ನಾಳೆನೇ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿಗೆ ಸಿಎಂ ಪಟ್ಟ ಕೊಡಿ ಎನ್ನುತ್ತಿಲ್ಲ: ಮಾಗಡಿ ಶಾಸಕ ಬಾಲಕೃಷ್ಣ | Hc Balakrishna Supports Dk Shivakumar As Next Cm After Siddaramaiah Sat

ನಾಳೆನೇ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿಗೆ ಸಿಎಂ ಪಟ್ಟ ಕೊಡಿ ಎನ್ನುತ್ತಿಲ್ಲ: ಮಾಗಡಿ ಶಾಸಕ ಬಾಲಕೃಷ್ಣ | Hc Balakrishna Supports Dk Shivakumar As Next Cm After Siddaramaiah Sat



ಸಿದ್ದರಾಮಯ್ಯ ಅವರ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯ ಅವಕಾಶ ಸಿಗಬೇಕೆಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಐದು ವರ್ಷಗಳ ನಂತರ ಡಿಕೆಶಿಗೆ ಸಿಎಂ ಸ್ಥಾನ ಸಿಗಬೇಕೆಂದು ಹೇಳಿದ್ದಾರೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದೂ ಅವರು ಹೇಳಿದ್ದಾರೆ.

ಬೆಂಗಳೂರು ದಕ್ಷಿಣ (ಜು.11): ಸಿದ್ದರಾಮಯ್ಯ ಅವರು ನಾನೇ 5 ವರ್ಷ ಸಿಎಂ ಎಂದು ಹೇಳಿದ್ದಾರೆ. ಅವರನ್ನು ಕೆಳಗಿಳಿಸಿ ನಾಳೆಯೇ ಡಿ.ಕೆ.ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಿ ಅಂತ ನಾವು ಕೇಳಲ್ಲ. ಸಿಎಂ ಅವರು 5 ವರ್ಷ ಇರ್ತಾರೋ, 10 ವರ್ಷ ಇರ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ನಂತರ ಡಿ.ಕೆ.ಶಿವಕುಮಾರ್‌ಗೆ ಅವಕಾಶ ಕೊಡಬೇಕು ಎಂದು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 5 ವರ್ಷ ನಾನೇ ಸಿಎಂ, ಡಿಕೆಶಿಗೆ ಶಾಸಕರ ಬಲ ಕಡಿಮೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದರು. ಇಲ್ಲಿ ಬಲಾಬಲದ ಪ್ರಶ್ನೆ ಬರಲ್ಲ. ಇದು ಕಾಂಗ್ರೆಸ್ ಪಕ್ಷ, ಇಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಸಿಎಂ ಅವರು ಐದು ವರ್ಷ ಇರ್ತಾರೋ, ಹತ್ತು ವರ್ಷ ಇರ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ನಂತರ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಕೊಡಬೇಕು. ಹೈಕಮಾಂಡ್ ತೀರ್ಮಾನದ ಬಗ್ಗೆ ಮಾತನಾಡುವಷ್ಟು ಶಕ್ತಿ ನನಗಿಲ್ಲ. ಅದರ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದು ಹೇಳಿದರು.

ನಾವು ಹೇಳೋದು ಇಷ್ಟೇ, ಸಿದ್ದರಾಮಯ್ಯ ನಂತರ ನಮ್ಮ ನಾಯಕರಿಗೆ ಅವಕಾಶ ಸಿಗಬೇಕು. ಸಿಎಂ ಹೇಳಿಕೆ ವಿಚಾರದಲ್ಲಿ ಸಿಎಂಗೆ ಯಾರೂ ನೋಟಿಸ್ ಕೊಡೋಕೆ ಆಗಲ್ಲ. ಅದನ್ನೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತದೆ. ಸಿದ್ದರಾಮಯ್ಯನವರು ಉತ್ತಮವಾದ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಅವರ ನಂತರ ನಮಗೆ ಅವಕಾಶ ಸಿಗುತ್ತದೆ. ಡಿ.ಕೆ.ಶಿವಕುಮಾರ್‌ ಅವರಿಗೆ ಶಾಸಕರ ಬಲ ಇದೆಯೋ, ಇಲ್ಲವೋ ಅಂತ ನಾನು ಹೇಳಲ್ಲ. ಎಲ್ಲರಿಗೂ ಎಲ್ಲಾ ರೀತಿಯ ಬಲ ಇರೋದಿಲ್ಲ. ಸಿಎಂಗೆ ಈಗ ಸ್ವಲ್ಪ ಜಾಸ್ತಿ ಶಾಸಕರ ಬಲ ಇರಬಹುದು, ಅದರ ನಂತರದ ಸ್ಥಾನ ನಮಗಿದೆ ಎಂದು ತಿಳಿಸಿದರು.

ಮುಂದೆಯೂ ನನ್ನ ನಾಯಕತ್ವದಲ್ಲೇ ಚುನಾವಣೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಹೌದು ಅವರ ನಾಯಕತ್ವವೂ ಬೇಕು, ನಾವು ಸಿದ್ದರಾಮಯ್ಯ ಬಿಟ್ಟು ಚುನಾವಣೆ ಮಾಡೋಕೆ ಆಗುತ್ತಾ.? ಎಲ್ಲರ ನಾಯಕತ್ವವೂ ಇಲ್ಲಿ ಮುಖ್ಯ, ಡಿಕೆಶಿ, ಖರ್ಗೆ ಎಲ್ಲರ ನೇತೃತ್ವ ಬೇಕು. ಕಾಂಗ್ರೆಸ್ ಪಕ್ಷ ಸರ್ವಜನಾಂಗದ ಶಾಂತಿಯ ತೋಟ. ಒಂದು ಜಾತಿಯನ್ನ ನಂಬಿಕೊಂಡು ರಾಜಕಾರಣ ಮಾಡುವ ಪಕ್ಷ ಅಲ್ಲ. ಎಲ್ಲಾ ವರ್ಗದ ಜನರ ನಾಯಕತ್ವ ಇದಕ್ಕಿದೆ. ನಾವು ಸುರ್ಜೇವಾಲ ಜೊತೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಹಲವು ಸ್ವಾಮೀಜಿಗಳು, ಮುಖಂಡರು, ಕಾರ್ಯಕರ್ತರಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಅಭಿಪ್ರಾಯ ಇದೆ. ಪಕ್ಷಕ್ಕಾಗಿ ಅವರು ಶ್ರಮಪಟ್ಟಿದ್ದಾರೆ ಹಾಗಾಗಿ ಅವರಿಗೆ ಅವಕಾಶ ಸಿಗಬೇಕು ಎನ್ನುವುದು ಜನಜನಿತ. ಸಾರ್ವಜನಿಕರು ಈ ವಿಚಾರ ಚರ್ಚೆ ಮಾಡುತ್ತಿದ್ದಾರೆ. ಅದಕ್ಕಾಗಿ ಸಿದ್ದರಾಮಯ್ಯ ಅವರನ್ನ ಅಧಿಕಾರದಿಂದ ಕೆಳಗಿಳಿಸಿ ನಾಳೆಯೇ ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಿ ಅಂತ ನಾವು ಕೇಳಲ್ಲ. ಸಿದ್ದರಾಮಯ್ಯನವರ ನಂತರದ ಸ್ಥಾನ ಡಿ.ಕೆ.ಶಿವಕುಮಾರ್ ಅವರಿಗೆ ಸಿಗಬೇಕು. ಅದನ್ನ ಹೈಕಮಾಂಡ್ ಹೇಳಬೇಕು ಎಂದು ತಿಳಿಸಿದರು.

ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅದನ್ನ ಹೈಕಮಾಂಡ್ ನಾಯಕರು ನೋಡಿಕೊಳ್ಳುತ್ತಾರೆ. ನಮಗೂ ಮಂತ್ರಿ ಆಗಬೇಕು ಎನ್ನುವ ಆಸೆ ಇದೆ. ಆದರೆ ಇದಕ್ಕೆ ಹೈಕಮಾಂಡ್ ಒಪ್ಪಬೇಕಲ್ಲ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.



Source link

Leave a Reply

Your email address will not be published. Required fields are marked *