ಲಂಚ ಪಡೆಯುವಾಗ ಸಿಕ್ಕಿಬಿದ್ದು ಜೈಲು ಸೇರಿದ ಅಧಿಕಾರಿಗೆ ಬಾಳೆಹಣ್ಣು, ಸೊಳ್ಳೆಬತ್ತಿ ಕೊಟ್ಟ ರೈತ

ಲಂಚ ಪಡೆಯುವಾಗ ಸಿಕ್ಕಿಬಿದ್ದು ಜೈಲು ಸೇರಿದ ಅಧಿಕಾರಿಗೆ ಬಾಳೆಹಣ್ಣು, ಸೊಳ್ಳೆಬತ್ತಿ ಕೊಟ್ಟ ರೈತ


ಶಿವಮೊಗ್ಗ (ಫೆಬ್ರವರಿ .17): ಸಾಮಾನ್ಯವಾಗಿ ಜೈಲಿನಲ್ಲಿರುವ ಬಂಧು-ಮಿತ್ರರನ್ನು ನೋಡಲು ಹೋಗುವವರು ಹಣ್ಣು-ಹಂಪಲು ತೆಗೆದುಕೊಂಡು ಹೋಗುವುದು ಸಹಜ. ಆದರೆ, ಲಂಚ (ಲಂಚ) ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಭೂಸ್ವಾಧೀನ ಅಧಿಕಾರಿ ಸದ್ಯ ಶಿವಮೊಗ್ಗ (ಶಿವಮೊಗ್ಗ) ಸೋಗಾನೆ ಕಾರಾಗೃಹದಲ್ಲಿದ್ದು, ಜೈಲುಪಾಲಾದ ಭೂಸ್ವಾಧೀನ ಅಧಿಕಾರಿ ಸಿದ್ದಲಿಂಗರೆಡ್ಡಿ ಅವರಿಗಾಗಿ ಚಿಕ್ಕಮಗಳೂರಿನ ರೈತ ಬ್ರೆಡ್, ಬಾಳೆಹಣ್ಣು ಹಾಗೂ ಸೊಳ್ಳೆಬತ್ತಿಯನ್ನು ನೀಡಿ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಈ ದೃಶ್ಯ ಮಾತ್ರ ಎಲ್ಲರ ಹುಬ್ಬೇರಿಸುವಂತಿತ್ತು. ಈ ಮೂಲಕ ಸಾರ್ವಜನಿಕವಾಗಿ ಕೆಇಎಸ್ ಅಧಿಕಾರಿ ಮಾನ ಹರಾಜು ಹಾಕಿರುವ ಪ್ರಸಂಗ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಲಿಂಗರೆಡ್ಡಿ ಇತ್ತೀಚೆಗೆ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿಗೆ ಒಳಗಾಗಿ ಸದ್ಯ ಜೈಲಿನಲ್ಲಿದ್ದಾರೆ. ಈ ಅಧಿಕಾರಿಯ ಕಾರ್ಯವೈಖರಿಯಿಂದ ನೊಂದಿದ್ದ ಚಿಕ್ಕಮಗಳೂರಿನ ಶ್ರೀಗಂಧ ಬೆಳೆಗಾರ ವಿಶುಕುಮಾರ್ ಅವರು ಇಂದು (ಫೆಬ್ರವರಿ 17) ವಿನೂತನ ರೀತಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತಲೆ ಮೇಲೆ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಬಳಸಿದ್ದ ಶ್ರೀಗಂಧದ ಪಾದುಕೆಯನ್ನು ಹೊತ್ತು ಜೈಲಿನ ದ್ವಾರಕ್ಕೆ ಬಂದ ವಿಶುಕುಮಾರ್, ಅಧಿಕಾರಿ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ನಟಿಸುತ್ತಾ ವ್ಯಂಗ್ಯವಾಡಿದ್ದಾರೆ.

ಇದನ್ನೂ ನೋಡಿ: ಲಂಚ ನೀಡಲು ಹಣವಿಲ್ಲದ್ದಕ್ಕೆ ಬೆಳೆದ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ

ಶ್ರೀಗಂಧದ ಮರಗಳನ್ನು ಕಷ್ಟಪಟ್ಟು ಬೆಳೆಸಿದ ರೈತರಿಗೆ ಸಿಗಬೇಕಾದ ಸೂಕ್ತ ಪರಿಹಾರವನ್ನು ನೀಡದೆ, ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಯ ವಿರುದ್ಧ ಈ ಪ್ರತಿಭಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಭ್ರಷ್ಟ ಅಧಿಕಾರಿಯೊಬ್ಬರು ಜೈಲು ಪಾಲಾದಾಗ ರೈತರು ಪಟಾಕಿ ಸಿಡಿಸಿ ಸಂಭ್ರಮಿಸುವುದು ನೋಡಿದ್ದೇವೆ, ಆದರೆ ಹೀಗೆ ಜೈಲಿಗೆ ಹೋಗಿ ಉಪಚಾರ ಮಾಡುವ ಮೂಲಕ ಅಣಕಿಸಿದ್ದು ಮಾತ್ರ ಹೊಸತಾಗಿತ್ತು. ರೈತ ವಿಶುಕುಮಾರ್ ಅವರ ಈ ನಡೆ ಭ್ರಷ್ಟ ವ್ಯವಸ್ಥೆಗೆ ದೊಡ್ಡ ಪೆಟ್ಟು ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶುಕುಮಾರ್, ಸಿದ್ದಲಿಂಗರೆಡ್ಡಿ ಅವರ ಭ್ರಷ್ಟಾಚಾರ ಮತ್ತು ರೈತ ವಿರೋಧಿ ಧೋರಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸರ್ಕಾರಕ್ಕೆ ಹಣ ಉಳಿಸಲು ಈ ಅಧಿಕಾರಿ ಬಹಳ ಶ್ರಮವಹಿಸಿದ್ದಾರೆ. ನನ್ನ ಅತ್ಯಂತ ಬೆಲೆಬಾಳುವ ಶ್ರೀಗಂಧದ ಮರಕ್ಕೆ ಈ ಅಧಿಕಾರಿ ಕೇವಲ 420 ರೂಪಾಯಿ ದರ ನಿಗದಿಪಡಿಸಿದ್ದರು. ರೈತರಿಗೆ ಅನ್ಯಾಯ ಮಾಡಿ ಸರ್ಕಾರಕ್ಕೆ ಹಣ ಉಳಿಸಿಕೊಡಲು ಮುಂದಾಗಿದ್ದ ಇವರು ಈಗ ಲಂಚದ ಕೇಸಿನಲ್ಲಿ ಜೈಲಿಗೆ ಬಂದಿದ್ದಾರೆ. ಸರ್ಕಾರಕ್ಕೆ 6ನೇ ಗ್ಯಾರಂಟಿ ಕೊಡಲು ಇವರು ಇಷ್ಟು ಹಣ ಉಳಿಸಬೇಕು ಎಂದು ಟಾಂಗ್ ಕೊಟ್ಟರು.

ಜೈಲಿನಲ್ಲಿ ಅವರಿಗೆ ಸೊಳ್ಳೆಗಳು ಕಚ್ಚಿ ತೊಂದರೆಯಾಗಬಾರದು ಎಂದು ಸೊಳ್ಳೆಬತ್ತಿ ತಂದಿದ್ದೇನೆ. ಸ್ನಾನಕ್ಕೆ ಮೈಸೂರು ಸ್ಯಾಂಡಲ್ ಸೋಪ್, ತಿನ್ನಲು ಬ್ರೆಡ್ ಮತ್ತು ಬಾಳೆಹಣ್ಣು ತಂದಿದ್ದೇನೆ. ಅವರಿಗೆ ಆರೋಗ್ಯ ಕೊಡಲಿ ಮತ್ತು ಸರ್ಕಾರಕ್ಕೆ ಹೆಚ್ಚಿನ ಹಣ ಉಳಿಸಲು ಅವರಿಗೆ ದೇವರು ಶಕ್ತಿ ನೀಡಲಿ ಎಂದು ವಿಶುಕುಮಾರ್ ವ್ಯಂಗ್ಯವಾಗಿ ಹಾರೈಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *