ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯ ಪ್ರಮುಖ ಆರೋಪಿ ಜಗ್ಗನೊಂದಿಗೆ ನಿಕಟ ಸಂಪರ್ಕ, ಜಮೀನು ವೈಷಮ್ಯ, ಮತ್ತು ಫೋನ್ ಕರೆಗಳಂತಹ ಸಾಕ್ಷ್ಯಗಳ ಆಧಾರದ ಮೇಲೆ ಅವರ ವಿರುದ್ಧ ತನಿಖೆ ನಡೆಯುತ್ತಿದೆ.
ಬೆಂಗಳೂರು (ಫೆ.13)ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣವು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ಅವರ ಸುತ್ತ ಕಾನೂನಿನ ಉರುಳು ಬಿಗಿಯಾಗಿದೆ.
ಕೊಲೆಗೆ ಪರೋಕ್ಷ ಕುಮ್ಮಕ್ಕು: ಎ1 ಆರೋಪಿ ಜೊತೆ ನಂಟು
ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ (ಎ1) ಜಗ್ಗ ಅಲಿಯಾಸ್ ಜಗದೀಶ್ ಜೊತೆ ಬೈರತಿ ಬಸವರಾಜ್ ನಿಕಟ ಸಂಪರ್ಕ ಹೊಂದಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜಮೀನು ವಿಚಾರವಾಗಿ ಈ ಹಿಂದೆ ಬಿಕ್ಲು ಶಿವ ಮತ್ತು ಬೈರತಿ ಬಸವರಾಜ್ ನಡುವೆ ತೀವ್ರ ವೈಷಮ್ಯವಿತ್ತು. ಇದೇ ಕಾರಣಕ್ಕೆ ಬಿಕ್ಲು ಶಿವ ಈ ಹಿಂದೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಬೈರತಿ ವಿರುದ್ಧ ದೂರು ಸಹ ನೀಡಿದ್ದ. ಈ ಹಳೆಯ ಹಗೆಯೇ ಕೊಲೆಗೆ ಪರೋಕ್ಷ ಕುಮ್ಮಕ್ಕು ನೀಡಲು ಕಾರಣವಾಯಿತೇ ಎಂಬ ಆಯಾಮದಲ್ಲಿ ಸಿಐಡಿ ತನಿಖೆ ಚುರುಕುಗೊಳಿಸಿದೆ.
A1 ಆರೋಪಿ ಜೊತೆ ಕುಂಭಮೇಳದ ಯಾತ್ರೆ, ಫೋನ್ ಕಾಲ್ ಸಾಕ್ಷ್ಯ
ತನಿಖೆಯ ವೇಳೆ ಸಿಐಡಿ ತಂಡಕ್ಕೆ ಮಹತ್ವದ ಸುಳಿವುಗಳು ಲಭ್ಯವಾಗಿವೆ. ಒಂದೇ ಪಿಎನ್ಆರ್ (PNR) ಸಂಖ್ಯೆಯಲ್ಲಿ ಎ1 ಆರೋಪಿ ಜಗದೀಶ್ ಜೊತೆ ಬೈರತಿ ಬಸವರಾಜ್ ಕುಂಭಮೇಳ ಯಾತ್ರೆ ಮಾಡಿದ್ದರು ಎನ್ನಲಾಗಿದೆ. ಯಾತ್ರೆಯ ವೇಳೆ ಇಬ್ಬರೂ ಜೊತೆಗಿದ್ದ ಫೋಟೋಗಳು ಈಗ ಲಭ್ಯವಾಗಿವೆ. ಅಷ್ಟೇ ಅಲ್ಲದೆ, ಕೊಲೆ ನಡೆದ ದಿನದಂದು ಬೈರತಿ ಬಸವರಾಜ್ ಅವರು ಆರೋಪಿ ಜಗದೀಶ್ ಜೊತೆ ಫೋನ್ ಸಂಪರ್ಕದಲ್ಲಿದ್ದರು ಎಂಬುದು ಸಿಡಿಆರ್ (CDR) ವರದಿಯಿಂದ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಕ್ಷ್ಯ ನಾಶದ ಆರೋಪ
ಕೊಲೆಯಾದ ಬಿಕ್ಲು ಶಿವನ ತಾಯಿಯ ಮೇಲೆ ಪ್ರಭಾವ ಬೀರಿದ ಬೈರತಿ ಬಸವರಾಜ್, ಆಕೆಯ ಹೇಳಿಕೆಯನ್ನು ಬದಲಿಸುವಂತೆ ಒತ್ತಡ ಹೇರಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಬೈರತಿ ಬಸವರಾಜ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಹೊಸಕೋಟೆಯಿಂದ ಬಂದಿದ್ದ ಕೆಲ ಆರೋಪಿಗಳು ಭಾಗವಹಿಸಿದ್ದರು. ಟವರ್ ಲೋಕೇಷನ್ ಮತ್ತು ಕಾಲ್ ರೆಕಾರ್ಡ್ಗಳು ಮಾಜಿ ಸಚಿವರ ವಿರುದ್ಧ ಬಲವಾದ ಸಾಕ್ಷ್ಯಗಳಾಗಿ ಸಿಐಡಿ ಕೈಸೇರಿವೆ.
ಇಂದು ನ್ಯಾಯಾಲಯಕ್ಕೆ ಹಾಜರು: ಕಸ್ಟಡಿಗೆ ಪಡೆಯಲು ಸಿಐಡಿ ಪ್ಲಾನ್
ನಿನ್ನೆ ರಾತ್ರಿಯೇ ಬೈರತಿ ಬಸವರಾಜ್ ಅವರ ಬಂಧನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು, ಇಂದು ಬೆಳಿಗ್ಗೆ 9:30ರ ಸುಮಾರಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಬಳಿಕ 11 ಗಂಟೆಯ ವೇಳೆಗೆ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆಗಾಗಿ ಮತ್ತು ಕಸ್ಟೋಡಿಯಲ್ ವಿಚಾರಣೆಗಾಗಿ ಮಾಜಿ ಸಚಿವರನ್ನು ಕನಿಷ್ಠ 5 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಐಡಿ ನ್ಯಾಯಾಲಯವನ್ನು ಕೋರಲಿದೆ.
