
ಶೇಕ್ ಹಸೀನಾ ಉಚ್ಚಾಟನೆಯ ನಂತರ ನಡೆದ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತವಾದಿ ಪಕ್ಷ (ಬಿಎನ್ಪಿ) ಭರ್ಜರಿ ಜಯಗಳಿಸಿದ್ದು, ತಾರಿಖ್ ರೆಹಮಾನ್ ನೂತನ ನಾಯಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಪ್ರಮಾಣವಚನ ಸಮಾರಂಭಕ್ಕೆ ಭಾರತ ಸೇರಿದಂತೆ 13 ದೇಶಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ.
ಬಾಂಗ್ಲಾದೇಶದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ
ನವದೆಹಲಿ/ಢಾಕಾ: 2024ರಲ್ಲಿ ಶೇಕ್ ಹಸೀನಾ ಉಚ್ಚಾಟನೆಯ ನಂತರ ನಡೆದ ಮೊದಲ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತವಾದಿ ಪಕ್ಷ ಬಿಎನ್ಪಿ ಅಭೂತಪೂರ್ವ ಗೆಲುವು ದಾಖಲಿಸಿದ್ದು, ಪಕ್ಷದ ನಾಯಕ ತಾರಿಖ್ ರೆಹಮಾನ್ ಅವರು ಬಾಂಗ್ಲಾದೇಶದ ನಾಯಕನಾಗಿ ಪ್ರಮಾಣವಚನ ಸ್ವೀಕಾರಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಮಂಗಳವಾರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ, ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು 13 ದೇಶಗಳ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದಾರೆ ಎಂದು ಬಾಂಗ್ಲಾದೇಶದ ಮಾಧ್ಯಮವಾದ ಪ್ರಥೋಮ್ ಅಲೋ ವರದಿ ಮಾಡಿದೆ.
13 ದೇಶಗಳ ನಾಯಕರಿಗೆ ಆಹ್ವಾನ
ಪ್ರಥೋಮ್ ಅಲೋ ವರದಿಯ ಪ್ರಕಾರ ಭಾರತವೂ ಸೇರಿದಂತೆ ಚೀನಾ, ಸೌದಿ ಅರೇಬಿಯಾ, ಟರ್ಕಿಯೆ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಮಲೇಷ್ಯಾ, ಬ್ರೂನಿ, ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್ ಮತ್ತು ಭೂತಾನ್ ದೇಶಗಳನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. 2026 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್ಪಿ ಪಕ್ಷವು ಭರ್ಜರಿ ಜಯಗಳಿಸಿದ ನಂತರ ರಾಷ್ಟ್ರೀಯ ಸಂಸತ್ತಿನ ದಕ್ಷಿಣ ಪ್ಲಾಜಾದಲ್ಲಿ ಈ ಸಮಾರಂಭ ನಡೆಯಲಿದೆ.
ಇದಕ್ಕೂ ಮುನ್ನ, ಬಿಎನ್ಪಿ ನಾಯಕ ಎಎನ್ಎಂ ಎಹ್ಸಾನುಲ್ ಹಕ್ ಮಿಲನ್ ಅವರು ಶನಿವಾರ ಪ್ರಧಾನಿ ಮೋದಿಯವರನ್ನು ಮುಂಬರುವ ಸಮಾರಂಭಕ್ಕೆ ಆಹ್ವಾನಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದರು. ಪಕ್ಷದ ಸಮಗ್ರ ವಿದೇಶಾಂಗ ನೀತಿ ದೃಷ್ಟಿಕೋನದ ಪ್ರಕಾರ ‘ಎಲ್ಲರಿಗೂ ಸ್ನೇಹಿತರು, ಯಾರಿಗೂ ದ್ವೇಷವಿಲ್ಲ’ (friends to all, malice to none) ಎಂಬ ನಿಲುವನ್ನು ಒತ್ತಿ ಹೇಳಿದರು.
ಢಾಕಾದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಿಲನ್, ದಕ್ಷಿಣ ಏಷ್ಯಾದ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಪ್ರಶ್ನೆಗೆ, ಅವರು ನಿಖರವಾಗಿ ಏನು ಮಾಡುತ್ತಿದ್ದಾರೆಂದು ನನಗೆ ನಿಖರವಾಗಿ ತಿಳಿದಿಲ್ಲ ಆದರೆ ಅವರು ಎಲ್ಲರನ್ನೂ ಆಹ್ವಾನಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನಗೆ ನಿಖರವಾಗಿ ತಿಳಿದಿಲ್ಲ, ಆದರೆ ಅವರನ್ನು (ಪ್ರಧಾನಿ ಮೋದಿ) ಆಹ್ವಾನಿಸಬೇಕು ಎಂದು ಹೇಳಿದರು.
ಇದು ಸಾಮಾನ್ಯ ಸೌಜನ್ಯ. ಆಯೋಜಕರು ಅದನ್ನು ಮಾಡುತ್ತಾರೆ. ಇಡೀ ಜಗತ್ತು ನಮ್ಮೊಂದಿಗೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಪಕ್ಷದ ಗೆಲುವಿನ ನಂತರ ಪ್ರಧಾನಿ ಮೋದಿ ಅವರ ಅಭಿನಂದನಾ ಸಂದೇಶಕ್ಕಾಗಿ ಬಿಎನ್ಪಿ ಕೂಡ ಧನ್ಯವಾದ ಅರ್ಪಿಸಿದೆ. ಎಕ್ಸ್ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎನ್ಪಿ ಪಕ್ಷ, ಗೌರವಾನ್ವಿತ @narendramodi, ನಿಮಗೆ ತುಂಬಾ ಧನ್ಯವಾದಗಳು. ರಾಷ್ಟ್ರೀಯ ಚುನಾವಣೆಯಲ್ಲಿ ಬಿಎನ್ಪಿಯ ನಿರ್ಣಾಯಕ ಗೆಲುವು ಸಾಧಿಸಿದ ತಾರಿಕ್ ರೆಹಮಾನ್ ಅವರ ನಾಯಕತ್ವಕ್ಕೆ ನೀವು ಸಲ್ಲಿಸಿದ ಅಭಿನಂದನೆಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ : ಅಮೆರಿಕಾದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಸಾವು: ಮಗನ ಸಾವು ಒಪ್ಪಿಕೊಳ್ಳಲಾಗದೇ ಪೋಷಕರ ಗೋಳು
ದ್ವಿಪಕ್ಷೀಯ ಸಂಬಂಧಗಳ ಮಹತ್ವವನ್ನು ಎತ್ತಿ ಹೇಳುತ್ತಾ ಬಿಎನ್ಪಿ ಮುಂಬರುವ ವರ್ಷಗಳಲ್ಲಿ ನವದೆಹಲಿಯೊಂದಿಗೆ ನಿಕಟವಾಗಿ ಕೆಲಸ ಮಾಡುವ ಉದ್ದೇಶವನ್ನು ಹೊಂದಿದೆ. ಪರಸ್ಪರ ಗೌರವ, ಪರಸ್ಪರರ ಕಾಳಜಿಗಳಿಗೆ ಸೂಕ್ಷ್ಮತೆ ಮತ್ತು ನಮ್ಮ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಹಂಚಿಕೆಯ ಬದ್ಧತೆಯಿಂದ ನಮ್ಮ ಬಹುಮುಖಿ ಸಂಬಂಧವನ್ನು ಮುನ್ನಡೆಸಲು ಭಾರತದೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಮಾತ್ ಸೋಲಿನಿಂದ ಭಾರತ ನಿರಾಳ: ಬಾಂಗ್ಲಾದೇಶ ಚುನಾವಣೆಯಲ್ಲಿ ತಾರೀಖ್ ರೆಹಮಾನ್ ಗೆಲುವಿನಿಂದ ಭಾರತಕ್ಕೇನು ಲಾಭ?
ಫೆಬ್ರವರಿ 12 ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ದೀರ್ಘಕಾಲದ ನಾಯಕಿ ಶೇಖ್ ಹಸೀನಾ ಉಚ್ಚಾಟನೆಗೆ ಕಾರಣವಾದ ವಿದ್ಯಾರ್ಥಿ ದಂಗೆ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿತ್ತು. 300 ಸ್ಥಾನಗಳ ಬಾಂಗ್ಲಾದೇಶ ಸಂಸತ್ತಿನಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 151 ಸ್ಥಾನಗಳನ್ನು ಬಿಎನ್ಪಿ ಗೆದ್ದಿದೆ. ರೆಹಮಾನ್ ಅವರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಲಾಗಿದ್ದು, ಆದರೆ ಇಸ್ಲಾಮಿಸ್ಟ್ ಜಮಾತ್ ಇ ಇಸ್ಲಾಮಿ ಮೈತ್ರಿಕೂಟವು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ದೇಶದಲ್ಲಿ ಶೇಕಡಾ 59ರಷ್ಟು ಮತದಾನವಾಗಿತ್ತು.