ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದ್ದು, ನಮ್ಮನ್ನು ಯಾರೂ ಕರೆದಿಲ್ಲ, ಸ್ನೇಹಿತರು ಮಜಾ ಮಾಡಲು ಹೋಗಿದ್ದಾರೆ ಎಂದಿದ್ದಾರೆ. ಆದರೆ, ಈ ಪ್ರವಾಸದ ಉದ್ದೇಶದ ಬಗ್ಗೆ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಮನಗರ (ಫೆ.19): ಫಾರಿನ್ ಟೂರ್ಗೆ ನಮ್ಮನ್ನು ಯಾರೂ ಕರೆದಿಲ್ಲ. ನಮ್ಮದೇ ಒಂದು ಟೀಮ್, ಅವರದ್ದೇ ಒಂದು ಟೀಮ್. ಅವರೆಲ್ಲರೂ ಸ್ನೇಹಿತರು ಹೋಗಿದ್ದಾರೆ. ಮಜಾ ಮಾಡಿಕೊಂಡು ಬರಲಿ ಬಿಡಿ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
ನಾನೂ ಸಹ ಹದಿನೈದು ದಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದೆ
ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಕೆಲಸ ಜಾಸ್ತಿ ಇದೆ. ಹಾಗಾಗಿ ನಾವು ಫಾರಿನ್ ಟೂರ್ಗೆ ಹೋಗುತ್ತಿಲ್ಲ. ಅಷ್ಟಕ್ಕೂ ನಮ್ಮನ್ನು ಯಾರೂ ಕರೆದೂ ಇಲ್ಲ. ಅವರು ಬಿಡುವು ಮಾಡಿಕೊಂಡು ಹೋಗಿದ್ದಾರೆ ಎಂದರು. ನಾನೂ ಸಹ ಹದಿನೈದು ದಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದೆ. ಈಗ ಫಾರಿನ್ ಟೂರ್ಗೆ ಹೋಗಿರುವ ಶಾಸಕರೆಲ್ಲರೂ ಸ್ನೇಹಿತರು, ಸಮಾನ ವಯಸ್ಸಿನವರು. ಅವರವರ ಹಣದಲ್ಲಿ ಹೋಗಿದ್ದಾರೆ. ನೂರು ಮಂದಿ ಶಾಸಕರೇನು ಹೋಗಿಲ್ಲ. ಅವರ್ಯಾರೋ 15 ಶಾಸಕರು ಹೋಗಿದ್ದಾರೆ ಅಷ್ಟೇ ಎಂದರು.
ಕೈ’ ಶಾಸಕರ ವಿದೇಶ ಪ್ರವಾಸ ಅನುಮಾನ ಮೂಡಿಸಿದೆ: ಟೆಂಗಿನಕಾಯಿ
ಹುಬ್ಬಳ್ಳಿ: \Bಕಾಂಗ್ರೆಸ್ ಶಾಸಕರು ಸ್ವಂತ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ತೆರಳಿದ್ದರೂ ಪ್ರವಾಸದ ಉದ್ದೇಶ ಮಾತ್ರ ಅನುಮಾನ ಮೂಡಿಸುವಂತಿದೆ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಆದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ನಡುವೆ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆದಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಬಣ ಬಡಿದಾಟ ಏರ್ಪಟ್ಟಿದೆ. ಈಗ ಶಾಸಕರು, ಸಚಿವರು ಸ್ವಂತ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ಹೋಗಿರಬಹುದು. ಆದರೆ, ಏಕಾಏಕಿ ಇಷ್ಟೊಂದು ಜನ ವಿದೇಶ ಪ್ರವಾಸಕ್ಕೆ ಹೋಗಿರುವುದು ಆಶ್ಚರ್ಯ ತಂದಿದೆ. ಅನುಮಾನ ಕೂಡ ಮೂಡಿಸಿದೆ ಎಂದರು.
