
ಕೋಲಾರ/ ಮುಳಬಾಗಿಲು : ಹಸಿದವರಿಗೆ ಅನ್ನನೀಡುವ ಕಾಯಕದಲ್ಲಿ ಕಳೆದ 3 ವರ್ಷಗಳಿಂದ ತೊಡಗಿಸಿಕೊಂಡಿರುವ ಮುಳಬಾಗಿಲು ಫುಡ್ ಬ್ಯಾಂಕ್ ಅಧ್ಯಕ್ಷ ಎಂ. ಬಿ. ಕೃಷ್ಣಮೂರ್ತಿ ಇತರರಿಗೆ ಮಾದರಿಯಾಗಿದ್ದಾರೆ.
ಮುಳಬಾಗಿಲು ಫುಡ್ ಬ್ಯಾಂಕ್ ಸ್ಥಾಪನೆ ಮಾಡಿ ಮದುವೆಗಳು, ಇನ್ನಿತರೆ ಕಾರ್ಯಕ್ರಮಗಳಲ್ಲಿ, ಹೋಟಲ್ ಗಳಲ್ಲಿ ಹಾಗೂ ಮನೆಗಳಲ್ಲಿ ಉಳಿಯುವ ಆಹಾರವನ್ನು ಪಡೆದು ಆಸ್ಪತ್ರೆ, ಬಸ್ ನಿಲ್ದಾಣಗಳಲ್ಲಿ, ರಸ್ತೆ ಬದಿಗಳಲ್ಲಿ ಇರುವ ನಿಗರ್ತಿಕರಿಗೆ ಹಾಗೂ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮತ್ತು ದೇವಾಲಯಗಳ ಮುಂಭಾಗ ಕುಳಿತುಕೊಳ್ಳುವ ಭಿಕ್ಷಕರಿಗೆ ನೀಡುವ ಕಾಯಕದಲ್ಲಿ ಕೃಷ್ಣಮೂರ್ತಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹಸಿದ ಹೊಟ್ಟೆಯನ್ನು ತುಂಬಿಸುವ ಕೆಲಸವನ್ನು ಸ್ವಯಂ ಪ್ರೇರಿತವಾಗಿ ಮಾಡುತ್ತಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ ಉಳಿಯುವ ಆಹಾರವನ್ನು ಪಡೆದು ಅದು ವ್ಯರ್ಥವಾಗದಂತೆ ಆ ದಿನವೇ ಹಸಿದವರಿಗೆ ನೀಡಿ ಸಾರ್ಥಕತೆ ಮೆರೆಯುತ್ತಿದ್ದಾರೆ. ಅನೇಕ ಜನ ಹಸಿವಿನಿಂದ ನರಳಿ ಸಾವಿಗೀಡಾದ ಪ್ರಕರಣಗಳೂ ಆಗಾಗ್ಗೆ ವರದಿ ಆಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ವ್ಯರ್ಥವಾಗುವ ಆಹಾರವನ್ನು ಹಸಿದವರಿಗೆ ನೀಡುವ ಕಾರ್ಯ 7 ವರ್ಷಗಳ ಹಿಂದೆ ಶುರುವಾಗಿದ್ದು, ಇದೀಗ ಈ ಬಗ್ಗೆ ಸಾರ್ವಜನಿಕರಲ್ಲಿ ಕೂಡಾ ಅರಿವು ಮೂಡುತ್ತಿದೆ. ಹೀಗಾಗಿ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಅಗತ್ಯವಿರುವರಿಗೆ ನೀಡಲು ಅನೇಕರು ಮುಂದಾಗಬೇಕು.
ಯಾವುದೇ ಮನೆಯಲ್ಲಿ ಕಾರ್ಯಕ್ರಮಗಳಲ್ಲಿ ಹೋಟಲ್ಗಳಲ್ಲಿ, ಮದುವೆ ಕಾರ್ಯದಲ್ಲಿ ಆಹಾರ ಉಳಿದಿದ್ದರೆ ಕೂಡಲೇ ” ಮುಳಬಾಗಿಲು ಫುಡ್ ಬ್ಯಾಂಕ್” ಗೆ ಕರೆ ಮಾಡಿದರೆ ನಾವೇ ಸ್ಥಳಕ್ಕೆ ಬಂದು ಆಹಾರವನ್ನು ಪಡೆಯುತ್ತೇವೆ.
ಆಹಾರದ ಮಹತ್ವದ ಬಗ್ಗೆ ಅರಿವು ಇರಲಿ:
ಆಹಾರದ ಬಗ್ಗೆ ಜನಗಳಲ್ಲಿ ತಿಳಿವಳಿಕೆ ಕಡಿಮೆ ಇದೆ. ಪ್ರತಿಷ್ಠೆಗೋಸ್ಕರ ತಟ್ಟೆ ತುಂಬಾ ಬಡಿಸಿಕೊಂಡು ಕೇವಲ ಎರಡು, ಮೂರು ತುತ್ತು ತಿಂದು ಹಾಗೇ ಬಿಟ್ಟು ಹೋಗುತ್ತಾರೆ. ಇದರಿಂದ ಬಹಳಷ್ಟು ಆಹಾರ ಪೋಲಾಗುತ್ತದೆ.

ಆಹಾರವನ್ನು ಗೌರವಿಸಬೇಕು :
ಎಷ್ಟೋ ಜನ ಊಟ ಸಿಗದೆ ಹಸಿವಿನಿಂದ ಬಳಲಿ ಸಾವಿಗೀಡಾಗುತ್ತಿದ್ದಾರೆ ಎಂದು ಎಂ. ಬಿ. ಕೃಷ್ಣಮೂರ್ತಿ ಹೇಳುತ್ತಾರೆ. ಬೇಸಿಗೆಯಲ್ಲಿ ಬಹು ಬೇಗ ಆಹಾರ ಕೆಡುವುದರಿಂದ ಉಳಿದ ತಕ್ಷಣ ಹಸಿದವರಿಗೆ ನೀಡದರೆ ಮಾತ್ರ ಸಾರ್ಥಕವಾಗುತ್ತದೆ ಎಂಬ ಮನೋಭಾವನೆಯನ್ನು ಹೊಂದಿರುವ ಇವರು ಹಸಿದವರಿಗೆ ಅನ್ನ ನೀಡುವ ಕಾರ್ಯದಲ್ಲಿ ಪ್ರತಿನಿತ್ಯ ತೊಡಗಿಸಿಕೊಂಡಿದ್ದಾರೆ.
ಆಹಾರ ಸರಬರಾಜು ಮಾಡಲು ತಟ್ಟೆ ಲೋಟಗಳಿಗಾಗಿ ತಿಂಗಳಿಗೆ 10 ಸಾವಿರ ರೂ. ಖರ್ಚು ಆಗುತ್ತದೆ. ಜತೆಗೆ ಒಂದಿಷ್ಟು ಜನ ಕೆಲಸದವರೂ ಇದ್ದಾರೆ.ಆಗಾಗ ಗ್ರಾಮ ಭಾರತಿ ಟ್ರಸ್ಟ್, ನಾನಾ ಆಸ್ಪತ್ರೆಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತಾರೆ.
ಅಂಗಾಂಗ ದಾನ:
ಎಂ. ಬಿ. ಕೃಷ್ಣಮೂರ್ತಿ ಮತ್ತು ಇವರ ತಾಯಿ ಗುರಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೀವ ಸಾರ್ಥಕತೆ ಕೇಂದ್ರದಲ್ಲಿ ಅಂಗಾಂಗ ದಾನ ಪ್ರತಿಜ್ಞೆ, ಮಾಡಿ ಪತ್ರಕ್ಕೆ ಸಹಿ ಹಾಕಿದ್ದಾರೆ. ತಾವು ಸತ್ತ ನಂತರ ಹೂಳುವುದಾಗಲಿ, ಸುಡುವುದಾಗಲಿ ಬೇಡ ಮತ್ತೊಬ್ಬರ ಪ್ರಾಣ ಉಳಿಯಲ್ಲಿ ನಾವು ಸತ್ತರೂ ನಮ್ಮ ಅಂಗಾಂಗ ಸಜೀವವಾಗಿರಲಿ ಎನ್ನುವ
ಇವರ ಈ ಸೇವಾ ಕಾರ್ಯ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ, ಸ್ಥಳೀಯ ಸಂಘ-ಸಂಸ್ಥೆಗಳು ಇವರೊಂದಿಗೆ ಕೈಜೋಡಿಸಿ ಬಲ ತುಂಬಲಿ ಎನ್ನುವುದು ” ಕರುನಾಡ ಕಂದ ” ಪತ್ರಿಕೆಯ ಆಶಯವಾಗಿದೆ.
ಸಂಪರ್ಕ :ಶ್ರೀ ಎಂ. ಬಿ. ಕೃಷ್ಣಮೂರ್ತಿ, ಅಧ್ಯಕ್ಷರು
ಮುಳಬಾಗಿಲು ಫುಡ್ ಬ್ಯಾಂಕ್, ಮುಳಬಾಗಿಲು
ಫೋನ್ : 9606411146,9036650020.