
ಇನ್ಸ್ಟಾಗ್ರಾಮ್ ಮೂಲಕ ವಿಕಲಚೇತನ ಯುವಕನ ಸ್ನೇಹ ಬೆಳೆಸಿದ ಮಹಿಳೆಯೊಬ್ಬಳು, ಆತನನ್ನು ಹೋಟೆಲ್ಗೆ ಕರೆಸಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ್ದಾಳೆ. ಯುವಕನ ಮೇಲೆ ಹಲ್ಲೆ ನಡೆಸಿ, ಹಣ ಸುಲಿಗೆಗೆ ಯತ್ನಿಸಿದ ಮಹಿಳೆ ಸೇರಿದಂತೆ ನಾಲ್ವರನ್ನು ಕೊಚ್ಚಿಯ ಕಡವಂತ್ರ ಪೊಲೀಸರು ಬಂಧಿಸಿದ್ದಾರೆ.
ಕೊಚ್ಚಿ (ಫೆ.25): ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು, ಮಾತು ಬಾರದ ಹಾಗೂ ಕಿವುಡುತನದ ಸಮಸ್ಯೆಯುಳ್ಳ ವಿಕಲಚೇತನ ಯುವಕನನ್ನು ಹೋಟೆಲ್ಗೆ ಕರೆಸಿ, ಹನಿಟ್ರ್ಯಾಪ್ (Honeytrap) ಮೂಲಕ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಕಡವಂತ್ರ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪರವೂರ್ನ ಸಫ್ನಾ, ವೈಟ್ಟಿಲದ ಜಾನ್ ರಾಹುಲ್, ಇರುಂಪನಂನ ಅಮಲ್ ಮತ್ತು ಮರಡು ಮೂಲದ ಆನಂದ್ ಬಂಧಿತ ಆರೋಪಿಗಳು. ಸಫ್ನಾ ಮತ್ತು ಆನಂದ್ ಕಾಕ್ಕನಾಡ್ನ ಅಪಾರ್ಟ್ಮೆಂಟ್ವೊಂದರಲ್ಲಿ ತಲೆಮರೆಸಿಕೊಂಡಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಈ ಪ್ರಕರಣದಲ್ಲಿ ಸಂಜು ಎಂಬ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಕೊಲ್ಲಂ ಜಿಲ್ಲೆಯ 30 ವರ್ಷದ ವಿಕಲಚೇತನ ಯುವಕನಿಗೆ ಆರೋಪಿ ಸಫ್ನಾ ಇನ್ಸ್ಟಾಗ್ರಾಮ್ ಮೂಲಕ ಸ್ನೇಹ ಬೆಳೆಸಿದ್ದಳು. ಚಾಟಿಂಗ್ ಮೂಲಕ ಆತನ ವಿಶ್ವಾಸ ಗಳಿಸಿದ ಆಕೆ, ಫೆಬ್ರವರಿ 22 ರಂದು ಪನಂಪಿಳ್ಳಿ ನಗರದ ಸೌತ್ ಬ್ರಿಡ್ಜ್ ಸಮೀಪವಿರುವ ಹೋಟೆಲ್ವೊಂದಕ್ಕೆ ಆತನಿಗೆ ಬರುವಂತೆ ಹೇಳಿದ್ದಳು. ಯುವಕ ಬೀಚ್ನಲ್ಲಿ ಭೇಟಿಯಾಗೋಣ ಎಂದು ಹೇಳಿದ್ದರೂ, ಸಫ್ನಾ ಒತ್ತಾಯಿಸಿ ಹೋಟೆಲ್ಗೆ ಕರೆಸಿಕೊಂಡಿದ್ದಳು. ಯುವಕ ಸಂಜೆ 6:30ಕ್ಕೆ ಹೋಟೆಲ್ ರೂಮ್ಗೆ ಬಂದಾಗ, ಆಕೆಯ ಇತರ ಗ್ಯಾಂಗ್ ಸದಸ್ಯರು ಆಗಲೇ ಅಲ್ಲಿ ಹೊಂಚು ಹಾಕಿ ಕುಳಿತಿದ್ದರು. ಕೆಲವರು ಬಾತ್ರೂಮ್ನಲ್ಲಿ ಅಡಗಿದ್ದರೆ, ಉಳಿದವರು ಹೊರಗಿನಿಂದ ಬಂದಿದ್ದರು.
ಯುವಕನೊಂದಿಗೆ ಸಫ್ನಾ ಇರುವ ಅಸಭ್ಯ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುವುದು ಇವರ ಉದ್ದೇಶವಾಗಿತ್ತು. ಯುವಕ ಬಟ್ಟೆ ಬಿಚ್ಚಲು ಮತ್ತು ಅಸಭ್ಯ ಕೃತ್ಯಗಳಲ್ಲಿ ತೊಡಗಲು ನಿರಾಕರಿಸಿದಾಗ, ಗ್ಯಾಂಗ್ ಅಮಾನವೀಯವಾಗಿ ಹಲ್ಲೆ ನಡೆಸಿದೆ. ಯುವಕನ ಮುಖಕ್ಕೆ ಗುದ್ದಿ, ಬೆನ್ನಿಗೆ ಒದ್ದು ಕ್ರೂರವಾಗಿ ನಡೆದುಕೊಳ್ಳಲಾಗಿದೆ. ದೊಡ್ಡ ಟಾರ್ಚ್ನಿಂದ ಆತನ ತಲೆಗೆ ಹೊಡೆಯಲು ಯತ್ನಿಸಿದಾಗ, ಯುವಕ ಕೈ ಅಡ್ಡಹಿಡಿದು ಬಚಾವಾಗಿದ್ದಾನೆ. ಆದರೆ ಆತನ ಕೈಗೆ ತೀವ್ರ ಗಾಯಗಳಾಗಿವೆ.
ಗೂಗಲ್ ಪೇ ಖಾತೆ ಮೇಲೆ ಕಣ್ಣು!
ಯುವಕನ ಗೂಗಲ್ ಪೇ (Google Pay) ಖಾತೆಯನ್ನು ಬಲವಂತವಾಗಿ ಪ್ರವೇಶಿಸಿದ ಗ್ಯಾಂಗ್, ಹಣ ಲೂಟಿ ಮಾಡಲು ಯತ್ನಿಸಿತು. ಆದರೆ ಖಾತೆಯಲ್ಲಿ ಹಣ ಇಲ್ಲದ ಕಾರಣ, ಕೊನೆಗೆ ಯುವಕನ ಬೆತ್ತಲೆ ಫೋಟೋಗಳನ್ನು ತೆಗೆದು ಬೆದರಿಸಿ ಕಳುಹಿಸಿದ್ದರು. ಪೊಲೀಸರು ಆರೋಪಿಗಳ ಫೋನ್ ವಶಪಡಿಸಿಕೊಂಡಿದ್ದು, ಡಿಲೀಟ್ ಆಗಿರುವ ಫೋಟೋಗಳನ್ನು ರಿಕವರಿ ಮಾಡುವ ಪ್ರಯತ್ನದಲ್ಲಿದ್ದಾರೆ.
ಕಾನೂನು ಕ್ರಮ
ಬೆನ್ನುಮೂಳೆಯ ಗಾಯದಿಂದ ಬಳಲುತ್ತಿದ್ದ ಯುವಕ ಫೆಬ್ರವರಿ 24 ರಂದು ದೂರು ನೀಡಿದ್ದಾನೆ. ಯುವಕನಿಗೆ ಮಾತು ಬಾರದ ಕಾರಣ, ಸಂಜ್ಞಾ ಭಾಷಾ ತಜ್ಞರ (Sign Language Expert) ಸಹಾಯದಿಂದ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಹಲ್ಲೆ, ಸುಲಿಗೆ ಮತ್ತು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ ಅಡಿಯಲ್ಲಿ ಕಠಿಣ ಪ್ರಕರಣಗಳನ್ನು ದಾಖಲಿಸಲಾಗಿದೆ.