ತಮಿಳಿನ ಸೂಪರ್ ಸ್ಟಾರ್ ನಟ ದಳಪತಿ ವಿಜಯ್ (ತಲಪತಿ ವಿಜಯ್) ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು, ‘ಜನ ನಾಯಕನ್’ ತಮ್ಮ ಕೊನೆಯ ಸಿನಿಮಾ ಎಂದು ಪ್ರಕಟಿಸಿದ್ದಾರೆ. ಇದೇ ಕಾರಣಕ್ಕೆ ‘ಜನ ನಾಯಕನ್’ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇದೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದ್ದು, ಸಿನಿಮಾದ ಟ್ರೈಲರ್ ಇಂದು (ಜನವರಿ 03) ಬಿಡುಗಡೆಯಾಗಿದೆ. ‘ಜನ ನಾಯಕನ್’ ಸಿನಿಮಾ ತೆಲುಗು ಸಿನಿಮಾ ಒಂದರ ರಿಮೇಕ್ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಟ್ರೈಲರ್ ನಲ್ಲಿ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ವಿಜಯ್ ನಟನೆಯ ‘ಜನ ನಾಯಕನ್’ ಸಿನಿಮಾ ಟ್ರೈಲರ್, ವಿಜಯ್ ಅವರ ಈ ಹಿಂದಿನ ಸಿನಿಮಾಗಳ ಟೆಂಪ್ಲೆಟ್ ಇದೆ. ಭರಪೂರ ಆಕ್ಷನ್, ಸ್ಲೋ ಮೋಷನ್ ವಾಕ್, ಎದುರು ನಿಂತಿರುವ ಪಾತ್ರಗಳಿಗಲ್ಲದೆ, ಅಭಿಮಾನಿಗಳ ಡೈಲಾಗ್ಗಳು, ಕೆಲವು ಹಾಸ್ಯ ದೃಶ್ಯಗಳು, ನಾಯಕಿಯೊಂದಿಗಿನ ಹಾಡಿನ ತುಣುಕುಗಳು, ವಿನಾಕಾರಣ ಹಿಂಸೆಗಿಳಿವ ಚಿತ್ರದಿಂದ ತಂದ ವಿಲನ್ ಹೀಗೆ ಎಲ್ಲವೂ ‘ಜನ ನಾಯಕ’ ಸಿನಿಮಾದ ಟ್ರೈಲರ್ನಲ್ಲಿದೆ.
‘ಜನ ನಾಯಕನ್’ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರಿಮೇಕ್ ಎಂಬ ಸುದ್ದಿ ಆರಂಭದಿಂದಲೂ ಹರಿದಾಡುತ್ತಿದೆ, ಸಿನಿಮಾದ ನಿರ್ದೇಶಕ ಎಚ್ ವಿನೋದ್, ‘ಇದು ರಿಮೇಕ್ ಎಂದು ಹೇಳಲಾಗದು, ಸಿನಿಮಾ ಬಿಡುಗಡೆ ಆದ ಮೇಲೆ ನಿಮಗೇ ಗೊತ್ತಾಗುತ್ತದೆ’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದರು. ಇದೀಗ ಟ್ರೈಲರ್ ನೋಡಿದವರಿಗೆ ಇದು ‘ಭಗವಂತ ಕೇಸರಿ’ ಸಿನಿಮಾದ್ದೇ ರಿಮೇಕ್ ಎಂಬುದು ಖಾತ್ರಿ ಆಗಿದೆ.
‘ಭಗವಂತ ಕೇಸರಿ’ ಸಿನಿಮಾದಲ್ಲಿ ಬಾಲಕೃಷ್ಣ ತಮ್ಮ ಸಾಕುಮಗಳನ್ನು ಸೈನ್ಯಕ್ಕೆ ಸೇರಿಸುವ ಪ್ರಯತ್ನದಲ್ಲಿರುತ್ತಾರೆ, ಅದಕ್ಕೆ ಕಾರಣವೂ ಇರುತ್ತದೆ. ‘ಜನ ನಾಯಕನ್’ ಸಿನಿಮಾದಲ್ಲಿಯೂ ಸಹ ವಿಜಯ್ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವ ಪ್ರಯತ್ನದಲ್ಲಿದ್ದಾರೆ. ತೆಲುಗಿನಲ್ಲಿ ಶ್ರೀಲೀಲಾ ನಟಿಸಿದ್ದ ಪಾತ್ರದಲ್ಲಿ ‘ಜನ ನಾಯಕನ್’ ಸಿನಿಮಾದಲ್ಲಿ ಮಮಿತಾ ಬಿಜು ನಟಿಸಿದ್ದಾರೆ. ಆದರೆ ಭಗವಂತ ಕೇಸರಿ ಸಿನಿಮಾದಲ್ಲಿ ಇಲ್ಲದ ರಾಜಕೀಯದ ಅಂಗಳವನ್ನು ಎಳೆದು ತಂದಿದ್ದಾರೆ ನಿರ್ದೇಶಕ ಎಚ್.ವಿ.
ವಿಜಯ್ ಅವರ ರಾಜಕೀಯ ಪಯಣಕ್ಕೆ ಬೇಕಾಗುವ ಸನ್ನಿವೇಶಗಳು, ಸಂಭಾಷಣೆಗಳನ್ನು ನಿರ್ದೇಶಕ ವಿನೋದ್ ಸೃಷ್ಟಿಸಿರುವುದು ಟ್ರೈಲರ್ನಲ್ಲಿಯೇ ಕಾಣುತ್ತದೆ. ರಾಜಕಾರಣಿಗಳನ್ನೆಲ್ಲ ಅಪಹರಿಸಿ, ಕಟ್ಟಿ ಹಾಕಿ ಅವರನ್ನು ಹೊಡೆಯುತ್ತಾ ಬಡಿಯುತ್ತಾ ಅವರೆಲ್ಲ ಎಷ್ಟು ಭ್ರಷ್ಟರು ಎಂದು ತೆಗಳುತ್ತಾ, ಜನ ಸೇವೆ ಹೇಗೆ ಮಾಡಬೇಕೆಂದು ವಿಜಯ್ ಭಾಷಣ ಮಾಡುವ ದೃಶ್ಯವೂ ಸಹ ಟ್ರೈಲರ್ ನಲ್ಲಿದೆ. ಇದರಿಂದ ತಿಳಿಯುತ್ತದೆ, ‘ಜನ ನಾಯಕನ್’ ಸಿನಿಮಾದ ಹಿಡನ್ ಅಜೆಂಡ.
‘ಜನ ನಾಯಕನ್’ ಸಿನಿಮಾದಲ್ಲಿ ಮಮಿತಾ ಬಿಜು ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಪೂಜಾ ಹೆಗ್ಡೆ ಸಿನಿಮಾದ ನಾಯಕಿ. ಪ್ರಕಾಶ್ ರೈ ಮತ್ತು ಬಾಬಿ ಡಿಯೋಲ್ ಸಿನಿಮಾದ ವಿಲನ್ ಗಳು. ಸಿನಿಮಾದಲ್ಲಿ ಇನ್ನೂ ಕೆಲವು ಪ್ರಮುಖ ನಟ, ನಟಿಯರು ಸಹ ನಟಿಸಿದ್ದಾರೆ. ಸಿನಿಮಾ ಜನವರಿ 09 ರಂದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ