
ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಪಘಾತಗಳನ್ನು ತಡೆಯಲು ಇದೇ ಸ್ಥಳದಲ್ಲಿ ಗ್ರಾಮಸ್ಥರು ಶಾಂತಿ ಪೂಜೆ ನಡೆಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ವ್ಯಾಪ್ತಿಯ ಎಂ. ಸತ್ಯವರ ಗ್ರಾಮದ ಸಮೀಪ ಇಂದು ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತ ಸ್ಥಳೀಯರಲ್ಲಿ ಆತಂಕ ಮತ್ತು ಭೀತಿಯನ್ನು ಮೂಡಿಸಿದೆ. ವಿಶೇಷವೆಂದರೆ, ಇದೇ ಸ್ಥಳದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಅಪಘಾತ ಸಂಭವಿಸಿದ್ದ ಹಿನ್ನೆಲೆ, ಸ್ಥಳೀಯರು ವಿಶೇಷ ಶಾಂತಿ ಪೂಜೆಯನ್ನು ನೆರವೇರಿಸಿದ್ದರು. ಆದರೆ ಈ ಪೂಜೆ ಕೂಡ ಫಲಿಸಲಿಲ್ಲ. ಇಂದು ಪೂಜೆ ಮಾಡಿದ ಸ್ಥಳದಲ್ಲಿಯೇ ಸರಣಿ ಅಪಘಾತವಾಗಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅಪಘಾತದ ಹಾಟ್ಸ್ಟಾಟ್ ಆಗ್ತದೆ ಈ ಜಾಗ
ಸ್ಥಳೀಯರ ಮಾಹಿತಿ ಪ್ರಕಾರ, ಇತ್ತೀಚೆಗೆ ಇದೇ ಪ್ರದೇಶದಲ್ಲಿ ಅಪಘಾತ ಸಂಭವಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಈ ರಸ್ತೆ ಭಾಗ ಅಪಾಯಕಾರಿ ವಲಯವಾಗಿ ಪರಿಗಣಿಸಲ್ಪಟ್ಟಿದ್ದು, ದುರ್ಘಟನೆಗಳು ಮರುಕಳಿಸದಿರಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ಸೇರಿ ಶಾಂತಿ ಪೂಜೆಯನ್ನು ಆಯೋಜಿಸಿದ್ದರು. ಪೂಜೆಯ ಮೂಲಕ ದುಷ್ಟಶಕ್ತಿಗಳ ನಿವಾರಣೆ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿತ್ತು.
ಆದರೆ, ಪೂಜೆ ಮಾಡಿರುವ ಜಾಗದಲ್ಲಿ ಹೂವುಗಳೆಲ್ಲ ಇನ್ನೂ ಬಾಡದೆ ಹಾಗೆಯೇ ಇದೆ. ಇಂದು ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಅದೇ ಸ್ಥಳದಲ್ಲಿ ಮತ್ತೊಮ್ಮೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಒಂದೇ ಕಾರಿನಲ್ಲಿದ್ದ ಆರು ಮಂದಿ ವಿದ್ಯಾರ್ಥಿಗಳು ಹಾಗೂ ಓರ್ವ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಾಂತಿ ಪೂಜೆ ನಡೆದ ಕೆಲವೇ ದಿನಗಳಲ್ಲಿ ಈ ಮಟ್ಟದ ದುರ್ಘಟನೆ ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಶಾಂತಿ ಪೂಜೆ ನಡೆದ ಸ್ಥಳದಲ್ಲೇ ಮರುಕಳಿಸಿದ ಈ ದುರ್ಘಟನೆ, ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲದೆ ವೈಜ್ಞಾನಿಕ ರಸ್ತೆ ಸುರಕ್ಷತಾ ಕ್ರಮಗಳ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.
ಮೃತಪಟ್ಟ 7 ಜನ ದುದೈವಿಗಳು
- ಗಗನ್ 26 ವರ್ಷ ( ಬೈಕ್ ಸವಾರ ) ಸಫಲ್ ನಲ್ಲಿ ಕೆಲಸ
ಮೃತ ವಿದ್ಯಾರ್ಥಿಗಳು.
- ಅಶ್ವಿನ್ ನಾಯರ್ 17 ವರ್ಷ ಆರ್ ವಿ ಪಿಯು ಕಾಲೇಜ್ , ಕೊತ್ತನೂರು ನಿವಾಸಿ
- ಅರ್ಹನ್ ಶರೀಫ್, ಸಿಎಂಆರ್ ಶಾಲೆ ವಿದ್ಯಾರ್ಥಿ, ಹೆಚ್ ವಿ ಆರ್ ಲೇಔಟ್ ನಿವಾಸಿ
- ಅಯನ್ ಅಲಿ 17 ವರ್ಷ ಸಿ ಎಂ ಆರ್ ಸ್ಕೂಲ್
- ಭರತ್ 18 ವರ್ಷ , ಸಿಎಂಆರ್ ಕಾಲೇಜ್, ಫ್ರೇಜನ್ ಟೌನ್ ನಿವಾಸಿ.
- ಈತನ್ ಜಾರ್ಜ್ 17 ವರ್ಷ. ಆರ್ ವಿ 1st ಪಿಯು ಕಾಲೇಜ್( ಹುಳಿಮಾವು ನಿವಾಸಿ)
- ಫರ್ಹಾನ್, 17 ವರ್ಷ