
ಹೈದರಾಬಾದ್ನಲ್ಲಿ, ವಿಚ್ಛೇದನದ ನಂತರ ಮರುಮದುವೆಯಾಗಿ ಗರ್ಭಿಣಿಯಾಗಿದ್ದ ಸಾಫ್ಟ್ವೇರ್ ಇಂಜಿನಿಯರ್ ರನ್ನು ಆಕೆಯ ಮಾಜಿ ಪತಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮರುಮದುವೆಯಿಂದ ಅಸಮಾಧಾನಗೊಂಡಿದ್ದ ಮಾಜಿ ಪತಿ ಈ ಕೃತ್ಯವೆಸಗಿದ್ದಾನೆ.
ಇತ್ತೀಚೆಗೆ ಮನುಷ್ಯರೇ ಮನುಷ್ಯರನ್ನು ಕೊಲ್ಲುವ ಪ್ರಕರಣಗಳು ಹೆಚ್ಚಾಗ್ತಾ ಇದೆ. ಅದರಲ್ಲೂ ಗಂಡ ಹೆಂಡತಿಯನ್ನು ಹೆಂಡತಿ ಗಂಡನನ್ನು ಬಾಯ್ಫ್ರೆಂಡ್ ಗರ್ಲ್ಫ್ರೆಂಡ್ನ್ನು ಕೊಲ್ಲುವಂತಹ ಪ್ರಕರಣಗಳು ಹೆಚ್ಚು ಕೇಳಿ ಬರುತ್ತಿದೆ. ಅದೇ ರೀತಿ ಈಗ ಹೈದರಾಬಾದ್ನಲ್ಲಿ ವಿಚ್ಛೇದನದ ನಂತರ ಮರು ಮದುವೆಯಾಗಿ ಗರ್ಭಿಣಿಯಾಗಿದ್ದ ಮಹಿಳೆಯನ್ನು ಆಕೆಯ ಮಾಜಿ ಪತಿಯೇ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ನಡೆದಿದೆ. 29 ವರ್ಷದ ಸುನೀತಾ ಕೊಲೆಯಾದ ಮಹಿಳೆ. ದೇವರಕೊಂಡ ಮಹೇಶ್ ಕೊಲೆ ಮಾಡಿದ ಮಾಜಿ ಪತಿ. ಇಬ್ಬರು ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದು ಕೆಲ ಕಾಲ ಇಬ್ಬರೂ ಕೆನಡಾದಲ್ಲಿ ನೆಲೆಸಿದ್ದರು., ಹೈದರಾಬಾದ್ನ ವನಸ್ಥಲೀಪುರಂನಲ್ಲಿ ಈ ಭಯಾನಕ ಘಟನೆ ನಡೆದಿದೆ.
ಆಕೆಯ ಮರು ಮದುವೆಯಿಂದ ಅಸಮಾಧಾನಗೊಂಡ ಮಾಜಿ ಪತಿ ಮಹೇಶ್ ಆಕೆಯ ಗಂಡನ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಆಕೆಯನ್ನು ಕೊಲೆ ಮಾಡಿದ್ದಾನೆ. ಸುನೀತಾ ತಮ್ಮ ಮನೆಯಿಂದಲೇ ಕಂಪನಿಯೊಂದಕ್ಕೆ (ವರ್ಕ್ ಫ್ರಮ್ ಹೋಮ್) ಕೆಲಸ ಮಾಡುತ್ತಿದ್ದರು. ಘಟನೆ ನಡೆಯುವ ವೇಳೆ ಆಕೆಯ ಅತ್ತೆ ಟೆರೇಸ್ ಮೇಲೆ ಬಟ್ಟೆ ಒಣ ಹಾಕುತ್ತಿದ್ದರೆ ಮಾವ ಮತ್ತೊಂದು ಕೋಣೆಯಲ್ಲಿದ್ದರು. 2024ರಲ್ಲಿ ಸುನೀತಾ ಹಾಗೂ ಮಹೇಶ್ ಮಧ್ಯೆ ವಿಚ್ಚೇದನವಾಗಿತ್ತು. ಕೌಟುಂಬಿಕ ಕಲಹದ ನಂತರ ಆರೋಪಿ ಮಹೇಶ್ ವಿರುದ್ಧ ಸುನೀತಾ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಆತನ ವಿರುದ್ಧ ಪೊಲೀಸರು ಲುಕೌಟ್ ಸರ್ಕ್ಯುಲರ್ ಹೊರಡಿಸಿದ್ದರು.
ಬುಧವಾರ ಮಧ್ಯಾಹ್ನ ಆರೋಪಿ ಗ್ರೀನ್ ಸಿಟಿ ಕಾಲೋನಿಯಲ್ಲಿರುವ ಸುನಿತಾ ಅವರು ವಾಸವಿದ್ದ ಅವರ ನಾಲ್ಕನೇ ಮಹಡಿಯ ಅಪಾರ್ಟ್ಮೆಂಟ್ಗೆ ನುಗ್ಗಿದ್ದಾನೆ. ನೇರವಾಗಿ ಸುನೀತಾ ಇದ್ದ ಇದ್ದ ಕೋಣೆಗೆ ಹೋಗಿ ಒಳಗಿನಿಂದ ಲಾಕ್ ಮಾಡಿದ್ದಾನೆ . ಅವನ ಬಳಿ ಎರಡು ಚಾಕುಗಳು, ಒಂದು ಪೆಟ್ರೋಲ್ ಬಾಟಲಿ ಮತ್ತು ಒಂದು ಮರ ಕತ್ತರಿಸುವ ಸಣ್ಣ ಕೈ ಗರಗಸವಿತ್ತು. ಆರಂಭದಲ್ಲಿ ಮಹೇಶ್ ಆಕೆಯೊಂದಿಗೆ ತೀವ್ರ ವಾಗ್ವಾದಕ್ಕಿಳಿದು ಕೆಲವೇ ನಿಮಿಷಗಳಲ್ಲಿ ಸುನೀತಾಳ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹಲವು ಬಾರಿ ಚಾಕುವಿನಿಂದಇರಿದಿದ್ದಾನೆ ಎಂದು ವನಸ್ಥಲೀಪುರಂನ ಇನ್ಸ್ಪೆಕ್ಟರ್ ಟಿ ಮಹೇಶ್ ಹೇಳಿದ್ದಾರೆ.
ಮರುಮದುವೆಯಾಗಿದ್ದಕ್ಕೆ ದೇವರಕೊಂದ ಮಹೇಶ್ಗೆ ಮಾಜಿ ಪತ್ನಿ ಸುನೀತಾ ಮೇಲೆ ದ್ವೇಷವಿತ್ತು. ಈ ಘಟನೆಯಿಂದ ಸುನೀತಾ ಕಿರುಚಾಟ ಕೇಳಿ ಇತರ ಕುಟುಂಬ ಸದಸ್ಯರು ಆಕೆಯ ಕೋಣೆಗೆ ಓಡಿ ಬಂದಿದ್ದು, ಸುನೀತಾ ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ.. ಆ ಹೊತ್ತಿಗೆ ಆರೋಪಿಯು ಶೌಚಾಲಯಕ್ಕೆ ಹೋಗಿ ಬಾಗಲಿ ಹಾಕಿಕೊಂಡಿದ್ದನ್ನು ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ.
ಸುನೀತಾ ಹಾಗೂ ಮಹೇಶ್ 2022 ರಲ್ಲಿ ಮದುವೆಯಾಗಿದ್ದರು. ಇಬ್ಬರು ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದು, ಮದುವೆಯ ನಂತರ ಅವರು ಕೆನಡಾಗೆ ಹೋಗಿದ್ದರು ಎಂದು ಸುನೀತಾ ಕುಟುಂಬದವರು ಹೇಳಿದ್ದಾರೆ. ಮದುವೆಯ ಆರಂಭದಿಂದಲೂ ಇಬ್ಬರ ನಡುವೆ ಸಂಬಂಧ ಚೆನ್ನಾಗಿರಲಿಲ್ಲ, ಸಂಬಂಧ ಹದಗೆಡುತ್ತಿದ್ದಂತೆ ಸುನೀತಾ 2024ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಭಾರತಕ್ಕೆ ಬಂದಿದ್ದರು. ನಂತರ 2025ರಲ್ಲಿ ಬೇರೆ ವ್ಯಕ್ತಿ ಜೊತೆ ಮದುವೆಯಾಗಿ ಹೈದರಾಬಾದ್ನ ವನಸ್ಥಳೀಪುರಂನಲ್ಲಿ ವಾಸಿಸುವುದಕ್ಕೆ ಆರಂಭಿಸಿದ್ದರು ಎಂದು ಎಲ್ಬಿ ನಗರದ ಡಿಸಿಪಿ ಬಿ ಅನುರಾಧ ಹೇಳಿದ್ದಾರೆ.
ಸುನೀತಾ ಅವರು ದಾಖಲಿಸಿರುವ ಕೌಟುಂಬಿಕ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೆಸರಿನಲ್ಲಿ ಲುಕೌಟ್ ನೋಟೀಸ್ ಜಾರಿಯಾಗಿದ್ದರಿಂದ ದೇವರಕೊಂಡ ಮಹೇಶ್ನನ್ನು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ಜೊತೆಗೆ ಆತನ ಪಾಸ್ಪೋರ್ಟ್ ವಶಕ್ಕೆ ಪಡೆದಿದ್ದರು. ಇತ್ತ ಲುಕೌಟ್ ನೊಟೀಸ್ನಿಂದ ಕೆನಡಾಕ್ಕೆ ಹಿಂತಿರುಗಲು ಸಾಧ್ಯವಾಗದ ಕಾರಣ, ಮಹೇಶ್ ನಿರಾಶೆಗೊಂಡಿದ್ದ. ಇತ್ತ ಸುನೀತಾ ಮರು ಮದುವೆಯಾಗಿದ್ದರಿಂದ ಆತ ಸುನೀತಾ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿ ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ಬಿ ಅನುರಾಧ ಹೇಳಿದ್ದಾರೆ. ಆರೋಪಿಯನ್ನು ಬಂಧಿಸಲು ಸ್ನಾನಗೃಹದ ಬಾಗಿಲು ಒಡೆಯಬೇಕಾಯ್ತು ಎಂದು ಪೊಲೀಸರು ಹೇಳಿದ್ದಾರೆ. ಮಹೇಶ್ನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ತಿಳಿಸಿರುವ ಪ್ರಕಾರ, ಲುಕೌಟ್ ನೊಟೀಸ್ ಇದ್ದ ಕಾರಣ ಆತನಿಗೆ ವಿದೇಶಕ್ಕೆ ಹೋಗಲು ಆಗುತ್ತಿರಲಿಲ್ಲ, ಆತ ಉದ್ಯೋಗವಿಲ್ಲದೆ ಪೆದ್ದಪಲ್ಲಿ ಜಿಲ್ಲೆಯ ತನ್ನ ಹುಟ್ಟೂರಿನಲ್ಲಿ ವಾಸಿಸುತ್ತಿದ್ದ. ಕಳೆದ ಎರಡು ತಿಂಗಳಿನಿಂದ ಸುನೀತಾ ಅವರ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಆಕೆಯ ವಿಳಾಸವನ್ನು ಟ್ರ್ಯಾಕ್ ಮಾಡಿ, ಹೈದರಾಬಾದ್ಗೆ ತೆರಳಿ, ಹಾಸ್ಟೆಲ್ನಲ್ಲಿ ಉಳಿದುಕೊಂಡು ದಾಳಿಗೆ ಯೋಜನೆ ರೂಪಿಸಿದ್ದ. ಯೋಜನೆಯಂತೆ, ಅವನು ಎರಡು ಚಾಕುಗಳು, ಒಂದು ಡ್ರಿಲ್ಲಿಂಗ್ ಮೆಷಿನ್, ಒಂದು ಗರಗಸ ಮತ್ತು ಐದು ಲೀಟರ್ ಪೆಟ್ರೋಲ್ ಕ್ಯಾನ್ ಇರುವ ಚೀಲವನ್ನು ಹೊತ್ತುಕೊಂಡು ಅಪಾರ್ಟ್ಮೆಂಟ್ಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ದೂರದರ್ಶನ ಚಾನೆಲ್ಗಳು ಪ್ರಸಾರ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಪರಾಧ ನಡೆಯುವ ಸ್ವಲ್ಪ ಸಮಯದ ಮೊದಲು ಆರೋಪಿಯು ಬ್ಯಾಗ್ನೊಂದಿಗೆ ಅಪಾರ್ಟ್ಮೆಂಟ್ ಕಾರಿಡಾರ್ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಲಾಗಿದೆ.