
<p>ಬಾಗಲಕೋಟೆ ಜಿಲ್ಲೆಯ ಕಮತಗಿ ಬಳಿ ನಡೆದ ಟ್ರ್ಯಾಕ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ಅಕ್ಕ-ತಮ್ಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇದರೊಂದಿಗೆ, ವಿಜಯನಗರ ಜಿಲ್ಲೆಯ ತಾಂಡಾಗಳಿಗೆ ಮರಳುತ್ತಿದ್ದ ಕಬ್ಬು ಕಟಾವು ಕಾರ್ಮಿಕರ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.</p><img><p><strong>ಬಾಗಲಕೋಟೆ/ವಿಜಯನಗರ (ಜ.14): </strong>ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಬಳಿ ಕಳೆದ ಜನವರಿ 10ರಂದು ಸಂಭವಿಸಿದ ಭೀಕರ ಟ್ರ್ಯಾಕ್ಟರ್ ಅಪಘಾತದ ಗಾಯಾಳುಗಳ ಪೈಕಿ ಇಂದು ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಐದಕ್ಕೆ ಏರಿಕೆಯಾಗಿದ್ದು, ಕಾರ್ಮಿಕ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.</p><img><p>ಕಳೆದ ಜನವರಿ 10ರಂದು ಕಬ್ಬು ಕಟಾವು ಕಾರ್ಮಿಕರು ಕೆಲಸ ಮುಗಿಸಿಕೊಂಡು ತಮ್ಮದೇ ಆದ ಟ್ರ್ಯಾಕ್ಟರ್ನಲ್ಲಿ ವಿಜಯನಗರ ಜಿಲ್ಲೆಯ (ಹೊಸಪೇಟೆ) ಹಗರಿಬೊಮ್ಮನಹಳ್ಳಿ ತಾಲೂಕಿನ ಆನೆಕಲ್ ತಾಂಡಾ ಹಾಗೂ ತಾಳೆಬಸಾಪುರ ತಾಂಡಾ ಕಡೆಗೆ ಮರಳುತ್ತಿದ್ದರು. ಈ ವೇಳೆ ಕಮತಗಿ ಪಟ್ಟಣದ ಬಳಿ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಟ್ರ್ಯಾಕ್ಟರ್ ಎಂಜಿನ್ನ ಬಂಪರ್ ಹಠಾತ್ ಕಟ್ ಆಗಿ ಕೆಳಗೆ ಬಿದ್ದಿದೆ. ಇದರ ಪರಿಣಾಮವಾಗಿ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಅದರ ಮೇಲೆಯೇ ಏರಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿತ್ತು.</p><img><p>ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪಾರ್ವತಿಬಾಯಿ (30) ಹಾಗೂ ಆಕೆಯ ತಮ್ಮ ಪಾಂಡು ನಾಯಕ್ (26) ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಇಂದು ಅಕ್ಕ-ತಮ್ಮ ಇಬ್ಬರೂ ಸಾವನ್ನಪ್ಪಿರುವುದು ಆ ತಾಂಡಾಗಳಲ್ಲಿ ನೀರವ ಮೌನಕ್ಕೆ ಕಾರಣವಾಗಿದೆ.</p><img><p>ಅಪಘಾತ ಸಂಭವಿಸಿದ ದಿನದಂದು ಸ್ಥಳದಲ್ಲೇ ರುಕ್ಮಿಣಿಬಾಯಿ ನಾಯಕ್ (36), ಆಕೆಯ ಪುತ್ರಿ ಶಿವಾನಿ ನಾಯಕ್ (6) ಹಾಗೂ ಪಾರ್ವತಿಬಾಯಿ ಅವರ ಪುತ್ರ ರೋಷನ್ ನಾಯಕ್ (4) ಮೃತಪಟ್ಟಿದ್ದರು. ಒಂದೇ ಕುಟುಂಬದ ತಾಯಿ-ಮಗಳು ಹಾಗೂ ಮತ್ತೊಂದು ಮಗು ಅಂದು ಬಲಿಯಾಗಿದ್ದರು. ಇಂದು ಪಾರ್ವತಿಬಾಯಿ ಮತ್ತು ಪಾಂಡು ಅವರ ಸಾವಿನೊಂದಿಗೆ ಎರಡು ಕುಟುಂಬಗಳ ಒಟ್ಟು ಐವರು ಸದಸ್ಯರು ಈ ದುರ್ಘಟನೆಯಲ್ಲಿ ಮಣ್ಣಾಗಿದ್ದಾರೆ.</p><img><p>ದುಡಿಯಲು ಹೋಗಿ ಹಸನ್ಮುಖಿಯಾಗಿ ಊರಿಗೆ ಮರಳುತ್ತಿದ್ದ ಬಡ ಕಾರ್ಮಿಕರು ಅರ್ಧದಾರಿಯಲ್ಲೇ ಹೆಣವಾಗಿರುವುದು ಅತೀವ ನೋವು ತಂದಿದೆ. ಘಟನಾ ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತೀ ವೇಗ ಅಥವಾ ಯಾಂತ್ರಿಕ ದೋಷ ಈ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಬಡ ಕಬ್ಬು ಕಾರ್ಮಿಕರ ಸಾವಿಗೆ ಜಿಲ್ಲೆಯಾದ್ಯಂತ ಸಂತಾಪ ವ್ಯಕ್ತವಾಗುತ್ತಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>
Source link
ಕಬ್ಬು ಕಟಾವು ಕಾರ್ಮಿಕರ ಟ್ರ್ಯಾಕ್ಟರ್ ಅಪಘಾತ; ಇಂದು ಅಕ್ಕ-ತಮ್ಮ ಸಾವು, ಮೃತರ ಸಂಖ್ಯೆ 5ಕ್ಕೆ ಏರಿಕೆ!