
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಬಡ ಕುಟುಂಬವೊಂದು ನ್ಯಾಯಕ್ಕಾಗಿ ಕಳೆದ ಎರಡು ವರ್ಷಗಳಿಂದ ಪೊಲೀಸ್ ಠಾಣೆಗಳ ಮೆಟ್ಟಿಲೇರಿದರೂ ಸ್ಪಂದನೆ ಸಿಗದೆ ತೀವ್ರ ದುರಂತಕ್ಕೆ ತಲುಪಿದ ಘಟನೆ ಬೆಳಕಿಗೆ ಬಂದಿದೆ. ಮನೆ ಕಟ್ಟಿಕೊಳ್ಳುವ ವಿಚಾರದಲ್ಲಿ ಕುಟುಂಬದೊಳಗಿನ ತಕರಾರಿನಿಂದ ಆರಂಭವಾದ ಈ ಪ್ರಕರಣ, ಕೊನೆಗೆ ಒಬ್ಬ ಯುವತಿಯ ಸಾವಿಗೂ ಕಾರಣವಾಗಿದೆ.
ಬಂಕಾಪುರ ಪಟ್ಟಣದ ಗುಡ್ಡಪ್ಪ ಎಂಬ ಬಡ ವ್ಯಕ್ತಿ ಈ ದುರಂತದ ಕೇಂದ್ರಬಿಂದು. 2021ರಲ್ಲಿ ಸಂಭವಿಸಿದ ಭಾರೀ ಅತಿವೃಷ್ಟಿಯಿಂದಾಗಿ ಗುಡ್ಡಪ್ಪ ಅವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಮನೆ ಪುನರ್ ನಿರ್ಮಾಣಕ್ಕಾಗಿ ₹5 ಲಕ್ಷ ಪರಿಹಾರವನ್ನು ಮಂಜೂರು ಮಾಡಲಾಗಿದ್ದು, ಮೊದಲ ಹಂತವಾಗಿ ₹1 ಲಕ್ಷ ಹಣವೂ ಅವರ ಖಾತೆಗೆ ಜಮೆಯಾಗಿದೆ.