‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (ಬಿಬಿಕೆ 12) ಅಶ್ವಿನಿ ಗೌಡ ಅವರಿಗೆ ಹುಟ್ಟಿಕೊಂಡ ವೈರಿಗಳು ಒಬ್ಬಿಬ್ಬರಲ್ಲ. ಅವರು ಆಡುವ ಮಾತುಗಳು ಕೂಡ ಇದಕ್ಕೆ ಕಾರಣ. ಈಗ ಅಶ್ವಿನಿ ಹಾಗೂ ಕಾವ್ಯ ಮಧ್ಯೆ ವಾಕ್ಸಮರ ನಡೆದಿದೆ. ಒಬ್ಬರಿಗೊಬ್ಬರು ಏಕವಚನದಲ್ಲಿ ಕರೆದುಕೊಂಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಈ ಕಿತ್ತಾಟ ನಡೆದಿದೆ. 100 ದಿನಗಳ ಆಟದಲ್ಲಿ ಮಾಡಿದ ತಪ್ಪನ್ನು ಹೇಳಿದ್ದಕ್ಕೆ ಪರಸ್ಪರ ಕೋಪಗೊಂಡರು. ಆ ಬಗ್ಗೆ ಇಲ್ಲಿದೆ ವಿವರ.
ನಾಮನಿರ್ದೇಶನದ ವೇಳೆ ಮೊದಲು ಕಾವ್ಯಾ ಅವರು ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡರು. ಸೀಸನ್ ಆರಂಭದಿಂದ ಇಲ್ಲಿಯವರೆಗೆ ಅಶ್ವಿನಿ ಗೌಡ ಮಾಡಿದ ಕೆಟ್ಟ ಕೆಲಸಗಳ ಪಟ್ಟಿಯನ್ನು ಕಾವ್ಯ ತೆಗೆದಿಟ್ಟರು. ‘ಬಿಗ್ ಬಾಸ್ ಒಬ್ಬ ವ್ಯಕ್ತಿತ್ವದ ಆಟ. ಈ ರೀತಿಯ ವ್ಯಕ್ತಿತ್ವವನ್ನು ಗೆಲ್ಲೋದು ನನಗೆ ಇಷ್ಟವಿಲ್ಲ. ಅಶ್ವಿನಿ ಹೊರಗೆ ಹೆಣ್ಣಿನ ಪರ ಹೋರಾಡಿರಬಹುದು. ಆದರೆ, ಇಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಅಶ್ವಿನಿ ಗೌಡ 2.O ವರ್ಷನ್ ನಾಟಕ’ ಎಂದು ಕಾವ್ಯಾ ಗೌಡ ಆರೋಪಿಸಿದರು.
ಇದಕ್ಕೆ ಅಶ್ವಿನಿ ಗೌಡ ಕೌಂಟರ್ ಕೊಟ್ಟರು. ‘ಕಾವ್ಯ ಇಲ್ಲಿಯವರೆಗೆ ಹೇಗೆ ಬಂದಿದ್ದಾರೆ ಎಂದು ಇಡೀ ಕರ್ನಾಟಕ ನೋಡಿದೆ’ ಎಂದು ಹೇಳಿದರು. ಗಿಲ್ಲಿ ಸಹಾಯದಿಂದ ಕಾವ್ಯ ಇಲ್ಲಿಯವರೆಗೆ ಬಂದರು ಎಂಬುದು ಈ ವಾಕ್ಯದ ಒಳಾರ್ಥ. ಆದರೆ, ಇದನ್ನು ಕಾವ್ಯ ಒಪ್ಪಿಕೊಳ್ಳಲಿಲ್ಲ.
ಇದನ್ನೂ ಓದಿ: ‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’; ಗಿಲ್ಲಿಗೆ ವಾರ್ನ್ ಮಾಡಿ ಬಿಗ್ ಬಾಸ್ ಬಳಿ ಅಶ್ವಿನಿ ಗೌಡ ವಿಶೇಷ ಮನವಿ
ಆ ಬಳಿಕ ಅಶ್ವಿನಿ ಅವರು ತಮ್ಮ ಸರದಿಯಲ್ಲಿ ಕಾವ್ಯಾ ಅವರನ್ನು ನಾಮಿನೇಟ್ ಮಾಡಿದರು. ಈ ವೇಳೆ ಅಶ್ವಿನಿ ಗೌಡ ಅವರು ಕಾವ್ಯ ಬಗ್ಗೆ ಒಂದಷ್ಟು ಆರೋಪಗಳನ್ನು ಮಾಡಿದರು. ಇಬ್ಬರ ಮಧ್ಯೆ ವಾಕ್ಸಮರ ತಾರಕಕ್ಕೆ ಏರಿತು. ನಂತರ ಮಾತು ಏಕವಚನದ ಕಡೆ ತಿರುಗಿತು. ಪರಸ್ಪರ ಅಗೌರವ ನೀಡಿ ಇಬ್ಬರೂ ಮಾತನಾಡಲು ಆರಂಭಿಸಿದರು. ‘ನೀನು ಫ್ರೀ ಪ್ರಾಡಕ್ಟ್’ ಎಂದು ಅಶ್ವಿನಿ ಅವರು ಕಾವ್ಯಕ್ಕೆ ಹೇಳಿದರು. ಆಗ ಕಾವ್ಯ ‘ಹೋಗೇಲೆ’ ಎಂದು ಅಶ್ವಿನಿಗೆ ಹೇಳಿದರು. ನೀನು ಹೋಗಲೇ ಎಂದು ಅಶ್ವಿನಿ ತಿರುಗೇಟು ಕೊಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.