ಆಹಾರಗಳನ್ನು ಫ್ರಿಜ್ನಲ್ಲಿ ಇಟ್ಟು ತಿನ್ನುವವರಿಗೆ ಇದು ಎಚ್ಚರಿಕೆಯ ಗಂಟೆ! ಫ್ರಿಜ್ನಲ್ಲಿಟ್ಟ ವಾಂಗಿಬಾತ್ ತಿಂದು ಬೆಂಗಳೂರಿನಲ್ಲಿ ಮಗುವಿನ ಸಾವು, ದಂಪತಿ ತೀವ್ರ ಅಸ್ವಸ್ಥ!
ಈಗಂತೂ ಫ್ರಿಜ್ ಎನ್ನುವುದು ಪ್ರತಿ ಮನೆಯ ಅವಶ್ಯಕತೆ ಆಗಿಬಿಟ್ಟಿದೆ. ಆದರೆ ಫ್ರಿಜ್ ಎನ್ನುವುದು ಹಲವರ ಮನೆಯಲ್ಲಿ ಗೋಡೋನ್ ಕೂಡ ಆಗಿಬಿಟ್ಟಿದೆ. ಅಡುಗೆ ಮನೆಯಲ್ಲಿ ಇರಬೇಕಿರುವ ಬಹುತೇಕ ಪದಾರ್ಥಗಳು ಫ್ರಿಜ್ನಲ್ಲಿ ಇಡಲಾಗುತ್ತದೆ. ಬೇಳೆ-ಕಾಳುಗಳಿಂದ ಹಿಡಿದು, ಅಳಿದುಳಿದ ಅನ್ನ, ಸಾಂಬಾರು, ಸಾರು, ದೋಸೆ ಹಿಟ್ಟು… ಹೀಗೆ ಏನು ಬೇಕೋ ಎಲ್ಲವೂ ಫ್ರಿಜ್ನಲ್ಲಿ ಶೇಖರಿಸಿ ಇಡುವುದು ಬಹುತೇಕರಿಗೆ ರೂಢಿ. ಫ್ರಿಜ್ನಲ್ಲಿ ಇಡುವ ಆಹಾರಗಳು ವಿಷ ಎಂದು ಇದಾಗಲೇ ಹಲವಾರು ಅಧ್ಯಯನಗಳು ಹೇಳಿವೆ, ಹಲವು ವರದಿಗಳೂ ಬಂದಿವೆ. ಆದರೆ, ಇದನ್ನು ಕಡೆಗಣಿಸಿ ಎಲ್ಲವನ್ನೂ ಫ್ರಿಜ್ನಲ್ಲಿ ಇಡುವುದು ಮಾಮೂಲಿಯಾಗಿಬಿಟ್ಟಿದೆ.
ಇಂಥವರಿಗೆ ಇದೀಗ ಶಾಕಿಂಗ್ ಎನ್ನುವ ವರದಿಯೊಂದು ಬಂದಿದೆ. ಅದೇನೆಂದರೆ, ಬೆಂಗಳೂರಿನ ಕೆ.ಪಿ. ಅಗ್ರಹಾರದ ಭುವನೇಶ್ವರಿ ನಗರದಲ್ಲಿ ಐದು ವರ್ಷದ ಮಗುವೊಂದು ಫ್ರಿಜ್ನಲ್ಲಿ ಇಟ್ಟಿರೋ ವಾಂಗಿಬಾತ್ ಸೇವಿಸಿ ಮೃತಪಟ್ಟಿದೆ. ಫ್ರಿಜ್ನಲ್ಲಿ ಇರುವ ಅಹಾರ ವಿಷವಾಗಿದ್ದು, ಇದು ಮಗುವಿನ ಪ್ರಾಣವನ್ನು ಪಡೆದುಕೊಂಡಿದೆ. ಅಷ್ಟಕ್ಕೂ, ಆಗಿದ್ದೇನೆಂದರೆ, ಐದು ವರ್ಷದ ಮಗು ಆನ್ಲೈನ್ನಿಂದ ತಂದ ಕೇಕ್ ತಿಂದ ಬಳಿಕ ಸಾವನ್ನಪ್ಪಿತ್ತು. ಈ ಹಿನ್ನೆಲೆಯಲ್ಲಿ, ಕೇಕ್ನಿಂದಲೇ ಮಗು ಸತ್ತಿತು ಎಂದೇ ವರದಿಯಾಗಿತ್ತು. ಆದರೆ ಹಲವು ತಿಂಗಳುಗಳ ಬಳಿಕ ನಿಜ ಘಟನೆ ಬಯಲಾಗಿದೆ.
ಮಗು ಫ್ರಿಡ್ಜ್ನಲ್ಲಿ ಇಟ್ಟಿದ್ದ ಹಳೆಯ ವಾಂಗಿಬಾತ್ ತಿಂದಿತ್ತು. ಇದರಿಂದ ಆಹಾರ ವಿಷವೇರಿಕೆ ಉಂಟಾಗಿ ಮಗು ಮೃತಪಟ್ಟಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇದೀಗ ಬಹಿರಂಗಪಡಿಸಿದೆ. ಈ ಘಟನೆ ನಡೆದಿದ್ದು, 2024ರ ಅಕ್ಟೋಬರ್ 7 ರಂದು. ಮಗು ಕೇಕ್ ತಿಂದ ಬಳಿಕ ಸಾವನ್ನಪ್ಪಿತ್ತು. ಮಗುವಿನ ಪಾಲಕರೂ ಅಸ್ವಸ್ಥಗೊಂಡಿದ್ದರು. ಆದ್ದರಿಂದ ಇದು ಕೇಕ್ ತಿಂದಿದ್ದರ ಪರಿಣಾಮ ಎನ್ನಲಾಗಿತ್ತು. ಆದರೆ ಈಗ ಬಂದಿರುವ ಎಫ್ಎಸ್ಎಲ್ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ನಡೆಸಿದ ತನಿಖೆಯಲ್ಲಿ ಫ್ರಿಜ್ನಲ್ಲಿ ಇಟ್ಟಿರೋ ವಾಂಗಿಬಾತ್ ಕಾರಣ ಎನ್ನುವುದು ತಿಳಿದುಬಂದಿದೆ.
ಇದು ಫ್ರಿಜ್ನಲ್ಲಿ ಇಡುವ ಆಹಾರಗಳ ಸುರಕ್ಷತೆಯ ಬಗ್ಗೆ ಭಾರಿ ಕಳವಳ ಉಂಟುಮಾಡುವ ವಿಷಯವಾಗಿದೆ. ಸಮಯವಿಲ್ಲ ಎನ್ನುವ ಕಾರಣಕ್ಕೋ ಅಥವಾ ಮಾಡಿದ ಅನ್ನ-ಸಾಂಬಾರು ಹೆಚ್ಚಿಗೆ ಉಳಿದಿದೆ ಎನ್ನುವ ಕಾರಣಕ್ಕೋ ಫ್ರಿಜ್ನಲ್ಲಿ ಎಲ್ಲವನ್ನೂ ಇಡುವವರು ಈಗ ಗಂಭೀರವಾಗಿ ಯೋಚನೆ ಮಾಡಬೇಕಿದೆ. ಅದರಲ್ಲಿಯೂ ಅನ್ನ ಹಾಗೂ ಅದರಿಂದ ಮಾಡಿದ ಪದಾರ್ಥಗಳನ್ನು ಹೊರಗಡೆ ಕೂಡ ಹಾಗೆಯೇ ಇಟ್ಟು ಮಾರನೆಯ ದಿನ ಸೇವಿಸಿದರೆ ಅದು ಕೂಡ ವಿಷವೇ ಎನ್ನಲಾಗುತ್ತದೆ. ಇಂಥ ಸ್ಥಿತಿಯಲ್ಲಿ ಫ್ರಿಜ್ನಲ್ಲಿ ಇಟ್ಟು ತಿಂದರೆ ಏನಾಗಬೇಡ ಸ್ಥಿತಿ? ಈ ಘಟನೆಯ ಬಳಿಕವಾದರೂ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಿದ್ದಾರೆ ವೈದ್ಯರು.