ಬಳ್ಳಾರಿ ಬ್ರೂಸ್ಪೇಟೆ ಪೊಲೀಸ್ ಠಾಣೆಚಿತ್ರದ ಕ್ರೆಡಿಟ್ ಮೂಲ: tv9
ಬಳ್ಳಾರಿ, ಫೆಬ್ರವರಿ 21: ಭಾರೀ ಚೀಟಿ ವಂಚನೆ ಪ್ರಕರಣದಲ್ಲಿ ಬಳ್ಳಾರಿಯ (ಬಳ್ಳಾರಿ) ನೂರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿರುವ ವಿಚಾರ ಬೆಳಕಿಗೆ ಬಂದಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ದೊರೆಯುತ್ತದೆ ಎಂದು ನಂಬಿಸಿ ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ವ್ಯಕ್ತಿಯೊಬ್ಬ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಬಳ್ಳಾರಿಯ ದೇವಿನಗರ ನಿವಾಸಿ ವೆಂಕಟೇಶ ಚೀಟಿ ವ್ಯವಹಾರದ ಹೆಸರಿನಲ್ಲಿ ಸುಮಾರು 80ಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದಾನೆ ಎಂಬುದಾಗಿದೆ. ಒಬ್ಬರಿಂದ 10 ಸಾವಿರ ರೂಪಾಯಿಯಿಂದ ಹಿಡಿದು 1 ಕೋಟಿ ರೂಪಾಯಿ ವರೆಗೆ ಹಣ ಇರುವಂತೆ ದೂರಿನಲ್ಲಿ ಉಲ್ಲೇಖವಾಗಿದೆ. ಆತ ಸಂಗ್ರಹಿಸಿದ ಒಟ್ಟು ಮೊತ್ತ ನೂರಾರು ಕೋಟಿಗಳಿಗೆ ತಲುಪಬಹುದೆಂದು ಅಂದಾಜಿಸಲಾಗಿದೆ.
ಹಣ ಕಳೆದುಕೊಂಡವರಲ್ಲಿ ಟೀ ಅಂಗಡಿ ನಡೆಸುವವರು, ಬೀದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಸೇರಿದಂತೆ ಬಡ ಹಾಗೂ ಮಧ್ಯಮ ವರ್ಗದ ಜನರು ಹೆಚ್ಚಿದ್ದಾರೆ. ಮಕ್ಕಳ ಶಿಕ್ಷಣ, ಮಗಳ ಮದುವೆ, ಮನೆ ನಿರ್ಮಾಣ, ಹೋಟೆಲ್ ಆರಂಭಿಸುವ ಕನಸು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ವರ್ಷಗಳ ಕಾಲ ದುಡಿದು ಕೂಡಿಸಿದ ಹಣವನ್ನು ಚೀಟಿ ರೂಪದಲ್ಲಿ ಇರಿಸಲಾಗಿತ್ತು. ಕಟ್ಟಿದ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬ ಭರವಸೆಯ ಮಾತುಗಳಿಗೆ ಮೋಸಹೋಗಿದ್ದಾರೆ.
200ಕ್ಕೂ ಹೆಚ್ಚು ಜನರಿಂದ ಪೊಲೀಸ್ ದೂರು
ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಬಳಿಕ ವೆಂಕಟೇಶ ಕಳೆದ ತಿಂಗಳು ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಇದುವರೆಗೂ ಆತನ ಸುಳಿವು ಲಭ್ಯವಾಗಿಲ್ಲ. ಬಳ್ಳಾರಿ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ 200ಕ್ಕೂ ಹೆಚ್ಚು ಜನರು ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನಮ್ಮ ಹಣ ವಾಪಸ್ ಕೊಡಿಸುವಂತೆ ವಂಚನೆಗೊಳಗಾದವರು ಪೊಲೀಸರನ್ನು ಬಂಧಿಸುತ್ತಿದ್ದಾರೆ.
ಈ ಪ್ರಕರಣ ಸಂಬಂಧ ಸ್ಥಳೀಯ ಶಾಸಕ ಭರತ್ ರೆಡ್ಡಿ ಕೂಡ ಪೊಲೀಸರೊಂದಿಗೆ ಆರೋಪಿಯನ್ನು ಪತ್ತೆ ಹಚ್ಚಿ ಅಮಾಯಕರ ಹಣ ಮರಳಿಸುವಂತೆ ಮನವಿ ಮಾಡಿದ್ದಾರೆ.
ಮನೆಯವರಿಂದಲೇ ಮಿಸ್ಸಿಂಗ್ ಕೇಸ್!
ವಿಪರ್ಯಾಸವೆಂದರೆ, ವೆಂಕಟೇಶ ಕಾಣೆಯಾಗಿದ್ದಾನೆ ಎಂದು ಆತನ ಕುಟುಂಬದವರು ಮಿಸ್ಸಿಂಗ್ ದೂರು ದಾಖಲಿಸಿರುವ ಮಾಹಿತಿ ಕೂಡ ಲಭ್ಯವಾಗಿದೆ. ಈ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ BSNL ಅಧಿಕಾರಿಗಳು: 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳವು
ಒಟ್ಟಿನಲ್ಲಿ ಹೆಚ್ಚು ಲಾಭದ ಆಸೆಗೆ ಬಿದ್ದು ದುಡಿದ ಹಣವನ್ನು ಹೂಡಿಕೆ ಮಾಡಿದ ನೂರಾರು ಕುಟುಂಬಗಳು ಇದೀಗ ಬೀದಿಗೆ ಬಂದಂತಾಗಿದೆ, ಕಂಗಾಲಾಗಿವೆ. ವಂಚಕನನ್ನು ಶೀಘ್ರ ಪತ್ತೆಹಚ್ಚಿ ಜನರ ಹಣ ಮರಳಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 8:06 am, ಶನಿ, 21 ಫೆಬ್ರವರಿ 26