
ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದ ಬೀರಲಿಂಗೇಶ್ವರ ಜಾತ್ರೆಯಲ್ಲಿ ಅಂಬೇಡ್ಕರ್ ಬಾವುಟ ಹಾರಿಸುವ ವಿಚಾರಕ್ಕೆ ದಲಿತ ಮತ್ತು ಸವರ್ಣೀಯ ಸಮುದಾಯಗಳ ಯುವಕರ ನಡುವೆ ಗಲಾಟೆ ನಡೆದಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ಸಂಘರ್ಷ ಬಿಗುವಿನ ವಾತವರಣ. ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು.
ಕೊಪ್ಪಳ: ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಪ್ರಸಿದ್ಧ ಬೀರಲಿಂಗೇಶ್ವರ ಜಾತ್ರೆ ಸಂಭ್ರಮದಿಂದ ನಡೆಯುತ್ತಿದ್ದ ವೇಳೆ, ಎರಡು ಸಮುದಾಯಗಳ ಯುವಕರ ನಡುವೆ ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಂಭೀರ ಗಲಾಟೆಗೆ ತಿರುಗಿದ ಘಟನೆ ನಡೆದಿದೆ. ಜಾತ್ರೆಯ ಸಂದರ್ಭದಲ್ಲಿ ಅಂಬೇಡ್ಕರ್ ಬಾವುಟ ಹಾರಿಸುವ ವಿಚಾರವನ್ನು ಮುಂದಿಟ್ಟು ದಲಿತರು ಮತ್ತು ಸವರ್ಣೀಯರ ನಡುವೆ ಮಾತಿನ ಚಕಮಕಿ ನಡೆದು, ಇದು ಕ್ರಮೇಣ ಜಗಳವಾಗಿ ಮಾರ್ಪಟ್ಟು ದೊಡ್ಡ ಗಲಾಟೆಗೆ ಕಾರಣವಾಯ್ತು.
ಹಳೆಯ ದ್ವೇಷಕ್ಕೆ ಉಂಟಾದ ಗಲಾಟೆ
ವರದಿ ಪ್ರಕಾರ, ಹಳೆಯ ದ್ವೇಷದ ಹಿನ್ನಲೆಯಲ್ಲಿ ದಲಿತ ಹಾಗೂ ಸವರ್ಣೀಯ ಯುವಕರ ನಡುವೆ ಮೊದಲು ಗಲಾಟೆ ನಡೆದಿದೆ. ಈ ಹಿಂದೆ ಕೂಡ ಹಲವು ವರ್ಷಗಳಿಂದ ದಲಿತರು ಮತ್ತು ಮೇಲ್ಜಾತಿಯವರ ನಡುವೆ ಹಲವು ಬಾರಿ ಗಲಾಟೆಗಳಾಗಿದೆ. ಈ ಯುವಕರ ನಡುವಿನ ಸಂಘರ್ಷ ಕೆಲವೇ ಸಮಯದಲ್ಲಿ ಇಡೀ ಊರಿಗೆ ವ್ಯಾಪಿಸಿ, ಜಾತ್ರೆಯ ವಾತಾವರಣವೇ ಅಶಾಂತಗೊಂಡಿತು. ಪರಿಸ್ಥಿತಿ ನಿಯಂತ್ರಣ ತಪ್ಪುವ ಹಂತಕ್ಕೆ ತಲುಪುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಯಿತು.
ಗಲಾಟೆಯ ನಂತರ ಇತ್ತಂಡಗಳಿಂದ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಯ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಸರ್ಪಗಾವಲು ಹಾಕಿದ್ದಾರೆ.
ಗ್ರಾಮದಲ್ಲಿ ಬಿಗುವಿನ ವಾತಾವರಣ
ಸದ್ಯ ಗಲಾಟೆಗೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಕೊಪ್ಪಳ ಗ್ರಾಮೀಣ ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿದಿದೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಮುಂದುವರಿಸಲಾಗಿದ್ದು, ಶಾಂತಿ ಕಾಪಾಡುವಂತೆ ಗ್ರಾಮಸ್ಥರಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಜಾತ್ರೆಯಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಬೇಕಾದರೆ, ಇಂತಹ ಗಲಾಟೆಗಳು ಸಮಾಜದಲ್ಲಿ ಒತ್ತಡವನ್ನು ಹೆಚ್ಚಿಸುವಂತಾಗುತ್ತವೆ.ಈ ಹಿನ್ನೆಲೆಯಲ್ಲಿ ಎರಡೂ ಸಮುದಾಯಗಳ ಹಿರಿಯರು ಮತ್ತು ಮುಖಂಡರು ಮುಂದೆ ನಿಂತು ಶಾಂತಿ ಕಾಪಾಡುವ ಅಗತ್ಯವಿದೆ.