ತನಿಖೆ ನೆಪದಲ್ಲಿ ಥೀಮ್ ಪಾರ್ಕ್ ಅನಾಥ:ಪರಶುರಾಮನಿಗೇ ಕನ್ನ ಹಾಕಿದ ಕಳ್ಳರು,ಕಾಂಗ್ರೆಸ್ ದ್ವೇಷಕ್ಕೆ ಪ್ರತಿಷ್ಠಿತ ಯೋಜನೆ ಬಲಿ? | Udupi Karkala Parashuram Theme Park Theft Case Sunil Kumar Against Congress Govt

ತನಿಖೆ ನೆಪದಲ್ಲಿ ಥೀಮ್ ಪಾರ್ಕ್ ಅನಾಥ:ಪರಶುರಾಮನಿಗೇ ಕನ್ನ ಹಾಕಿದ ಕಳ್ಳರು,ಕಾಂಗ್ರೆಸ್ ದ್ವೇಷಕ್ಕೆ ಪ್ರತಿಷ್ಠಿತ ಯೋಜನೆ ಬಲಿ? | Udupi Karkala Parashuram Theme Park Theft Case Sunil Kumar Against Congress Govt


ಕಾರ್ಕಳದ ವಿವಾದಿತ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳರು ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು ಕದ್ದೊಯ್ದಿದ್ದಾರೆ. ನಿರ್ವಹಣೆಯಿಲ್ಲದೆ ಪಾಳುಬಿದ್ದಿರುವ ಈ ಯೋಜನೆಗೆ ಕಾಂಗ್ರೆಸ್ ಸರ್ಕಾರದ ದ್ವೇಷ ರಾಜಕಾರಣವೇ ಕಾರಣ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ಉಡುಪಿ (ಜ.4): ಉಡುಪಿ ಜಿಲ್ಲೆಯ ಕಾರ್ಕಳದಲ್ಲಿರುವ ವಿವಾದಿತ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಬಿಜೆಪಿ ಸರ್ಕಾರದ ಅವಧಿಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಈ ಪಾರ್ಕ್, ಈಗ ನಿರ್ವಹಣೆಯಿಲ್ಲದೆ ದುಷ್ಕರ್ಮಿಗಳ ಪಾಲಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಗಿಲು ಮುರಿದು ತಾಮ್ರದ ಹೊದಿಕೆ ಕಳವು

ಬಿಜೆಪಿ-ಕಾಂಗ್ರೆಸ್ ನಡುವಿನ ರಾಜಕೀಯ ಕೆಸರೆರಚಾಟದ ಕೇಂದ್ರವಾಗಿದ್ದ ಥೀಮ್ ಪಾರ್ಕ್ ಯೋಜನೆ ನೆನೆಗುದಿಗೆ ಬಿದ್ದಿತ್ತು. ಇದೀಗ ಆವರಣಕ್ಕೆ ನುಗ್ಗಿರುವ ಕಳ್ಳರು, ಕಟ್ಟಡದ ಬಾಗಿಲನ್ನು ಹೊಡೆದು ಒಳನುಗ್ಗಿದ್ದಾರೆ. ಪಾರ್ಕ್‌ನ ಮೇಲ್ಚಾವಣಿಗೆ ಅಳವಡಿಸಲಾಗಿದ್ದ ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು ಹೊತ್ತೊಯ್ದಿದ್ದಾರೆ. ಪಾಳುಬಿದ್ದಿರುವ ಈ ಪ್ರದೇಶದಲ್ಲಿ ಭದ್ರತೆಯ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕಾರ್ಕಳದ ಇತಿಹಾಸದಲ್ಲೇ ಇದೊಂದು ದುರ್ದಿನ

ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಸುನಿಲ್ ಕುಮಾರ್, ಕಾರ್ಕಳದ ಇತಿಹಾಸದಲ್ಲಿ ಇದೊಂದು ದುರ್ದಿನ. ನಮ್ಮ ಅವಧಿಯಲ್ಲಿ ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಭಕ್ತಿಯಿಂದ ಈ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಇಂದು ಅದು ಪಾಳು ಬಿದ್ದು ಕಳ್ಳರ ಪಾಲಾಗಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ದ್ವೇಷ ರಾಜಕಾರಣಕ್ಕೆ ಯೋಜನೆ ಬಲಿ

ಕಳ್ಳತನಕ್ಕೆ ಜಿಲ್ಲಾಡಳಿತದ ವೈಫಲ್ಯ ಮತ್ತು ಕಾಂಗ್ರೆಸ್ ನಾಯಕರ ದ್ವೇಷ ರಾಜಕಾರಣ, ನಿರ್ಲಕ್ಷ್ಯವೇ ಕಾರಣ ಎಂದು ಸುನಿಲ್ ಕುಮಾರ್ ನೇರ ಆರೋಪ ಮಾಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರ ಅಸೂಯೆಯಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಸರ್ಕಾರ ಈ ಯೋಜನೆಗೆ ಬಿಡಿಗಾಸು ಅನುದಾನ ನೀಡಿಲ್ಲ. ಕಾಂಗ್ರೆಸ್‌ನವರ ದ್ವೇಷದ ರಾಜಕಾರಣಕ್ಕೆ ಅಭಿವೃದ್ಧಿ ಬಲಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ತನಿಖೆಯ ನೆಪದಲ್ಲಿ ಪಾಳುಬಿದ್ದ ಪ್ರತಿಷ್ಠಿತ ಪಾರ್ಕ್

ಈ ಹಿಂದೆ ಪರಶುರಾಮ ಪ್ರತಿಮೆಯ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಕುರಿತು ವಿವಿಧ ಹಂತದ ತನಿಖೆಗಳು ನಡೆಯುತ್ತಿರುವುದರಿಂದ ಯೋಜನೆಯ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ. ತನಿಖೆಯ ನೆಪದಲ್ಲಿ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ, ಪ್ರವಾಸಿಗರ ತಾಣವಾಗಬೇಕಿದ್ದ ಪಾರ್ಕ್ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.



Source link

Leave a Reply

Your email address will not be published. Required fields are marked *