
<p>ಕರ್ನಾಟಕಕ್ಕೆ ಲಕ್ಕಿಯಾದ ಲಕ್ಕುಂಡಿ, 7ನೇ ದಿನವೂ ಉತ್ಖನನ ಮುಂದುವರಿದಿದೆ. ಈ ವೇಳೆ ಪ್ರಾಚೀನ ಇತಿಹಾಸದ ಕುರಹು ಮಾತ್ರವಲ್ಲ, ಕರ್ನಾಟಕದ ಗತವೈಭವ ಸಾರುವ ಹಲವು ವಸ್ತುಗಳು ಪತ್ತೆಯಾಗಿದೆ.</p><img><p>ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆ, ಜಿಲ್ಲಾಡಳಿತ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಗುರುವಾರ 7ನೇ ದಿನಕ್ಕೆ ಕಾಲಿಟ್ಟಿದ್ದು, ಭೂಮಿಯ ಆಳದಲ್ಲಿ ಹೂತುಹೋಗಿದ್ದ ಪ್ರಾಚೀನ ಇತಿಹಾಸದ ಕುರುಹುಗಳು ಒಂದೊಂದಾಗಿ ಹೊರಬರುತ್ತಿವೆ. ಗುರುವಾರ ಲೋಹದ ಹಣತೆ ಮತ್ತು ಮೂಳೆ ಪತ್ತೆಯಾಗಿದೆ.</p><img><p>7ನೇ ದಿನದ ಉತ್ಖನನದ ಆರಂಭದಲ್ಲಿಯೇ ವಿಶಿಷ್ಟವಾದ ಲೋಹದ ತುಂಡೊಂದು ಗೋಚರವಾಗಿದೆ. ಇದು ಹಣತೆಯ ಆಕಾರದಲ್ಲಿದ್ದು, ಹಿಂದೆ ದೇವಸ್ಥಾನಗಳಲ್ಲಿ ಅಥವಾ ಶುಭ ಕಾರ್ಯಗಳಲ್ಲಿ ಕರ್ಪೂರ ಬೆಳಗಲು ಬಳಸುತ್ತಿದ್ದ ಉಪಕರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ. ಪ್ರಸ್ತುತ ಸಿಬ್ಬಂದಿ ಇದನ್ನು ಸ್ವಚ್ಛಗೊಳಿಸಿ ಸುರಕ್ಷಿತವಾಗಿರಿಸಿದ್ದು, ಹೆಚ್ಚಿನ ಸಂಶೋಧನೆಯ ನಂತರ ಇದರ ಕಾಲಮಾನದ ಬಗ್ಗೆ ಸ್ಪಷ್ಟತೆ ಸಿಗಲಿದೆ. ಇದರೊಂದಿಗೆ ಮತ್ತೆ ಎರಡು ಇಂಚು ಉದ್ದದ ಮೂಳೆಯ ತುಂಡು ಪತ್ತೆಯಾಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ. ಬುಧವಾರ ಐದು ಸಣ್ಣ ಮೂಳೆಯ ತುಂಡುಗಳು ಪತ್ತೆಯಾಗಿದ್ದವು.</p><img><p>ಉತ್ಖನನ ಕಾರ್ಯದಲ್ಲಿ 35 ಜನ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಆದರೆ, ಮಣ್ಣು ಮತ್ತು ಕಲ್ಲಿನ ಕೆಲಸ ಮಾಡುವುದರಿಂದ ಕಾರ್ಮಿಕರ ಬೆರಳುಗಳು ಸವೆದುಹೋಗಿದ್ದು, ಬಯೋಮೆಟ್ರಿಕ್ ಮಷಿನ್ನಲ್ಲಿ ಹಾಜರಾತಿ ದಾಖಲಿಸಲು ಹೈರಾಣಾಗುತ್ತಿದ್ದಾರೆ. ಕೈಗಳನ್ನು ಕಲ್ಲು, ಮಣ್ಣಿಗೆ ಉಜ್ಜಿದರೂ ಬೆರಳಚ್ಚು ಮೂಡದ ಕಾರಣ ಕೊನೆಗೆ ಅಧಿಕಾರಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆಯುವ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ.</p><img><p>ಭೂಮಿಯಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಲಕ್ಕುಂಡಿ ಗ್ರಾಮ ಪಂಚಾಯಿತಿಯು ಗ್ರಾಮದ ಮಾರುತಿ ನಗರದಲ್ಲಿ 30×40 ಅಳತೆಯ ನಿವೇಶನ ನೀಡಲು ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿದೆ.</p><img><p>ಬಾಲಕ ಪ್ರಜ್ವಲ್ ವಯಸ್ಕನಾದ ಮೇಲೆ ಅವನಿಗೆ ನೌಕರಿ ನೀಡುವ ಬಗ್ಗೆ ಮತ್ತು ಮನೆ ಕಟ್ಟಲು ವಿಶೇಷ ಅನುದಾನಕ್ಕೆ ಸಚಿವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಮಕ್ಕಳಲ್ಲಿ ಪ್ರಾಮಾಣಿಕತೆ ಬೆಳೆಸಲು ಏಳು ಶಾಲೆಗಳಲ್ಲಿ ಪ್ರಜ್ವಲ್ ಭಾವಚಿತ್ರ ಅಳವಡಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಕುಟುಂಬಸ್ಥರಿಗೆ ಸಂತಸ ಉಂಟು ಮಾಡಿದೆ.</p><h2>ಶಾಲೆಗಳಲ್ಲಿ ಪ್ರಜ್ವಲ್ ಭಾವಚಿತ್ರ</h2>
Source link
ಕರ್ನಾಟಕಕ್ಕೆ ಲಕ್ಕಿಯಾದ ಲಕ್ಕುಂಡಿ, 7ನೇ ದಿನ ಉತ್ಖನನದಲ್ಲಿ ಲೋಹದ ಹಣತೆ,ಮೂಳೆ ಪತ್ತೆ