
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ವಿದೇಶಿ ಶಕ್ತಿಗಳೊಂದಿಗೆ ನಂಟು ಮತ್ತು ದೇಶವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲು ‘ವಾಸ್ತವಿಕ ನಿರ್ಣಯ’ ಮಂಡಿಸಲು ನೋಟಿಸ್ ನೀಡಿದ್ದಾರೆ. ಇಂತ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ
ನವದೆಹಲಿ: ಅಮೆರಿಕ ವ್ಯಾಪಾರ ಒಪ್ಪಂದ, ಎಪ್ಸ್ಟೀನ್ ಪೈಲ್, ಜ. ಎಂ.ಎಂ. ನರವಣೆಯವರ ಪುಸ್ತಕ ಸೇರಿದಂತೆ ಹಲವು ವಿಚಾರಗಳಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸರ್ಕಾರದ ನಡುವಿನ ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೇ, ರಾಹುಲ್ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸುವಂತೆ ಹಾಗೂ ಮುಂದಿನ ಯಾವುದೇ ಚುನಾವಣೆಯಲ್ಲಿ ಅವರು ಸ್ಪರ್ಧಿಸದಂತೆ ಕ್ರಮ ಕೈಗೊಳ್ಳಬೇಕೆಂದು ಕೋರಿ ‘ವಾಸ್ತವಿಕ ನಿರ್ಣಯ’ ಅಥವಾ ‘ವಸ್ತುನಿಷ್ಠ ನಿರ್ಣಯ’ವನ್ನು (ಸಬ್ಸ್ಟಾನ್ಷಿಯಲ್ ಮೋಷನ್) ಮಂಡಿಸಲು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮುಂದಾಗಿದ್ದಾರೆ. ಈ ಸಂಬಂಧ ಗುರುವಾರ ಲೋಕಸಭೆಗೆ ನೋಟಿಸ್ ಸಲ್ಲಿಸಿದ್ದಾರೆ.
ಈ ಮುನ್ನ ರಾಹುಲ್ ವಿರುದ್ಧ ‘ಹಕ್ಕುಚ್ಯುತಿ ನಿರ್ಣಯ’ ಮಂಡಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಇದರ ಬದಲು ‘ವಾಸ್ತವಿಕ ನಿರ್ಣಯ’ ಮಂಡಿಸಲು ಬಿಜೆಪಿ ಉದ್ದೇಶಿಸಿ, ತನ್ನ ಅಸ್ತ್ರ ಬದಲಿಸಿದೆ.
ಪ್ರಸ್ತುತ ‘ಭಾರತದ ಆಂತರಿಕ ವಿಚಾರಗಳಲ್ಲಿ ಕೈ ಆಡಿಸಿದ್ದ ಸೊರೋಸ್ ಫೌಂಡೇಶನ್, ಫೋರ್ಡ್ ಫೌಂಡೇಶನ್, ಅಮೆರಿಕದ ಯುಎಸ್ಎಐಡಿ (ಯುಎಸ್ ಏಡ್) ಜತೆ ರಾಹುಲ್ ನಂಟು ಹೊಂದಿದ್ದಾರೆ. ಥಾಯ್ಲೆಂಡ್, ಕಾಂಬೋಡಿಯಾ, ವಿಯೆಟ್ನಾಂ, ಅಮರಿಕ ಮೊದಲಾದ ದೇಶಗಳಿಗೆ ಆಗಾಗ ಪ್ರವಾಸ ಕೈಗೊಳ್ಳುತ್ತಿದ್ದು, ದೇಶವಿರೋಧಿ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದಾರೆ’ ಎಂದು ಆರೋಪಿಸಿ ದುಬೆ ನೋಟಿಸ್ ಸಲ್ಲಿಸಿದ್ದಾರೆ.
ಆದರೆ ರಾಹುಲ್ ಇದಕ್ಕೆ ಕಿಡಿಕಾರಿದ್ದು, ‘ಕೇಸಾದರೂ ಹಾಕಿ, ಹಕ್ಕುಚ್ಯುತಿಯಾದರೂ ಮಂಡಿಸಿ. ರೈತ ಪರ ಹೋರಾಟ ನಿಲ್ಲಿಸಲ್ಲ’ ಎಂದಿದ್ದಾರೆ. ‘ಇಂಥ ನೋಟಿಸ್ಗಳಿಗೆಲ್ಲ ನಾವು ಹೆದರಲ್ಲ. ಬೇಕಿದ್ದರೆ ನಮ್ಮನ್ನು ಗಲ್ಲಿಗೇರಿಸಿಬಿಡಿ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆಕ್ರೋಶ ಹೊರಹಾಕಿದ್ದಾರೆ.
ದುಬೆ ಆರೋಪವೇನು?:
‘ರಾಹುಲ್ ಗಾಂಧಿ ವಿದೇಶಿ ಶಕ್ತಿಗಳೊಡನೆ ಸಂಪರ್ಕ ಹೊಂದಿರುವಂತಿದೆ. ರಾಹುಲ್ ಅವರಿಗೆ ಯಾರು ಹಣಕಾಸು ಒದಗಿಸುತ್ತಿದ್ದಾರೆ? ದೇಶವನ್ನು ನಾಶಪಡಿಸುವಂತೆ ಪ್ರೋತ್ಸಾಹ ಕೊಡುತ್ತಿರುವವರು ಯಾರು? ನರವಣೆಯವರ ಅಪ್ರಕಟಿತ ಪುಸ್ತಕ ರಾಹುಲ್ಗೆ ಹೇಗೆ ಸಿಕ್ಕಿತು?’ ಎಂದು ದುಬೆ ಪ್ರಶ್ನಿಸಿದ್ದಾರೆ.
‘ಸರ್ಕಾರವನ್ನು ಅವಹೇಳನ ಮಾಡುವ ವಿಷಯವನ್ನಿಟ್ಟುಕೊಂಡು ರಾಹುಲ್ ವಿವಾದ ಸೃಷ್ಟಿಸಲು ಯತ್ನಿಸುತ್ತಿರುವುದು ಮೊದಲೇನಲ್ಲ. ರಕ್ಷಣೆ, ಆರ್ಥಿಕತೆ, ವಾಣಿಜ್ಯ, ವಿದೇಶಾಂಗ ವ್ಯವಹಾರ.. ಯಾವುದೇ ವಿಷಯ ಇರಲಿ, ಸಂಸತ್ತಿನಲ್ಲಿ ಮತ್ತು ಇತರ ಸಾರ್ವಜನಿಕ ವೇದಿಕೆಗಳಲ್ಲಿ ಆಧಾರರಹಿತ ಮತ್ತು ಅನೈತಿಕ ಅಂಶಗಳನ್ನು ಎತ್ತುವ ಮೂಲಕ ಸಾರ್ವಜನಿಕ ಭಾವನೆಗಳನ್ನು ಕೆರಳಿಸುವ ಅಸಾಧಾರಣ ಕೌಶಲ್ಯ ರಾಹುಲ್ಗಿದೆ. ಲೋಕಸಭೆಯು ಅವರ ಸದಸ್ಯತ್ವವನ್ನು ತಿರಸ್ಕರಿಸಬೇಕು’ ಎಂದು ನಿಶಿಕಾಂತ್ ದುಬೆ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
‘ರಾಹುಲ್ ಗಾಂಧಿಯವರ ಇಂತಹ ದಂಗೆಕೋರ ಮನೋಭಾವದ ಮೂಲವೆಂದರೆ, ಅವರು ಸೊರೋಸ್ ಫೌಂಡೇಶನ್ನ ಸಕ್ರಿಯ ಮಾರ್ಗವಾಗಿರುವುದು. ಈ ಫೌಂಡೇಶನ್ ವಿಶ್ವಾದ್ಯಂತ ಕುಖ್ಯಾತವಾಗಿದ್ದು, ತನ್ನ ಮಿತ್ರ ರಾಷ್ಟ್ರಗಳ ಲಾಭಕ್ಕಾಗಿ ವಿವಿಧ ದೇಶಗಳನ್ನು ಅಸ್ಥಿರಗೊಳಿಸುವಲ್ಲಿ ತೊಡಗಿದೆ. ರಾಹುಲ್ ಫೆ.11ರಂದು ಮಾಡಿದ ಭಾಷಣದಲ್ಲಿ, ವಿವಿಧ ಭಾರತೀಯ ಕಾರ್ಪೊರೇಟ್ಗಳನ್ನು ಉಲ್ಲೇಖಿಸಿ, ದೊಡ್ಡ ವ್ಯವಹಾರ ಸಂಸ್ಥೆಗಳೊಂದಿಗಿನ ಅವರ ಸಹಕಾರದಿಂದಾಗಿ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಕುಸಿದಿದೆ ಎಂದು ಆರೋಪಿದ್ದರು. ಅವರ ಈ ಎಲ್ಲಾ ಪ್ರಯತ್ನಗಳು ವಿಪಕ್ಷ ನಾಯಕನ ವೇಷದಲ್ಲಿ ನಮ್ಮ ದೇಶವನ್ನು ಒಳಗಿನಿಂದ ಅಸ್ಥಿರಗೊಳಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ’ ಎಂದು ಆರೋಪಿಸಿದ್ದಾರೆ.
ಏನಿದು ವಾಸ್ತವಿಕ ನಿರ್ಣಯ?
‘ವಾಸ್ತವಿಕ ನಿರ್ಣಯ’ ಎಂದರೆ ಒಂದು ರೀತಿಯ ಅವಿಶ್ವಾಸ ಗೊತ್ತುವಳಿ ಅಥವಾ ದೋಷಾರೋಪಣೆ. ಉನ್ನತ ಅಧಿಕಾರ ಸ್ಥಾನದಲ್ಲಿರುವ ವ್ಯಕ್ತಿಗಳ ವಿರುದ್ಧ ಇದನ್ನು ಮಂಡಿಸಲು ಅವಕಾಶವಿದೆ. ನಿರ್ಣಯವನ್ನು ಮಂಡಿಸುವವರು ಇದಕ್ಕೆ ಸೂಕ್ತ ಆಧಾರ ಮತ್ತು ದಾಖಲೆಗಳನ್ನು ಒದಗಿಸಬೇಕು ಹಾಗೂ ಮೊದಲು ನೋಟಿಸ್ ಕಳಿಸಬೇಕು. ಸ್ಪೀಕರ್ ಅದನ್ನು ಸ್ವೀಕರಿಸಿದರೆ ಸದನದಲ್ಲಿ ಗೊತ್ತುವಳಿ ಮಂಡನೆ ಆಗಿ ಚರ್ಚೆ ನಡೆಯುತ್ತದೆ. ನಂತರ ಮತದಾನ ನಡೆಯುತ್ತದೆ.
ರಾಹುಲ್ ಅನರ್ಹತೆ ಮೊದಲಲ್ಲ:
ರಾಹುಲ್ ಸಂಸತ್ತಿನಿಂದ ಅನರ್ಹಗೊಳ್ಳುವ ಅಪಾಯದಲ್ಲಿರುವುದು ಇದೇ ಮೊದಲಲ್ಲ. 2023ರ ಮಾರ್ಚ್ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ ಪ್ರಕರಣದಲ್ಲಿ ದೋಷಿ ಆಗಿದ್ದರಿಂದ ಸಂಸತ್ತಿನಿಂದ ಅವರನ್ನು ಅನರ್ಹಗೊಳಿಸಲಾಗಿತ್ತು. ಆದರೆ ನಂತರ ಕೋರ್ಟು ಅವರ ಶಿಕ್ಷೆಗೆ ತಡೆ ನೀಡಿದ್ದ ಕಾರಣ ಸದಸ್ಯತ್ವ ಮರಳಿತ್ತು.