ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಟಿಪ್ಪರ್ ಹಾಗೂ ಪಿಕಪ್ ವಾಹನದಲ್ಲಿ ಅಧ್ಯಯನ ಪ್ರವಾಸ ಕರೆದೊಯ್ದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ಬಳಿಕ, ಶಿಕ್ಷಣ ಇಲಾಖೆ ತನಿಖೆ ನಡೆಸಿ ಪ್ರಭಾರ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿದೆ.
ಬೆಳ್ತಂಗಡಿ (ಫೆ.13): ಪಿಕಪ್ ಹಾಗೂ ಟಿಪ್ಪರ್ನಲ್ಲಿ ಶಾಲಾ ಮಕ್ಕಳನ್ನು ಕುರಿಗಳಂತೆ ತುಂಬಿಕೊಂಡು ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋದ ಶಾಲಾ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಿರುವ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿ ನಡೆದಿದೆ.
ಟಿಪ್ಪರ್ ವಾಹನಕ್ಕೆ ಮೂರು ಸಾವಿರ ಬಾಡಿಗೆ!
ಫೆ.9ರಂದು ಪಿಕಪ್ ಮತ್ತು ಟಿಪ್ಪರ್ ವಾಹನಗಳಿಗೆ ಮೂರು ಸಾವಿರ ಬಾಡಿಗೆ ನೀಡಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಬಳಂಜ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ನೇತೃತ್ವದಲ್ಲಿ ಸಮೀಪದ ಫಾರ್ಮ್ಗೆ ಕರೆದುಕೊಂಡು ಹೋಗಲಾಗಿತ್ತು.
ಇದನ್ನೂ ಓದಿ:ಸ್ಕೂಲ್ನಲ್ಲಿ ಚಾಕೋಲೇಟ್ ಆಸೆ ತೋರಿಸಿ ಬಾಲಕಿಯನ್ನ ಕಾರಲ್ಲಿ ಕರೆದೊಯ್ದ ಶಿಕ್ಷಕ; ಮುಂದಾಗಿದ್ದು ಹೇಯ ಕೃತ್ಯ!
ಶಿಕ್ಷಕ ಅಮಾನತ್ತು
ಅದರ ವಿಡಿಯೋ ಸಹ ವೈರಲ್ ಆಗಿತ್ತು. ಫೆ.12 ರಂದು ಬೆಳ್ತಂಗಡಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಬಳಂಜ ಶಾಲೆಗೆ ಭೇಟಿ ನೀಡಿ ವರದಿ ಪಡೆದು ಅದನ್ನು ಮಂಗಳೂರು ಡಿಡಿಪಿಐ ಶಶಿಧರ್.ಜಿ.ಎಸ್.ಅವರಿಗೆ ವರದಿ ಸಲ್ಲಿಸಿದ್ದರು. ಬಳಿಕ ಡಿಡಿಪಿಐ ಅವರು ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅವರನ್ನು ಫೆ.12 ರಂದು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
