
ಶಿವಮೊಗ್ಗ ನಗರವನ್ನು ಹಸಿರಾಗಿಸುವ ಮತ್ತು ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ, ಸೂಡಾ 43 ಕೋಟಿ ರು. ವೆಚ್ಚದಲ್ಲಿ 15 ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಹೂಳು ತೆಗೆಯುವುದು, ಸುತ್ತಲೂ ಗಿಡಗಳನ್ನು ನೆಡುವುದು ಮತ್ತು ಕೆಲವು ಕೆರೆಗಳನ್ನು ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಸೇರಿದೆ.
ಶಿವಮೊಗ್ಗ: ಪರಿಸರ ಸಂರಕ್ಷಣೆ ಮತ್ತು ನಗರವನ್ನು ಸುಂದರ ಹಾಗೂ ಹಸಿರಾಗಿಸುವ ಉದ್ದೇಶದಿಂದ 43 ಕೋಟಿ ರು. ವೆಚ್ಚದಲ್ಲಿ 15 ಕೆರೆಗಳನ್ನು ಸೂಡಾ ವ್ಯಾಪ್ತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.
ಐಲ್ಯಾಂಡ್ ಮಾದರಿಯಲ್ಲಿ ಕೆರೆಗಳ ಅಭಿವೃದ್ಧಿ
ಬುಧವಾರ ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿ ಬರುವ ಆಲ್ಕೊಳ ಗ್ರಾಮದ ಸರ್ವೇ ನಂ 110ರ ಕೆರೆ ಪ್ರದೇಶದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಹಂಚಿಕೊಂಡು ಮಾತನಾಡಿ, ಕೆರೆಯಲ್ಲಿ ಹೂಳು ತೆಗೆಸಿ, ಸುತ್ತಲೂ ಬೇಲಿ ಹಾಕಿಸಿ, ಬಂಡಿಂಗ್ ಮಾಡುವುದು, ಜೊತೆಗೆ ಕೆರೆ ಸುತ್ತಲೂ ಗಿಡಗಳನ್ನು ನೆಡಲಾಗುವುದು. ಮಕ್ಕಳಿಗೆ ಆಟಿಕೆಗಳನ್ನು ಅಳವಡಿಸಲಾಗುವುದು. ಚರಂಡಿ ನೀರು ಕೆರೆಗಳಿಗೆ ಬರುವುದನ್ನು ತಪ್ಪಿಸಲು ಕ್ರಮ ವಹಿಸಲಾಗುವುದು. ಕೆಲವು ಕೆರೆಗಳನ್ನು ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಕೆರೆಗಳ ಅಭಿವೃದ್ಧಿಯಿಂದ ಪರಿಸರ ಸಂರಕ್ಷಣೆಯೊಂದಿಗೆ ಅಂತರ್ಜಲ ಮಟ್ಟವೂ ಹೆಚ್ಚಲಿದೆ. ವಾತಾವರಣವೂ ಉತ್ತಮವಾಗಿರಲಿದೆ ಎಂದು ತಿಳಿಸಿದರು.
ಕೆರೆಗಳ ಅಭಿವೃದ್ಧಿಗೆ ಟೆಂಡರ್ ಆಹ್ವಾನ
3.12 ಕೋಟಿ ರು. ವೆಚ್ಚದಲ್ಲಿ ಆಲ್ಕೊಳದ ಸ. ನಂ 73 ರಲ್ಲಿ 1 ಕೆರೆ, ನವುಲೆಯ ಸ.ನಂ 110 ಮತ್ತು 88ರಲ್ಲಿ 2 ಕೆರೆಗಳು, ಮಲ್ಲಿಗೇನಹಳ್ಳಿಯ ಸ.ನಂ 30ರಲ್ಲಿ 1 ಕೆರೆ, 2.24 ಕೋಟಿ ರು. ವೆಚ್ಚದಲ್ಲಿ ಬೊಮ್ಮನಕಟ್ಟೆ ಗ್ರಾಮದ ಸ.ನಂ.102ರಲ್ಲಿ 2 ಎಕರೆ 11 ಗುಂಟೆ ವಿಸ್ತೀರ್ಣದ ಕೆರೆ, ಆಲ್ಕೊಳ ಗ್ರಾಮದ ಸ.ನಂ 5ರಲ್ಲಿ 14 ಎಕರೆ 9 ಗುಂಟೆ ವಿಸ್ತೀರ್ಣದ 1 ಕೆರೆ, ಕಾಶಿಪುರ ಸ.ನಂ 62ರಲ್ಲಿ 7 ಎ 32 ಗು. ವಿಸ್ತೀರ್ಣದ 01 ಕೆರೆ, ಮಲ್ಲಿಗೇನಹಳ್ಳಿ ಗ್ರಾಮದ ಸ.ನಂ.25ರಲ್ಲಿ 4 ಎಕರೆ 24 ಗುಂಟೆ, ಮತ್ತೂರು ಗ್ರಾಮದ ಸ.ನಂ.793ರಲ್ಲಿ 1 ಕೆರೆ, ಭದ್ರಾವತಿ ತಾಲೂಕಿನ ಜನ್ನಾಪುರ ಗ್ರಾಮದ ಸ.ನಂ 70ರಲ್ಲಿ 45 ಎಕರೆ 20 ಗುಂಟೆ 1 ಕೆರೆ, ಭದ್ರಾವತಿ ತಾಲೂಕಿನ ಉಜ್ಜಯನಿಪುರ ಸ.ನಂ.13ರಲ್ಲಿ 6 ಎಕರೆ 18 ಗುಂಟೆಯಲ್ಲಿ 1 ಕೆರೆ ಸೇರಿ ಒಟ್ಟು 10 ಕೆರೆಗಳ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ದೇವಕಾತಿಕೊಪ್ಪ ಗ್ರಾಮದ ಸ.ನಂ 47ರಲ್ಲಿ 22 ಎ 30 ಗು. 01 ಕೆರೆ, ಚನ್ನಮುಂಬಾಪುರ ಗ್ರಾಮ ಸ.ನಂ.11ರಲ್ಲಿ 10ಎ 23ಗು, ಬೊಮ್ಮನಕಟ್ಟೆ ಸ.ನಂ.114ರಲ್ಲಿ 24 ಎ. 14 ಗುಂಟೆಯಲ್ಲಿ 01, ಆಲ್ಕೊಳ ಗ್ರಾಮದ ಸ.ನಂ. 10ರಲ್ಲಿ 1 ಎ. 2 ಗುಂಟೆಯಲ್ಲಿ 1, ಭದ್ರಾವತಿ ತಾಲೂಕಿನ ಹೊಸೂರು-ಸಿದ್ದಾಪುರ ಗ್ರಾಮದ ಸ.ನಂ 110ರಲ್ಲಿ 24ಎ. 19 ಗುಂಟೆಯಲ್ಲಿ 1 ಕೆರೆ ಒಟ್ಟು 5 ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ತಾಂತ್ರಿಕ ಮಂಜೂರಾತಿಗೆ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಸೂಡಾ ವತಿಯಿಂದ ಕೈಗೊಳ್ಳಲು ಉದ್ದೇಶಿಸಿರುವ ಪ್ರಾಧಿಕಾರದ ಮಾಲೀಕತ್ವದ ನಿದಿಗೆ ಗ್ರಾಮದ ಸ.ನಂ25ರ 3 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆಯ ಅಭಿವೃದ್ಧಿ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲು ಆಯುಕ್ತಾಲಯಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಒಟ್ಟು 32 ಎಕರೆ 21 ಗುಂಟೆ ಪ್ರದೇಶದಲ್ಲಿ ವಸತಿ ಬಡಾವಣೆ
ಗೋಪಿಶೆಟ್ಟಿ ಗ್ರಾಮದ ವಿವಿಧ ಸರ್ವೇ ನಂ.ಗಳಲ್ಲಿ ಒಟ್ಟು 3 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಪಡೆಯಲು ಇಲಾಖೆಗೆ ಸಲ್ಲಿಸಲಾಗಿರುತ್ತದೆ. ನಿದಿಗೆ ಹೋಬಳಿ ಊರಗಡೂರು ಗ್ರಾಮದ ಉದ್ದೇಶಿತ ವಸತಿ ಬಡಾವಣೆಯಲ್ಲಿ ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಸಂಬಂಧ ಪೂರ್ವಾನುಮತಿಗೆ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭದ್ರಾವತಿ ತಾಲೂಕಿನ ಕಸಬಾ ಗ್ರಾಮದಲ್ಲಿ ಒಟ್ಟು 32 ಎಕರೆ 21 ಗುಂಟೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: 59 ದಿನಗಳ ಬಳಿಕ ಕೊನೆಗೂ ಹುತ್ತೂರು, ಶ್ಯಾನಡ್ರಹಳ್ಳಿ ಕೆರೆಗೆ ನೀರು ಬಂತು; ರೈತರಲ್ಲಿ ಸಂತಸ
ಇತ್ತೀಚೆಗೆ ನಗರದಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದು, ನಗರವನ್ನು ಹಸಿರಾಗಿ ಇಟ್ಟುಕೊಳ್ಳುವುದು ಅತಿ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪಾರ್ಕ್ಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ಹಿಂದೆ 40 ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಇದೀಗ 50 ಪಾರ್ಕ್ಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸ್ಥಳೀಯ ಜನ ಪ್ರತಿನಿಧಿಗಳು, ಬಡಾವಣೆಗಳ ನಿವಾಸಿಗಳು ಹಾಜರಿದ್ದರು.
ಇದನ್ನೂ ಓದಿ: ಭತ್ತದ ಗದ್ದೆಯಲ್ಲಿ ಹಳದಿ ಚಿನ್ನ ಬೆಳೆಯುತ್ತಿರುವ ತುಂಗಭದ್ರೆ ಒಡಲಿನ ರೈತರು; ಕಡಿಮೆ ನೀರು, ಅಧಿಕ ಲಾಭ