ಕಲಬುರಗಿ, (ಜೂನ್ 22): ಆಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಒಂದಲ್ಲ ಒಂದು ವಿಚಾರದಲ್ಲಿ ತಮ್ಮದೇ ಸರ್ಕಾರವನ್ನು ಮುಜುಗರಕ್ಕೀಡಾಗುವಂತೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಷ್ಟೇ ಹಸ್ತಕ್ಷೇಪ ಬಗ್ಗೆ ಸಿಎಂಗೆ ಪತ್ರ ಬರೆದು ಉಲ್ಲೇಖಿಸಿ ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಬಳಿಕ ಏಕಾಏಕಿ ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ರು. ಇದೀಗ ಮನೆ ಹಂಚಿಕೆಯಲ್ಲಿ ಲಂಚ ಬಗ್ಗೆ ಆಡಿಯೋವೊಂದನ್ನು ಹರಿಬಿಟ್ಟಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಸಂಬಂಧ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇದಾದ ಒಂದೇ ದಿನದಲ್ಲಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿರುವ ಬಿ ಆರ್.ಪಾಟೀಲ್, ನನ್ನ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಇಲಾಖೆಯಿಂದ 17 ಕೋಟಿ ರೂ. ಬಂದಿದೆ. ಆದ್ರೆ ಆ ಬಗ್ಗೆ ನನಗೆ ಮಾಹಿತಿಯೇ ಇಲ್ಲ.ಅಲ್ಲಿ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಗುದ್ದಲಿ ಪೂಜೆಗೂ ನಂಗೆ ಕರೆದಿಲ್ಲ. ಮೌಲಾನಾ ಅಜಾದ್ ಶಾಲೆ ಕಟ್ಟಡ ಕಟ್ಟುತ್ತೆವೆ ಎಂದಿದ್ದಾರೆ. ಈಗಾಗಲೇ ಕೆಕೆಆರ್ ಡಿಬಿ ಅನುದಾನದಿಂದ ಕಾಮಗಾರಿ ಮಾಡಿದ್ದೆವು. ಯಾರ ಹಸ್ತಕ್ಷೇಪ ಅಂತ ಅಲ್ಲ. ಆದ್ರೆ ಶಾಸಕನಾಗಿ ನನಗೆ ಮಾಹಿತಿ ಇರಬೇಕಿತ್ತಲ್ವಾ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.