
ಬೆಂಗಳೂರು, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸಾಮಾನ್ಯ ಜನರಿಗೆ ಬಹಳಸ ಉಪಯುಕ್ತವಾಗಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಗೋವಿಂದರಾಜನಗರದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮನೆಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರನ್ನು ಬಹುತೇಕರು ಭಯದ ವಾತಾವರಣದಿಂದ ನೋಡುತ್ತಾರೆ. ಮನೆಗೆ ಬಂದು ಆತ್ಮೀಯವಾಗಿ ನಡೆದುಕೊಳ್ಳುವುದರಿಂದ ಜನಸ್ನೇಹಿಯಾಗುತ್ತಾರೆ ಎಂಬುದಾಗಿ ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಕುರಿತು ಫೀಡ್ಬ್ಯಾಕ್ ತೆಗೆದುಕೊಳ್ಳುತ್ತೇವೆ. ಈ ಕಾರ್ಯಕ್ರಮದಲ್ಲಿ ಏನಾದರೂ ಬದಲಾವಣೆ ಮಾಡುವುದಿದ್ದರೆ ಸರಿಪಡಿಸುತ್ತೇವೆ. ಪ್ರತಿಯೊಂದು ಏರಿಯಾ, ಮನೆಗಳ ಡೇಟಾ ಪೊಲೀಸರಲ್ಲಿ ಲಭ್ಯವಿರುತ್ತದೆ ಎಂದು ಹೇಳಿದರು.

ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿರುವ ಕುರಿತು ಪ್ರತಿಕ್ರಿಯಿಸಿ, ಬೆಂಗಳೂರು ನಗರ ಮಾತ್ರವಲ್ಲದೆ, ಮಲೇಷ್ಯಾ, ಅಲ್ಜಿರಿಯಾ, ಯುನೈಟೆಡ್ ಸ್ಟೇಟ್ಸ್ಗಳಲ್ಲಿಯೂ ಈ ಹಿಂದೆ ಬೆದರಿಕೆ ಕರೆ ಬಂದಿತ್ತು. ಕಳೆದ ಬಾರಿಯೂ 40ಕ್ಕೂ ಹೆಚ್ಚು ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿತ್ತು. ನಾವು ಎಲ್ಲವನ್ನು ಪರಿಶೀಲಿಸಿದ್ದೆವು. ಯಾವುದನ್ನು ನಿರ್ಲಕ್ಷಿಸಲು ಅಗುವುದಿಲ್ಲ. ಈಗ ಬಂದಿರುವ ಮೇಲ್ಗಳನ್ನು ಬೆಂಗಳೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಮೇಲ್ ಮಾಡಿರುವರನ್ನು ಬಂಧಿಸಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಹೆಸರು ಕೇಳಿಬಂದಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ತನಿಖೆ ಮಾಡುತ್ತಾರೆ. ಬೈರತಿ ಬಸವರಾಜ್ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ? ಇಲ್ಲವೇ? ಎಂಬುದನ್ನು ನೋಟಿಸ್ ಕೊಟ್ಟು ವಿಚಾರಣೆ ನಡೆಸುತ್ತಾರೆ. ಈ ವೇಳೆ ಪ್ರಕರಣದ ಕುರಿತಂತೆ ಪೊಲೀಸರಿಗೆ ಸಿಕ್ಕಿರುವ ಮಾಹಿತಿಯನ್ನು ಪರಿಶೀಲಿಸುತ್ತಾರೆ ಎಂದು ಹೇಳಿದರು.

ಬಿಜೆಪಿ ಶಾಸಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಶಾಸಕ ಬೈರತಿ ಬಸವರಾಜ್ಗೆ ಇಷ್ಟು ದಿನ ಯಾಕೆ ಅಗಿರಲಿಲ್ಲ. ಮಹಿಳೆಯೊಬ್ಬರು ಠಾಣೆಗೆ ಬಂದು, ತನ್ನಮಗನ ಕೊಲೆ ಪ್ರಕರಣದಲ್ಲಿ ಇಂಥವರು ಭಾಗಿಯಾಗಿದ್ದಾರೆ ಎಂದು ದೂರು ಕೊಟ್ಟ ನಂತರ ಬೈರತಿ ಬಸವರಾಜ್ ಪಿಕ್ಚರ್ಗೆ ಬಂದಿದ್ದಾರೆ. ಎರಡು ವರ್ಷದಿಂದ ನಮ್ಮ ಸರ್ಕಾರ ಇದೆ. ಬಸವರಾಜ್ ಯಾವತ್ತಾದರು ಇಂತಹ ಪಿಕ್ಚರ್ಗೆ ಬಂದಿದ್ರಾ? ಏನಾದರೂ ಘಟನೆ ನಡೆದಾಗ, ಯಾರಾದರು ದೂರು ಕೊಟ್ಟಾಗ ಸ್ವಾಭಾವಿಕವಾಗಿ ಬರುತ್ತದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಶಾಸಕ ಬಸವರಾಜ್ ಅವರ ಪಾತ್ರ ಏನು ಇಲ್ಲ ಎಂಬುದು ತನಿಖೆಯಲ್ಲಿ ಕಂಡು ಬಂದರೆ ಬಿ ರಿಪೋರ್ಟ್ ಹಾಕುತ್ತಾರೆ. ಇದಕ್ಕೆ ಆತಂಕಪಡುವಂತದ್ದು ಏನು ಇಲ್ಲ ಎಂದರು.
