ಮಾರ್ಚ್ ತಿಂಗಳಿನಿಂದ ಪ್ರಾರಂಭವಾಗುವ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗಳು, ವಿದ್ಯಾರ್ಥಿಗಳಿಗೆ ಮನೆಮಾಡಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಲು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿಶೇಷ ಪತ್ರ ಬರೆದು ಧೈರ್ಯ ತುಂಬಿದ್ದಾರೆ.
“ಸಮಾನತೆ ಹಾಗೂ ಸ್ವಾಭಿಮಾನಕ್ಕೆ ಶಿಕ್ಷಣವೇ ಅಸ್ತ್ರ” ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳನ್ನು ನೆನಪಿಸುವ ಸಚಿವರು, ಶಿಕ್ಷಣದ ಮೂಲಕ ಬದುಕು ರೂಪಿಸಿಕೊಳ್ಳಲು ಕರೆ ನೀಡಿದ್ದಾರೆ.
“ಸೋಲು ಅಂತ್ಯವಲ್ಲ, ಯಶಸ್ಸು ಅಂತಿಮವಲ್ಲ, ವಿಫಲತೆ ಅಂತ್ಯವಲ್ಲ; ಧೈರ್ಯವೇ ನಿಜವಾದ ವಿಜಯ” ಎಂದು ಹೇಳುವ ಮೂಲಕ ಮಕ್ಕಳಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಲು ಪ್ರಯತ್ನಿಸಿದ್ದಾರೆ.
ಮಕ್ಕಳ ಮೇಲೆ ಅಂಕಗಳ ಒತ್ತಡ ಹೇರಬೇಡಿ. ಅವರ ಪ್ರಯತ್ನಕ್ಕೆ ಬೆಂಬಲ ನೀಡಿ, ಅವರ ಬೆನ್ನೆಲುಬಾಗಿ ನಿಂತು,” ಎಂದು ಪೋಷಕರಲ್ಲಿ ವಿಶೇಷ ಮನವಿ ಮಾಡಲಾಗಿದೆ.
ತ್ರಿವಿಧ ದಾಸೋಹಿಗಳ ನಾಡಿನ (ಸಿದ್ದಗಂಗಾ ಕ್ಷೇತ್ರ) ಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿರಲಿ ಮತ್ತು ಎಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪರೀಕ್ಷಾ ಒತ್ತಡದಿಂದ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದನ್ನು ಗಮನಿಸಿ, ಅವರಿಗೆ ಬೆಂಬಲ ನೀಡುವ ಉದ್ದೇಶದಿಂದ ಪ್ರತಿಯೊಬ್ಬ ಪಿಯುಸಿ ವಿದ್ಯಾರ್ಥಿಯನ್ನು ತಲುಪುವಂತೆ ಬರೆಯಲಾಗಿದೆ.





