ಬಿಗ್ಬಾಸ್ (ಬಿಗ್ ಬಾಸ್) ಮನೆಯಿಂದ ಮತ್ತೊಬ್ಬರು ಸ್ಪರ್ಧಿ ಹೊರಗೆ ಹೋಗಿದ್ದಾರೆ. ಕಳೆದ ವಾರ ಇಬ್ಬರು ಪ್ರಮುಖ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದರು. ಮಾಳು ಮತ್ತು ಸೂರಜ್ ಅವರು ಎವಿಕ್ಟ್ ಆಗಿದ್ದರು. ಅದು ನಿಜಕ್ಕೂ ಅಚ್ಚರಿಯ ಎವಿಕ್ಷನ್ ಎನಿಸಿಕೊಂಡಿತ್ತು. ಆದರೆ ಈ ವಾರ ತೀರಾ ಅಚ್ಚರಿಯ ಎವಿಕ್ಷನ್ ಎನಿಸಲಿಲ್ಲ, ಬದಲಾಗಿ ನಿರೀಕ್ಷಿತ ಎಂದೆನಿಸಿತು. ಮನೆಯ ಇತರ ಸ್ಪರ್ಧಿಗಳಿಂದ ಅದೃಷ್ಟದ ಸ್ಪರ್ಧಿ ಯಾವಾಗಲೂ ಕರೆಸಿಕೊಳ್ಳುತ್ತಿದ್ದ ಸ್ಪಂದನಾ ಅವರು ಈ ವಾರ ಎವಿಕ್ಟ್ ಆಗಿ ಮನೆಯಿಂದ ಹೊರಗೆ ಹೋಗಿದ್ದಾರೆ.
ಸ್ಪಂದನಾ ಅವರು ಅಸಲಿಗೆ ಕಳೆದ ವಾರವೇ ಎವಿಕ್ಷನ್ ಆಗುವ ಹಂತಕ್ಕೆ ಹೋಗಿ ವಾಪಸ್ಸಾಗಿದ್ದರು. ಮಾಳು ಮತ್ತು ಸ್ಪಂದನಾ ಅವರು ಕೊನೆಯ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದರು. ಇಬ್ಬರಲ್ಲಿ ಮಾಳು ಮನೆಯಿಂದ ಹೊರಗೆ ಹೋಗಿ ಸ್ಪಂದನಾ ಉಳಿದುಕೊಂಡಿದ್ದರು. ಆಗಲೂ ಸಹ ಕೆಲವರು ಸ್ಪಂದನಾರ ಅದೃಷ್ಟದ ಬಗ್ಗೆ ಮಾತನಾಡಿದ್ದರು. ಆದರೆ ಈ ವಾರ ಸ್ಪಂದನಾ ಅವರಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ಈ ವಾರ ಸ್ಪಂದನಾ ಅವರು ಮನೆಯಿಂದ ಹೊರಗೆ ಬಂದಿದ್ದಾರೆ.
ಸುದೀಪ್ ಅವರು ಸಹ ಈ ವಾರದ ಎಲಿಮಿನೇಷನ್ ಅನ್ನು ಸರಳವಾಗಿಯೇ ಮುಗಿಸಿದರು. ಈ ಹಿಂದಿನ ಕೆಲ ವಾರ ಬೇರೆ ಬೇರೆ ರೀತಿಯಲ್ಲಿ ಎವಿಕ್ಷನ್ ಅನ್ನು ಕೆಲವು ಆಕ್ಟಿವಿಟಿಗಳ ಮೂಲಕ ಮಾಡಲಾಗಿದೆ. ನಾಮನಿರ್ದೇಶನದಿಂದ ಸೇಫ್ ಆಗುವುದಕ್ಕೂ ಆಕ್ಟಿವಿಟಿ ನೀಡಲಾಯಿತು. ಆದರೆ ಈ ವಾರ ಅದೇನೂ ಇಲ್ಲದೆ, ಬಹಳ ಸರಳವಾಗಿ ಸ್ಪಂದನಾರ ಹೆಸರು ಹೇಳುವ ಮೂಲಕ ಎವಿಕ್ಷನ್ ಪ್ರಕ್ರಿಯೆ ಪೂರ್ಣ ಮಾಡಲಾಯ್ತು. ಅಂದಹಾಗೆ ಎವಿಕ್ಷನ್ ನ ಕೊನೆಯಲ್ಲಿ ರಾಶಿಕಾ ಮತ್ತು ಸ್ಪಂದನಾ ಉಳಿದಿದ್ದರು. ಇಬ್ಬರಲ್ಲಿ ಸ್ಪಂದನಾ ಹೊರಗೆ ಬಂದರು.
ಇದನ್ನೂ ಓದಿ:ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್ಬಾಸ್ ರ್ಯಾಪ್ ಸಾಂಗ್
ಸ್ಪಂದನಾ ಅವರು ಇಷ್ಟ ದಿನ ಚೆನ್ನಾಗಿಯೇ ಆಡಿದರು. ಯಾರೊಟ್ಟಿಗೂ ವೈರತ್ವ ಕಟ್ಟಿಕೊಳ್ಳದೆ ಎಲ್ಲರೊಟ್ಟಿಗೂ ಬಾಂಧವ್ಯ ಇರಿಸಿಕೊಂಡು, ಸ್ನೇಹದೊಂದಿಗೆ ಆಡಿದರು. ಧನುಷ್, ಕಾವ್ಯದ ಜೊತೆಗೆ ವಿಶೇಷ ಬಂಧ ಇರಿಸಿಕೊಂಡಿದ್ದ ಸ್ಪಂದನ, ರಘು, ಗಿಲ್ಲಿ ಅವರಿಗೂ ಗೆಳೆಯ. ಆದರೆ ರಕ್ಷಿತಾ ಜೊತೆಗೆ ಕಳೆದ ಕೆಲವು ವಾರಗಳಿಂದಲೂ ವೈರತ್ವ ಬೆಳೆಸಿಕೊಂಡಿದ್ದರು. ಮನೆಯಿಂದ ಹೊರ ಹೋದ ಬಳಿಕ ‘ಈಗಷ್ಟೇ ಮನೆಯಿಂದ ಹೊರ ಬಂದಿದ್ದೀನಿ ಆದರೆ ಈಗಲೇ ನಾನು ಬಿಗ್ಬಾಸ್ ಮನೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೀನಿ’ ಎಂದರು ಸ್ಪಂದನಾ. ಸುದೀಪ್ ಅವರು ಸ್ಪಂದನಾ ಅವರಿಗೆ ಒಳ್ಳೆಯ ಭವಿಷ್ಯವನ್ನು ಹಾರೈಸಿ ಬೀಳ್ಕೊಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ