ಬೆಂಗಳೂರು, ಫೆಬ್ರವರಿ 03: ಪವಿತ್ರ ಮುಸ್ಲಿಮರ ಹಬ್ಬ ರಂಜಾನ್ ಕರ್ನಾಟಕದ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯದಲ್ಲಿ ಪರಿಷ್ಕರಿಸಿರೋದಕ್ಕೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಹಿಂದೂಗಳ ಯಾವುದೇ ಹಬ್ಬಗಳಿಗೆ ಶಾಲಾ ಸಮಯ ಬದಲಾವಣೆಯಾಗುವುದಿಲ್ಲ. ಇದು ಕಾನೂನು ಸಮಾನತೆಯ ಉಲ್ಲಂಘನೆ, ಈ ಕೂಡಲೇ ಸುತ್ತೋಲೆ ವಾಪಸ್ ಪಡೆಯಬೇಕು. ನವರಾತ್ರಿ, ಗಣೇಶ ಚತುರ್ಥಿಯಂತಹ ಹಬ್ಬಗಳ ಸಂದರ್ಭ ಶಾಲಾ ಸಮಯದಲ್ಲಿ ಯಾವುದೇ ಬದಲಾವಣೆ ಇರಲ್ಲ. ಹೀಗಾಗಿ ತಾರತಮ್ಯ ಬೇಡ ಎಂಬ ಒತ್ತಾಯ ಕೇಳಿ ಬಂದಿದೆ.
ರಂಜಾನ್ ಹಿನ್ನೆಲೆ ರಾಜ್ಯದ ಉರ್ದು ಮತ್ತು ಪ್ರಾಥಮಿಕ ಶಾಲೆಯ ಅವಧಿ ಬದಲಾವಣೆ ಮಾಡಿ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿತು. ಈ ಅವಧಿಯಲ್ಲಿ ಬೆಳಿಗ್ಗೆ 8ಕ್ಕೆ ಶಾಲೆ ಆರಂಭವಾಗಿ ಮಧ್ಯಾಹ್ನ 12:45ಕ್ಕೆ ಶಾಲೆಯ ಅವಧಿ ಮುಕ್ತಾಯಕ್ಕೆ ಸೂಚಿಸಿತ್ತು. 2025-26ನೇ ಸಾಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಮಾಧ್ಯಮದ ಕಿರಿಯ, ಹಿರಿಯ ಹಾಗೂ ಶಾಲಾ ಕಾಲೇಜುಗಳು ರಂಜಾನ್ ತಿಂಗಳ ಪ್ರಾರಂಭವಾದ ದಿನಾಂಕದಿಂದ 2026ರ ಮಾರ್ಚ್ 20ರವರೆಗೆ ಶಾಲಾ ಅವಧಿಯ ಎಲ್ಲಾ ಸರ್ಕಾರಿ ಬದಲಾವಣೆಗಳನ್ನು ಮಾಡಲಾಗಿದೆ. ಈ ನಿರ್ಧಾರವೀಗ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕರ್ನಾಟಕದ ಉರ್ದು ಪ್ರಾಥಮಿಕ ಶಾಲೆಯ ಅವಧಿ ಬದಲಾವಣೆ, ಕಾರಣವೇನು?
ಸುತ್ತೋಲೆ ಬಗ್ಗೆ ಶಾಸಕ ಯತ್ನಾಳ್ ಕಿಡಿ
ಇನ್ನು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರಿಗೆ ಸುಮ್ಮನೆ ಒಂದು ತಿಂಗಳು ರಜಾ ಕೊಟ್ಟು ಬಿಡುವುದು ಒಳ್ಳೆಯದು. ರಂಜಾನ್, ದೀಪಾವಳಿ, ಗಣೇಶ ಚತುರ್ಥಿ ಬೇರೆ ಅಂತಾ ಕಾಂಗ್ರೆಸ್ ನಲ್ಲಿ ವಿಷಬೀಜ ಬಿತ್ತುತ್ತಿದೆ. ಸಿದ್ದರಾಮಯ್ಯ ಸರ್ಕಾರ ಎಲ್ಲಿ ಸಿಗುತ್ತದೋ ಅಲ್ಲಿ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ. ಕೊಡಗಿನ ಶಾಸಕ ಹಿಂದೂ ಸಮಾಜೋತ್ಸವ ಹಿನ್ನೆಲೆ ರಸ್ತೆಯಲ್ಲಿ ಹೋಗುವಾಗ ಹಿಂದೂ ಕಾರ್ಯಕರ್ತರು ಕರೆದಿದ್ದಕ್ಕೆ ಹೋಗಿ ಶಾಲು ಹಾಕಿಸಿಕೊಂಡಿದ್ದಕ್ಕೂ ಹೈಕಮಾಂಡ್ ನಲ್ಲಿ ಚರ್ಚೆಯಾಗುತ್ತಿದೆ. ಸಮಾನತೆ ಶಬ್ದಕ್ಕೆ ಅರ್ಥವಿಲ್ಲದ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಸುತ್ತೋಲೆ ಹೊರಡಿಸಿದೆ, ಇದು ಅತ್ಯಂತ ಹೇಯ ಕೆಲಸ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 7:21 pm, ಮಂಗಳವಾರ, 3 ಫೆಬ್ರವರಿ 26