ನಾರಾಯಣನನ್ನು ಇಲ್ಲಿಗೆ ಹೇಗಾದರೂ ಮಾಡಿ ಕರೆಸುವಂತೆ ಶಿವನಲ್ಲಿ ಬೇಡಿದಳು. ಶಿವನು ತಕ್ಷಣ ತನ್ನ ಗಣಗಳಲ್ಲಿ ಒಬ್ಬನನ್ನು ವೈಕುಂಠಕ್ಕೆ ಕಳಿಸಿ ವಿಷ್ಣುವನ್ನು ಕರೆಸಿದನು. ಮಹಾವಿಷ್ಣು ಶಿವನ ಮಾತನ್ನು ಮನ್ನಣೆ
ಮಾಡಿ ಮುಂದಿನ ತನ್ನ ಲೀಲಾ ಕಾರ್ಯ ಆರಂಭಿಸಲು, ತಾನು ಗಂಡು ಕುದುರೆ ಯಾಗಿ ಲಕ್ಷ್ಮಿ ಇದ್ದ ಜಾಗಕ್ಕೆ ಬಂದನು. ಹೆಣ್ಣು ಕುದುರೆಯಾಗಿದ್ದ ಲಕ್ಷ್ಮಿಗೆ ಗಂಡು ಕುದುರೆ ನೋಡಿ ತನ್ನ ಪತಿ ಎಂಬುದು ತಿಳಿಯಿತು. ಇಬ್ಬರು ಕೆಲವು ಕಾಲ ಸುಖ ವಾಗಿದ್ದರು. ಅವರಿಗೆ ಒಂದು ಮಗು ಹುಟ್ಟಿತು. ಲಕ್ಷ್ಮಿಗೆ ಮಗುವನ್ನು ಕಂಡರೆ ಬಹಳ ಪ್ರೀತಿ. ಕ್ಷಣವು ಬಿಟ್ಟಿರಲಿಲ್ಲ. ಆದರೆ ವಿಷ್ಣುವಿನ ಲೀಲಾ ಕಾರ್ಯದ ನಿಮಿತ್ತ ಜನಿಸಿದ ಮಗುವನ್ನು ವೈಕುಂಠಕ್ಕೆ ಕರೆತರಲು ಒಪ್ಪದ ವಿಷ್ಣು ಅಲ್ಲೇ ಬಿಟ್ಟು, ಲಕ್ಷ್ಮಿಯನ್ನು ಕರೆದುಕೊಂಡು ವೈಕುಂಠಕ್ಕೆ ಬಂದನು.
“ಹರಿವರ್ಮ” ಎಂಬ ರಾಜ ನೂರು ವರ್ಷದಿಂದ ಸಂತಾನಕ್ಕಾಗಿ ತಪಸ್ಸು ಮಾಡುತ್ತಿ ದ್ದ. ವಿಷ್ಣು ರಾಜನ ಕನಸಿನಲ್ಲಿ ಬಂದು ಏನು ಬೇಕು? ಎಂದಾಗ ನಿನ್ನ ಹಾಗೂ ಲಕ್ಷ್ಮಿಗೆ ಜನಿಸಿದ ಸಂತಾನ ನನಗೆ ಕರುಣಿಸು ಎಂದು ಬೇಡಿದ. ಹಾಗಾದರೆ ನೀನು ಈಗಲೇ ಯಮುನಾ ಮತ್ತು ತಮಸ ನದಿಗಳ ಸಂಗಮದಲ್ಲಿ ನನ್ನ ಹಾಗೂ ಲಕ್ಷ್ಮಿಯ ಸಂತಾನವಾದ ಒಂದು ಮಗು ಇದೆ ಅದನ್ನ ತೆಗೆದುಕೊಂಡು ಬಂದು ಸಾಕು ಎಂದನು. ರಾಜನು ಬೆಳಿಗ್ಗೆ ಎದ್ದು ಕನಸಿನಂತೆ ಯಮುನಾ ಮತ್ತು ತಮಾಸ ನದಿಗಳ ಸಂಗಮ ದತ್ತ ಹೋಗಿ ನೋಡಿದಾಗ ಸುಂದರವಾದ ಶಿಶು ಕಾಣಿಸಿತು. ಸಂತೋಷದಿಂದ ಆ ಮಗುವನ್ನು ಅರಮನೆಗೆ ತಂದು “ಏಕವೀರ” ಎಂದು ನಾಮಕರಣ ಮಾಡಿ ಅಕ್ಕರೆಯಿಂದ ಸಾಕಿದನು. ಈ ಮಗು ಮುಂದೆ ದೊಡ್ಡವನಾಗಿ ರಾಜ್ಯದ ಅರಸನಾಗಿ “ಹಯ್ ಹಯರ” ವಂಶವನ್ನು ನಿರ್ಮಾಣ ಮಾಡಿದನು.
ಜಗಜ್ಜಾಲಪಾಲಂ ಕಚತ್ಕಂಠ ಮಾಲಂ
ಶರಶ್ಚಂದ್ರಬಾಲಂ ಮಹಾದೈತ್ಯ ಕಾಲಂ!
ನಬೋ ನೀಲಕಾಯಂ ದುರಾವಾರ ಮಾಯಂ
ಸುಪದ್ಮ ಸಹಾಯಂ ಭಜೇ ಹಂ ಭಜೇ ಹಂ!!
🙏ನಮೋ ಹರಿಹರ 🙏
🙏ಹರೇ ಕೃಷ್ಣ 🙏