BEL Missile Integration Unit Bengaluru ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ ನೂತನ ‘ಕ್ಷಿಪಣಿ ಸಂಯೋಜನಾ ಘಟಕ’ ಉದ್ಘಾಟಿಸಿದರು. ಈ ಸಂದರ್ಭ, ‘ಆಕಾಶ್’ ಕ್ಷಿಪಣಿ ವ್ಯವಸ್ಥೆ ‘ಫೈರ್ ಕಂಟ್ರೋಲ್ ರಾಡಾರ್’ ಅನ್ನು ಅನಾವರಣಗೊಳಿಸಿದರು.
ಬೆಂಗಳೂರು (ಫೆ.17): ಭಾರತದ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ನಗರದಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಆವರಣದಲ್ಲಿ ಸ್ಥಾಪಿಸಿರುವ ನೂತನ ‘ಕ್ಷಿಪಣಿ ಸಂಯೋಜನಾ ಘಟಕ’ವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಸೋಮವಾರ ಉದ್ಘಾಟಿಸಿದರು.
ಇದೇ ವೇಳೆ ‘ಆಕಾಶ್’ ಕ್ಷಿಪಣಿಯ 3ನೇ ಮತ್ತು 4ನೇ ರೆಜಿಮೆಂಟ್ ಕಾಂಬ್ಯಾಟ್ ವ್ಯವಸ್ಥೆ ಮತ್ತು ಪರ್ವತ ಪ್ರದೇಶಗಳಿಗಾಗಿ ವಿನ್ಯಾಸಗೊಳಿಸಲಾದ ‘ಫೈರ್ ಕಂಟ್ರೋಲ್ ರಾಡಾರ್’ ಅನ್ನು ಸಚಿವರು ಅನಾವರಣಗೊಳಿಸಿ ಬಿಇಎಲ್ ಸಂಸ್ಥೆಯ ಕೃತಕ ಬುದ್ಧಿಮತ್ತೆ (ಎಐ) ನೀತಿ ಬಿಡುಗಡೆ ಮಾಡಿದರು.
ಇದನ್ನೂ ಓದಿ:India-US trade deal: ಇದು ವ್ಯಾಪಾರವಲ್ಲ, ದೇಶದ ರೈತರ ಮರಣ ಶಾಸನ! ಮುಖ್ಯಮಂತ್ರಿ ಚಂದ್ರು ಕಿಡಿ
ಬಳಿಕ ಮಾತನಾಡಿದ ರಕ್ಷಣಾ ಸಚಿವರು, ಆಧುನಿಕ ಯುದ್ಧತಂತ್ರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಮಹತ್ವದ ಪಾತ್ರ ವಹಿಸಲಿದ್ದು, ನಮ್ಮ ಸೈನಿಕರಿಗೆ ಇದು ಹೆಚ್ಚಿನ ಆತ್ಮವಿಶ್ವಾಸ ನೀಡಲಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಬೇಕಿದೆ. ರಕ್ಷಣೆ ಮತ್ತು ಡ್ರೋನ್ ವಿರೋಧಿ ಕಾರ್ಯಾಚರಣೆಗಳಲ್ಲಿ ಅಭಿವೃದ್ಧಿಪಡಿಸುವ ತಂತ್ರಜ್ಞಾನಗಳು, ಸ್ವದೇಶಿ ಉತ್ಪನ್ನಗಳು ಜಾಗತಿಕ ಮಟ್ಟ ತಲುಪಬಲ್ಲವು ಎಂದು ಹೇಳಿದರು.
ಸ್ಟಾರ್ಟ್ ಅಪ್ಗಳು ಮತ್ತು ಯುವ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದ ರಕ್ಷಣಾ ಸಚಿವರು, ಹೆಚ್ಚು ಹೆಚ್ಚು ಸುಧಾರಿತ ಸ್ವದೇಶಿ ತಂತ್ರಜ್ಞಾನಗಳನ್ನು ಆವಿಷ್ಕರಿಸುವಂತೆ ಕರೆ ನೀಡಿದರು. ಈ ವೇಳೆ ಬಿಇಎಲ್ ಅಧ್ಯಕ್ಷ ಎ.ಅನ್ಬರಸು ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
