
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ, ಮಗಳ ಎಸ್ಎಸ್ಎಲ್ಸಿ ಪರೀಕ್ಷೆಯ ಕಾರಣ ನೀಡಿ ಸಲ್ಲಿಸಿದ್ದ ಹಂಗಾಮಿ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಗೆಳೆಯ ನಟ ದರ್ಶನ್ ಬರ್ತಡೇ ದಿನವೇ ಪವಿತ್ರಾ ಗೌಡಗೆ ಹಿನ್ನಡೆಯಾಗಿದ್ದು, ಸದ್ಯಕ್ಕೆ ಜೈಲಿನಲ್ಲಿಯೇ ಇರಬೇಕಾಗಿದೆ.
ಬೆಂಗಳೂರು (ಫೆ.16): ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ಮೊದಲ ಆರೋಪಿ (A1) ಪವಿತ್ರಾ ಗೌಡ ಅವರಿಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ಮಗಳ ಎಸ್ಎಸ್ಎಲ್ಸಿ (SSLC) ಪರೀಕ್ಷೆಯ ಕಾರಣ ನೀಡಿ ಹಂಗಾಮಿ ಜಾಮೀನು ಕೋರಿದ್ದ ಪವಿತ್ರಾ ಅವರ ಅರ್ಜಿಯನ್ನು ಬೆಂಗಳೂರಿನ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಪವಿತ್ರಾ ಗೌಡ ಅವರಿಗೆ ಜೈಲೇ ಗತಿಯಾದಂತಾಗಿದೆ.
ಮಗಳ ಪರೀಕ್ಷೆಯ ಕಾರಣಕ್ಕೆ ಮನವಿ:
ನಟ ದರ್ಶನ್ ಮತ್ತು ಗ್ಯಾಂಗ್ನಿಂದ ನಡೆದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ, ಇತ್ತೀಚೆಗೆ ಜಾಮೀನು ಕೋರಿ ಹೊಸ ಅರ್ಜಿ ಸಲ್ಲಿಸಿದ್ದರು. ಅವರ ಪುತ್ರಿ ಪ್ರಸ್ತುತ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದು, ಬೋರ್ಡ್ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಪರೀಕ್ಷೆಯ ಈ ನಿರ್ಣಾಯಕ ಸಮಯದಲ್ಲಿ ಮಗಳ ಜೊತೆಗಿದ್ದು ಅವಳಿಗೆ ಮಾನಸಿಕ ಸ್ಥೈರ್ಯ ತುಂಬಲು ತನಗೆ ಜಾಮೀನು ನೀಡಬೇಕು ಎಂದು ಪವಿತ್ರಾ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪ್ರಾಸಿಕ್ಯೂಷನ್ ಪ್ರಬಲ ಆಕ್ಷೇಪ:
ಆದರೆ, ಪವಿತ್ರಾ ಗೌಡ ಅವರ ಈ ಮನವಿಗೆ ಪ್ರಾಸಿಕ್ಯೂಷನ್ (ಸರ್ಕಾರಿ ಅಭಿಯೋಜಕರು) ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಇದು ಅತ್ಯಂತ ಘೋರವಾದ ಕೊಲೆ ಪ್ರಕರಣವಾಗಿದೆ. ಸದ್ಯ ಪ್ರಕರಣದ ವಿಚಾರಣೆ (Trial) ಪ್ರಕ್ರಿಯೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಮುಖ ಆರೋಪಿಗೆ ಜಾಮೀನು ನೀಡುವುದು ತನಿಖೆ ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು. ಪರೀಕ್ಷೆಯ ನೆಪವನ್ನಷ್ಟೇ ಮುಂದಿಟ್ಟುಕೊಂಡು ಜಾಮೀನು ಪಡೆಯಲು ಪ್ರಯತ್ನಿಸಲಾಗುತ್ತಿದೆ” ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತು.
ನ್ಯಾಯಾಲಯದ ಆದೇಶ:
ಉಭಯ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ 57ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಐ.ಪಿ. ನಾಯಕ್ ಅವರು, ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಮಗಳ ಪರೀಕ್ಷೆ ಎಂಬುದು ಜಾಮೀನು ನೀಡಲು ಬಲವಾದ ಕಾರಣವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಆರೋಪಿಗೆ ಯಾವುದೇ ರಿಲೀಫ್ ನೀಡಲು ನಿರಾಕರಿಸಿತು.
ಎ11 ನಾಗರಾಜ್ ಅರ್ಜಿ ವಿಚಾರಣೆ:
ಇದೇ ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ನಾಗರಾಜ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪತ್ನಿಗೆ ಶಸ್ತ್ರಚಿಕಿತ್ಸೆ (Operation) ನಡೆಯುತ್ತಿರುವ ಹಿನ್ನೆಲೆಯಲ್ಲಿ ತನಗೆ ಜಾಮೀನು ಬೇಕು ಎಂದು ನಾಗರಾಜ್ ಮನವಿ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನೂ ಕೂಡ ನ್ಯಾಯಾಲಯವು ಇಂದು ಕೈಗೆತ್ತಿಕೊಳ್ಳಲಿದ್ದು, ಅವರಿಗೆ ಅದೃಷ್ಟ ಒಲಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಒತ್ತಾಯದ ನಡುವೆ, ಪ್ರಮುಖ ಆರೋಪಿಗಳಿಗೆ ಪದೇ ಪದೇ ಜಾಮೀನು ನಿರಾಕರಣೆಯಾಗುತ್ತಿರುವುದು ಪ್ರಕರಣದ ಗಾಂಭೀರ್ಯಕ್ಕೆ ಸಾಕ್ಷಿಯಾಗಿದೆ.
ದರ್ಶನ್ ಹುಟ್ಟುಹಬ್ಬದಂದು ಅಭಿಮಾನಿಗಳ ಗಲಾಟೆ
ಇನ್ನು ಇದೇ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ಪವಿತ್ರಾ ಗೌಡಳ ಆಪ್ತ ಗೆಳೆಯ ನಟ ದರ್ಶನ್ ತೂಗುದೀಪ ಎ2 ಆರೋಪಿ ಆಗಿದ್ದಾರೆ. ರಾಜ್ಯದಾದ್ಯಂತ ಅಭಿಮಾನಿಗಳು ನಟ ದರ್ಶನ್ ಹುಟ್ಟುಹಬ್ಬವನ್ನು ಅವರ ಅನುಪಸ್ಥಿತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಗುಂಪೊಂದು ಮದ್ಯ ಸೇವನೆ ಮಾಡಿ, ದರ್ಶನ್ ಮನೆಯ ಮುಂದೆ ನಿಂತುಕೊಂಡು ನಾವು ಬರ್ತಡೇ ಸೆಲೆಬ್ರೇಷನ್ ಮಾಡಬೇಕು ಎಂದು ಗಲಾಟೆ ಮಾಡಿದ ಪ್ರಸಂಗವೂ ನಡೆದಿದೆ. ಈ ಹುಚ್ಚಾಟ ನೋಡಿದ ಪೊಲೀಸರು ಕೆನ್ನೆಗೆ ಎರಡೇಟು ಬಿಟ್ಟು ವಾಪಸ್ ಕಳಿಸಿದ್ದಾರೆ. ಇತ್ತ ದರ್ಶನ್ ಆಪ್ತ ಗೆಳತಿಗೆ ಜಾಮೀನು ಸಿಗದೇ ಜೈಲಲ್ಲೇ ಕೊಳೆಯುವ ಸ್ಥಿತಿ ಬಂದಿದೆ.