
ಟಿ20 ವಿಶ್ವಕಪ್ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿರುವ ಭಾರತ, ಸೆಮಿಫೈನಲ್ ರೇಸ್ನಲ್ಲಿ ಉಳಿಯಲು ಜಿಂಬಾಬ್ವೆ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಬೇಕಿದೆ. ಬ್ಯಾಟಿಂಗ್ ವೈಫಲ್ಯದಿಂದ ಕಂಗೆಟ್ಟಿರುವ ತಂಡವು, ಈ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ.
ಚೆನ್ನೈ: ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಹೀನಾಯ ಸೋಲಿನಿಂದಾಗಿ ಈ ಬಾರಿ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ರೇಸ್ನ ಲೆಕ್ಕಾಚಾರವನ್ನೇ ತಲೆಕೆಳಗಾಗುವಂತೆ ಮಾಡಿರುವ ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಈಗ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದೆ. ಸೂಪರ್-8 ಹಂತದ ಕೊನೆ 2 ಪಂದ್ಯಗಳಲ್ಲೂ ದೊಡ್ಡ ಗೆಲುವು ಸಾಧಿಸಬೇಕಿರುವ ಭಾರತ ತಂಡ, ಗುರುವಾರ ಜಿಂಬಾಬ್ವೆ ವಿರುದ್ಧ ಸೆಣಸಾಡಲಿದೆ. ಸೆಮಿಫೈನಲ್ ರೇಸ್ನಲ್ಲಿ ಉಳಿದುಕೊಳ್ಳಬೇಕಿದ್ದರೆ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಮಾತ್ರ ಸಾಲದು. ದೊಡ್ಡ ಅಂತರದಲ್ಲಿ ಗೆದ್ದು, ನೆಟ್ ರನ್ ರೇಟ್ಕೂಡಾ ಉತ್ತಮಪಡಿಸಿಕೊಳ್ಳಬೇಕಿದೆ.
ಗುಂಪು ಹಂತದಲ್ಲಿ ಅಜೇಯವಾಗಿದ್ದ ಭಾರತ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ 76 ರನ್ಗಳಿಂದ ಶರಣಾಗಿತ್ತು. ಹೀಗಾಗಿ ತಂಡದ ನೆಟ್ ರನ್ರೇಟ್ -3.800 ಆಗಿದೆ. ಹೀಗಾಗಿ ಸದ್ಯ ತಂಡದ ಮುಂದಿರುವ ಪ್ರಮುಖ ಗುರಿ ಕೊನೆ 2 ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆದ್ದು, ನೆಟ್ ರನ್ರೇಟ್ ಹೆಚ್ಚಿಸುವುದು. ಒಂದು ವೇಳೆ ತಂಡ ಜಿಂಬಾಬ್ವೆ ವಿರುದ್ಧ ಸೋತರೆ ಸೆಮಿಫೈನಲ್ ಆಸೆ ಬಹುತೇಕ ಭಗ್ನಗೊಳ್ಳಲಿದೆ. ಮತ್ತೊಂದೆಡೆ ಜಿಂಬಾಬ್ವೆ ಕೂಡಾ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಹೀನಾಯವಾಗಿ ಸೋತಿದೆ. ಹೀಗಾಗಿ ಜಿಂಬಾಬ್ವೆಗೂ ಸೆಮಿಫೈನಲ್ ರೇಸ್ನಲ್ಲಿ ಉಳಿಯಲು ಗೆಲುವು ಅಗತ್ಯ.
ಬ್ಯಾಟರ್ಗಳ ಬಗ್ಗೆ ಚಿಂತೆ:
ಭಾರತ ಟೂರ್ನಿಯುದ್ದಕ್ಕೂ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದೆ. ಕೆಲ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಿದರೂ, ಒಂದಿಬ್ಬರು ಉತ್ತಮವಾಗಿ ಆಡಿದ್ದಾರೆಯೇ ಹೊರತು ತಂಡವಾಗಿ ಸಂಘಟಿತ ಪ್ರದರ್ಶನ ತೋರಿಲ್ಲ. ಅಭಿಷೇಕ್ 3 ಪಂದ್ಯದಲ್ಲಿ ಸೊನ್ನೆ ಸುತ್ತಿದ್ದು, ಮತ್ತೊಂದು ಪಂದ್ಯದಲ್ಲಿ 12 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ ಕೆಲ ಪಂದ್ಯದಲ್ಲಿ ಅಬ್ಬರಿಸಿದ್ದರೂ ಸ್ಥಿರ ಆಟವಾಡುತ್ತಿಲ್ಲ. ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಕೂಡಾ ಮಹತ್ವದ ಸನ್ನಿವೇಶಗಳಲ್ಲಿ ಕೈಕೊಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.
ಹೀಗಾಗಿ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ತಂಡದಲ್ಲಿ ಕೆಲ ಬದಲಾವಣೆಗಳಾಗಬಹುದು. ಕಳಪೆ ಲಯದ ಹೊರತಾಗಿಯೂ ಅಭಿಷೇಕ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಅಭಿಷೇಕ್ ಜೊತೆ ಸಂಜು ಸ್ಯಾಮ್ಸನ್ರನ್ನು ಆರಂಭಿಕರನ್ನಾಗಿ ಆಡಿಸಿ, ಇಶಾನ್ ಕಿಶನ್ರನ್ನು 3ನೇ ಕ್ರಮಾಂಕದಲ್ಲಿ ಆಡಿಸಬಹುದು. ಹೀಗಾದರೆ ತಿಲಕ್ ವರ್ಮಾ ಅಥವಾ ರಿಂಕು ಸಿಂಗ್ ಸ್ಥಾನಕ್ಕೆ ಕುತ್ತು ಬರಲಿದೆ. ಇನ್ನು, ವಾಷಿಂಗ್ಟನ್ ಸುಂದರ್ರನ್ನು ಹೊರಬಿಟ್ಟು ಉಪನಾಯಕ ಅಕ್ಷರ್ ಪಟೇಲ್ರನ್ನು ಈ ಪಂದ್ಯದಲ್ಲಿ ಆಡಿಸುವ ಸಾಧ್ಯತೆಯಿದೆ.
ಜಸ್ಪ್ರೀತ್ ಬುಮ್ರಾ ಮುಂದಾಳತ್ವದ ಬೌಲಿಂಗ್ ಪಡೆಯಲ್ಲಿ ಬದಲಾವಣೆ ಸಾಧ್ಯೆತಿಯಿಲ್ಲ. ಅರ್ಶ್ದೀಪ್ ಸಿಂಗ್, ವರುಣ್ ಚಕ್ರವರ್ತಿ ತಜ್ಞ ಬೌಲರ್ಗಳಾಗಿ ತಂಡದಲ್ಲಿ ಮುಂದುವರಿಯಬಹುದು.
ಅಚ್ಚರಿ ಫಲಿತಾಂಶ?:
ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾವನ್ನು ಸೋಲಿಸಿರುವ ಜಿಂಬಾಬ್ವೆಯನ್ನು ಭಾರತ ಲಘುವಾಗಿ ಪರಿಗಣಿಸುವ ಸಾಧ್ಯತೆಯಿಲ್ಲ. ಭಾರತವನ್ನು ಅದರದೇ ತವರಿನಲ್ಲಿ ಸೋಲಿಸುವ ಸಾಮರ್ಥ್ಯ ಜಿಂಬಾಬ್ವೆ ತಂಡಕ್ಕಿದ್ದು, ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಲು ಕಾಯುತ್ತಿದೆ. ಆದರೆ ಸಿಕಂದರ್ ರಾಜಾ ನಾಯಕತ್ವದ ಜಿಂಬಾಬ್ವೆ ಫೀಲ್ಡಿಂಗ್ನಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಿದೆ. ಮುಜರಬಾನಿ, ರಿಚರ್ಡ್ ಎನ್ಗರಾವ, ಬ್ರಾಡ್ ಎವಾನ್ಸ್ ಬೌಲಿಂಗ್ ಆಧಾರಸ್ತಂಭಗಳಾಗಿದ್ದು, ಬ್ಯಾಟಿಂಗ್ನಲ್ಲಿ ಬ್ರಿಯಾನ್ ಬೆನೆಟ್, ಬರ್ಲ್, ರಝಾ ಮಿಂಚಬೇಕಿದೆ.
ಒಟ್ಟು ಮುಖಾಮುಖಿ: 13
ಭಾರತ: 10
ಜಿಂಬಾಬ್ವೆ: 03
ಸಂಭವನೀಯ ಆಟಗಾರರು
ಭಾರತ: ಅಭಿಷೇಕ್, ಸಂಜು, ಇಶಾನ್, ಸೂರ್ಯಕುಮಾರ್(ನಾಯಕ), ಶಿವಂ ದುಬೆ, ಹಾರ್ದಿಕ್, ರಿಂಕು/ತಿಲಕ್, ಅಕ್ಷರ್, ಅರ್ಶ್ದೀಪ್, ವರುಣ್, ಬೂಮ್ರಾ.
ಜಿಂಬಾಬ್ವೆ: ಮರುಮಾನಿ, ಬೆನೆಟ್, ಡಿಯಾನ್, ಬರ್ಲ್, ಸಿಕಂದರ್ ರಝಾ(ನಾಯಕ), ಮುನ್ಯೊಂಗಾ, ಮುಸೆಕಿವಾ, ಎವಾನ್ಸ್, ಕ್ರೀಮರ್, ಮುಜರಬಾನಿ, ಎನ್ಗರಾವ.
ಪಂದ್ಯ: ಸಂಜೆ 7 ಗಂಟೆಗೆ
ಸ್ಟಾರ್ಸ್ಪೋರ್ಟ್ಸ್, ಜಿಯೋಹಾಟ್ಸ್ಟಾರ್
ಪಿಚ್ ರಿಪೋರ್ಟ್
ಚೆನ್ನೈನ ಚೆಪಾಕ್ ಪಿಚ್ ಬ್ಯಾಟರ್ಗಳು ಹಾಗೂ ಸ್ಪಿನ್ನರ್ಗಳಿಗೆ ನೆರವು ನೀಡಿದ ಉದಾಹರಣೆ ಹೆಚ್ಚು. ಈ ವಿಶ್ವಕಪ್ನಲ್ಲಿ ಚೆನ್ನೈನಲ್ಲಿ 6 ಪಂದ್ಯಗಳು ನಡೆದಿದ್ದು, 9 ಬಾರಿ ತಂಡಗಳ ಸ್ಕೋರ್ 170+ ದಾಟಿವೆ. 6 ಪಂದ್ಯಗಳಲ್ಲಿ 3 ಬಾರಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ.
ಭಾರತದಲ್ಲಿ ಭಾರತದ ವಿರುದ್ಧ 24 ವರ್ಷ ಬಳಿಕ ಆಡಲಿರುವ ಜಿಂಬಾಬ್ವೆ!
ಜಿಂಬಾಬ್ವೆ ತಂಡ ಬರೋಬ್ಬರಿ 24 ವರ್ಷಗಳ ಬಳಿಕ ಭಾರತದಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವಾಡಲಿದೆ. ಜಿಂಬಾಬ್ವೆ ಒಮ್ಮೆಯೂ ಭಾರತದಲ್ಲಿ ಭಾರತ ವಿರುದ್ಧ ಟಿ20 ಆಡಿಲ್ಲ. ಇನ್ನು 19 ಏಕದಿನ ಹಾಗೂ 5 ಟೆಸ್ಟ್ ಪಂದ್ಯಗಳನ್ನಾಡಿದ್ದರೂ, ಆ ಪೈಕಿ ಕೊನೆ ಪಂದ್ಯ ನಡೆದಿದ್ದು 2002ರಲ್ಲಿ.