
ಯುವ ಬ್ಯಾಟರ್ ಆರ್. ಸ್ಮರಣ್ ಅವರ ಭರ್ಜರಿ ಅವಳಿ ಶತಕಗಳ ನೆರವಿನಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ಉತ್ತರಾಖಂಡ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ. ಬೃಹತ್ ಮುನ್ನಡೆಯೊಂದಿಗೆ, ದಶಕದ ಬಳಿಕ ತಂಡದ ಫೈನಲ್ ಪ್ರವೇಶ ಬಹುತೇಕ ಖಚಿತವಾಗಿದೆ.
ಲಖನೌ: ಯುವ ಬ್ಯಾಟರ್ ಆರ್.ಸ್ಮರಣ್ ಭರ್ಜರಿ ಶತಕದ ನೆರವಿನಿಂದ ಕರ್ನಾಟಕ ತಂಡ ಉತ್ತರಾಖಂಡ ವಿರುದ್ಧ ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ಸಂಪೂರ್ಣ ಅಧಿಪತ್ಯ ಸಾಧಿಸಿದೆ. ತಂಡ ದಶಕದ ಬಳಿಕ ಫೈನಲ್ ಪ್ರವೇಶಿಸುವುದು ಖಚಿತವಾಗಿದ್ದು, ಅಧಿಕೃತಗೊಳ್ಳುವುದು ಮಾತ್ರ ಬಾಕಿಯಿದೆ. ಗುರುವಾರ ಪಂದ್ಯದ ಕೊನೆ ದಿನ.
ಉತ್ತರಖಂಡ 233 ರನ್ಗಳಿಗೆ ಆಲೌಟ್
ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕದ 736 ರನ್ಗೆ ಪ್ರತಿಯಾಗಿ, ಉತ್ತರಾಖಂಡ ಟೀಮ್ ಬುಧವಾರ 233 ರನ್ಗೆ ಆಲೌಟಾಯಿತು. ಲಕ್ಷ್ಯ(55), ಆದಿತ್ಯ ರಾವತ್(ಔಟಾಗದೆ 45) ಹೊರತುಪಡಿಸಿ ಇತರರು ಮಿಂಚಲಿಲ್ಲ. ವಿದ್ಯಾಧರ್ ಪಾಟೀಲ್ ಹಾಗೂ ವೈಶಾಖ್ ತಲಾ 3 ವಿಕೆಟ್ ಪಡೆದರು.
503 ರನ್ಗಳ ಬೃಹತ್ ಮುನ್ನಡೆ ಪಡೆದ ಹೊರತಾಗಿಯೂ ಕರ್ನಾಟಕ ಫಾಲೋ-ಆನ್ ಹೇರದೆ 2ನೇ ಇನ್ನಿಂಗ್ಸ್ ಆರಂಭಿಸಿತು. ತಂಡ 4ನೇ ದಿನದಂತ್ಯಕ್ಕೆ 6 ವಿಕೆಟ್ಗೆ 299 ರನ್ ಗಳಿಸಿದ್ದು, ಒಟ್ಟಾರೆ 802 ರನ್ ಮುನ್ನಡೆಯಲ್ಲಿದೆ. 2 ಇನ್ನಿಂಗ್ಸ್ ಸೇರಿ ಕರ್ನಾಟಕ ಒಟ್ಟು 1035 ರನ್ ಕಲೆಹಾಕಿದ್ದು, ಕೊನೆ ದಿನವೂ ಬ್ಯಾಟಿಂಗ್ ಮುಂದುವರಿಸಲಿದೆಯೇ ಎಂಬ ಕುತೂಹಲವಿದೆ. ಕೃತಿಕ್ ಕೃಷ್ಣ 52 ರನ್ ಗಳಿಸಿದರೆ, ಆರ್.ಸ್ಮರಣ್(127) ಸತತ 2ನೇ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದರು. ಕೆ.ಎಲ್.ರಾಹುಲ್ ಔಟಾಗದೆ 70 ರನ್ ಸಿಡಿಸಿದ್ದು, ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸ್ಕೋರ್: ಕರ್ನಾಟಕ 736/10 ಮತ್ತು 299/6 (4ನೇ ದಿನದಂತ್ಯಕ್ಕೆ) (ಸ್ಮರಣ್ 127, ರಾಹುಲ್ ಔಟಾಗದೆ 70, ಕೃತಿಕ್ 52, ಅಭಯ್ 2-53), ಉತ್ತರಾಖಂಡ 233/10 (ಲಕ್ಷ್ಯ 55, ವೈಶಾಖ್ 3-45, ವಿದ್ಯಾಧರ್ 3-40)
8 ಪಂದ್ಯಗಳಲ್ಲಿ ಸ್ಮರಣ್ 950, ಟೂರ್ನಿಯ ಗರಿಷ್ಠ
ಕಳೆದ ಬಾರಿ ರಣಜಿಯಲ್ಲಿ 7 ಇನ್ನಿಂಗ್ಸ್ಗಳಲ್ಲಿ 516 ರನ್ ಗಳಿಸಿದ್ದ ಕರ್ನಾಟಕದ 22 ವರ್ಷದ ಎಡಗೈ ಬ್ಯಾಟರ್ ಸ್ಮರಣ್, ಈ ಬಾರಿ 8 ಪಂದ್ಯಗಳ 13 ಇನ್ನಿಂಗ್ಸ್ಗಳಲ್ಲಿ ಬರೋಬ್ಬರಿ 950 ರನ್ ಗಳಿಸಿದ್ದಾರೆ. ಇದು ಈ ಆವೃತ್ತಿಯ ಟೂರ್ನಿಯಲ್ಲಿ ಗರಿಷ್ಠ. ಅವರು 2 ದ್ವಿಶತಕ, 2 ಶತಕ, 3 ಅರ್ಧಶತಕ ಸಿಡಿಸಿದ್ದಾರೆ. ಇನ್ನು, ಡೆಲ್ಲಿಯ ಆಯುಶ್ ದೊಸೇಜಾ 7 ಪಂದ್ಯಗಳ 12 ಇನ್ನಿಂಗ್ಸ್ನಲ್ಲಿ 949 ರನ್ ಕಲೆಹಾಕಿದ್ದು, 2ನೇ ಸ್ಥಾನದಲ್ಲಿದ್ದಾರೆ.
ಪಂದ್ಯದಲ್ಲಿ ಅವಳಿ ಶತಕ: ಸ್ಮರಣ್ 3ನೇ ಸಾಧಕ
ಒಂದೇ ಪಂದ್ಯದಲ್ಲಿ 2 ಶತಕ ಸಿಡಿಸಿದ ಕರ್ನಾಟಕದ 3ನೇ ಆಟಗಾರ ಎಂಬ ಖ್ಯಾತಿಗೆ ಆರ್.ಸ್ಮರಣ್ ಪಾತ್ರರಾಗಿದ್ದಾರೆ. ಅವರು ಈ ಪಂದ್ಯದಲ್ಲಿ 135 ಹಾಗೂ 127 ರನ್ ಸಿಡಿಸಿದ್ದಾರೆ. ಇದಕ್ಕೂ ಮುನ್ನ 2012-13ರಲ್ಲಿ ಕುನಾಲ್ ಕಪೂರ್ ಹರ್ಯಾಣ ವಿರುದ್ಧ, 2017-18ರಲ್ಲಿ ಮಯಾಂಕ್ ಅಗರ್ವಾಲ್ ರೈಲ್ವೇಸ್ ವಿರುದ್ಧ ಈ ಸಾಧನೆ ಮಾಡಿದ್ದರು.