
<p>ಕಲ್ಯಾಣಿ ಚಾಲುಕ್ಯರ ಟಂಕಸಾಲೆಯಾಗಿದ್ದ ಲಕ್ಕುಂಡಿಯಲ್ಲಿ ಅಪಾರ ನಿಧಿ ಅಡಗಿದೆ ಎಂದು ನಂಬಲಾಗಿದೆ. ಈ ನಿಧಿಯನ್ನು 7 ಹೆಡೆ ಸರ್ಪಗಳು ಕಾಯುತ್ತಿದ್ದು, ಮಹಾದೇವಿ ಎಂಬ ಮಹಿಳೆ ಈ ಹಾವುಗಳೊಂದಿಗೇ ವಾಸಿಸುತ್ತಿದ್ದಳು ಎಂಬ ಮಾಹಿತಿಯನ್ನ ಹಿರಿಯ ವ್ಯಕ್ತಿ ಬಿಚ್ಚಿಟ್ಟಿದ್ದಾರೆ.</p><img><p><strong>ಗದಗ (ಫೆ.04): ಕ</strong>ಲ್ಯಾಣಿ ಚಾಲುಕ್ಯರ ಬಂಗಾರದ ನಾಣ್ಯಗಳ ಟಂಕಸಾಲೆ, ಶಿಲ್ಪಕಲೆಗಳ ತೊಟ್ಟಿಲು, ಕಲೆಗಳ ಬೀಡು ಎಂದು ಪ್ರಸಿದ್ಧಿಯಾದ ಲಕ್ಕುಂಡಿ ಕೇವಲ ಕಲ್ಲಿನ ಕೆತ್ತನೆಗಳಿಗಷ್ಟೇ ಸೀಮಿತವಾಗಿಲ್ಲ. ಇದರ ಮಣ್ಣಿನ ಅಡಿಯಲ್ಲಿ ಅಡಗಿರುವ ಅಗಾಧ ಸಂಪತ್ತು ಮತ್ತು ಆ ಸಂಪತ್ತನ್ನು ಕಾಯುತ್ತಿರುವ ನಾಗರಹಾವುಗಳ ರಹಸ್ಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಲಕ್ಕುಂಡಿಯ 70 ವರ್ಷದ ಹಿರಿಯರಾದ ವಿರೂಪಾಕ್ಷಪ್ಪ ಯಾವಗಲ್ ಅವರು ಹಂಚಿಕೊಂಡಿರುವ ಸ್ಫೋಟಕ ಮಾಹಿತಿ ಈಗ ಇಡೀ ರಾಜ್ಯದ ಕುತೂಹಲ ಕೆರಳಿಸಿದೆ.</p><img><p>ಐತಿಹಾಸಿಕವಾಗಿ ಲಕ್ಕುಂಡಿಯು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅತ್ಯಂತ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಇಲ್ಲಿನ ‘ಲಕ್ಕುಂಡಿ ಟಂಕಸಾಲೆ’ಯಲ್ಲಿ ಚಿನ್ನದ ನಾಣ್ಯಗಳನ್ನು (ಗದ್ಯಾಣ) ಮುದ್ರಿಸಲಾಗುತ್ತಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಕಾರಣಕ್ಕಾಗಿಯೇ ಲಕ್ಕುಂಡಿಯ ಬೀದಿ ಬೀದಿಗಳಲ್ಲಿ ಚಿನ್ನ ಮತ್ತು ನಿಧಿ ಅಡಗಿದೆ ಎಂಬ ನಂಬಿಕೆ ಬಲವಾಗಿದೆ.</p><img><p>ವಿರೂಪಾಕ್ಷಪ್ಪ ಯಾವಗಲ್ ಅವರ ಪ್ರಕಾರ, ಲಕ್ಕುಂಡಿಯ ಜೈನ ಬಸದಿ ಮತ್ತು ನಾಗನಾಥ ದೇವಾಲಯದ ಆವರಣದಲ್ಲಿ ಇಂದಿಗೂ ದೈತ್ಯ ಸರ್ಪಗಳ ವಾಸವಿದೆ. ಇಲ್ಲಿನ ದೇವಸ್ಥಾನಗಳ ಅಡಿಯಲ್ಲಿ ಅಪಾರವಾದ ದೈವ ನಿಧಿ ಇದೆ. ಈ ನಿಧಿಯನ್ನು ಕಾಯುವುದಕ್ಕಾಗಿಯೇ ನೂರಾರು ನಾಗರಹಾವುಗಳು ಇಲ್ಲಿ ಬೀಡುಬಿಟ್ಟಿವೆ.</p><img><p>ನಾವು ಕಣ್ಣಾರೆ ಏಳು ಹೆಡೆಯ ಸರ್ಪಗಳನ್ನು ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ. ವಿಶೇಷವೆಂದರೆ, ಜೈನ ಬಸದಿಯ ಸಮೀಪವಿದ್ದ ಮಹದೇವಿ ಎಂಬ ಮಹಿಳೆಯ ಮನೆಗೆ ಈ ಹಾವುಗಳು ಬರುತ್ತಿದ್ದರೂ, ಅವರಿಗಾಗಲೀ ಅಥವಾ ಸ್ಥಳೀಯರಿಗಾಗಲೀ ಎಂದೂ ತೊಂದರೆ ಕೊಟ್ಟಿಲ್ಲವಂತೆ. ಈ ಸರ್ಪಗಳು ಕೇವಲ ದೈವದತ್ತವಾದ ನಿಧಿಯನ್ನು ರಕ್ಷಿಸುತ್ತಿವೆ ಎಂಬುದು ಸ್ಥಳೀಯರ ಅಚಲ ನಂಬಿಕೆ.</p><img><p>ಒಂದು ಕಾಲದಲ್ಲಿ ಲಕ್ಕುಂಡಿಯಲ್ಲಿ 7 ಭವ್ಯ ಜೈನ ಬಸದಿಗಳ ಸಂಕೀರ್ಣವಿತ್ತು. ಕಾಲಾನಂತರದಲ್ಲಿ ಮತ್ತು ದಾಳಿಗಳ ಪರಿಣಾಮವಾಗಿ ಇಂದು ಕೇವಲ 3 ಬಸದಿಗಳು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದ 4 ಬಸದಿಗಳು ಸಂಪೂರ್ಣ ಹಾಳಾಗಿದ್ದು, ಜೈನ ತೀರ್ಥಂಕರರನ್ನು ಕೂರಿಸುತ್ತಿದ್ದ ಪೀಠಗಳು ಇಂದಿಗೂ ಅಲ್ಲಿನ ಐತಿಹಾಸಿಕ ಕುರುಹುಗಳಾಗಿ ಸಾಕ್ಷಿ ಹೇಳುತ್ತಿವೆ. ನಾಗನಾಥ ದೇವಾಲಯದ ಪಕ್ಕದಲ್ಲಿರುವ ಈ ಶಿಥಿಲಗೊಂಡ ಪ್ರದೇಶದಲ್ಲಿಯೇ ಹಾವುಗಳ ಓಡಾಟ ಹೆಚ್ಚಿದೆ ಎನ್ನಲಾಗಿದೆ.</p><img><p>ಇಲ್ಲಿನ ಬೀದಿಗಳನ್ನು ಅಗೆದು ನೋಡಿದರೆ ಖಂಡಿತವಾಗಿಯೂ ನಿಧಿ ಸಿಗುತ್ತದೆ. ಆದರೆ ಆ ನಿಧಿಯ ಮೇಲಿರುವ ಸರ್ಪಗಳ ಕಾವಲು ಮತ್ತು ದೈವ ಭಯದಿಂದಾಗಿ ಯಾರೂ ಕೂಡ ಅಗೆಯುವ ಧೈರ್ಯ ಮಾಡಿಲ್ಲ’ ಎನ್ನುತ್ತಾರೆ ವಿರೂಪಾಕ್ಷಪ್ಪ ಅಜ್ಜ. ಇತಿಹಾಸದ ಶ್ರೀಮಂತಿಕೆ ಮತ್ತು ಅತೀಂದ್ರಿಯ ನಂಬಿಕೆಗಳ ನಡುವೆ ಲಕ್ಕುಂಡಿ ಇಂದು ಪ್ರವಾಸಿಗರನ್ನು ಮಾತ್ರವಲ್ಲದೆ, ಇತಿಹಾಸ ಸಂಶೋಧಕರನ್ನೂ ತನ್ನತ್ತ ಸೆಳೆಯುತ್ತಿದೆ.</p>
Source link
ಲಕ್ಕುಂಡಿ ಸರ್ಪಗಳೊಂದಿಗೆ ವಾಸವಿದ್ದ ಮಹಾದೇವಿ ಮನೆ ತೋರಿಸಿದ ಅಜ್ಜ; ಇಲ್ಲಿರೋ ನಿಧಿ 7 ಹೆಡೆ ಸರ್ಪ ಕಾಯೋದು ನೋಡಿದ್ದೇನೆ!