ಬೆಂಗಳೂರು, (ಫೆಬ್ರವರಿ 26): ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಭಾಗಗಳಲ್ಲಿ (ಬೆಂಗಳೂರು) ವಿಪರೀತ ಟ್ರಾಫಿಕ್ ಸಮಸ್ಯೆ (ಸಂಚಾರ) . ಅದರಂತೆ ಬಾಣಸವಾಡಿ ಹಾಗೂ ಔಟರ್ ರಿಂಗ್ ರೋಡ್ ಗೆ ಸಂಪರ್ಕ ಕಲ್ಪಿಸುವ ಮಾರುತಿ ಸೇವಾನಗರ ಸಹ ಒಂದು. ಈ ಭಾಗದಲ್ಲಿ ವಾಹನ ದಟ್ಟಣೆ ವ್ಯಾಪಕವಾಗಿದೆ, ವಾಹನ ಸವಾರರು ರೋಸಿ ಹೋಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ), ಇದಕ್ಕೆ ಮುಕ್ತಿ ನೀಡಲು ಮುಂದಾಗಿದೆ. ಹೌದು… ಬಾಣಸವಾಡಿ ಮುಖ್ಯ ರಸ್ತೆಯ ಐಒಸಿ ಜಂಕ್ಷನ್ನಲ್ಲಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಬಿ-ಸ್ಮೈಲ್ ಮತ್ತು ಕೆ-ರೈಡ್ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆಗೆ ಹಾಜರಾಗಿದ್ದಾರೆ.
ಎಲಿವೇಟೆಡ್ ಮೇಲ್ಸೇತುವೆ ಪ್ಲ್ಯಾನ್
ಅಂದಾಜು 380 ಕೋಟಿ ರೂ. ವೆಚ್ಚದಲ್ಲಿ 3 ರಿಂದ 4 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಮೇಲ್ಸೇತುವೆ ನಿರ್ಮಿಸಲು ಫ್ಲ್ಯಾನ್ ನಡೆದಿದೆ. ಈ ಎಲಿವೇಟೆಡ್ ಮೇಲ್ಸೇತುವೆ ಏನಾದರೂ ನಿರ್ಮಾಣವಾದರೆ ಮಾರುತಿ ಸೇವಾನಗರದ ಟ್ರಾಫಿಕ್ ದಟ್ಟಣೆಗೆ ಮುಕ್ತಿ ದೊರೆಯಲಿದೆ. ಇದನ್ನೇ ಸಾರ್ವಜನಿಕರು ಕಾಯುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸವಾರರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್ ರಸ್ತೆ ಸಂಪರ್ಕಿಸುವ ರಸ್ತೆ ಆರಂಭ
ಮಾರುತಿ ಸೇವಾನಗರ-ಬಾಣಸವಾಡಿ-ಕಮ್ಮನಹಳ್ಳಿ-ಬೈಯ್ಯಪ್ಪನಹಳ್ಳಿ ಸುತ್ತಮುತ್ತ ಸದ್ಯ ವಾಹನ ಸಂಚಾರ ದುಸ್ತರವಾಗಿದೆ. ಪ್ರಸ್ತುತ ಮೇಲ್ಸೇತುವೆ ಅಡಕವಾಗಿದೆ, ವ್ಯವಸ್ಥಿತ ಯೋಜನೆ ಇಲ್ಲದ ಹಿನ್ನೆಲೆ ಕಿರಿದಾಗಿದೆ. ಹೀಗಾಗಿ ಸದಾ ಮಿತಿಮೀರಿದ ಟ್ರಾಫಿಕ್ ಇಲ್ಲಿ ವಾಹನ ಸವಾರರಿಗೆ ನರಕಕೂಪವಾಗುತ್ತಿದೆ. ಹೀಗಾಗಿ ಶೀಘ್ರವೇ ಈ ಮೇಲ್ಸೇತುವೆ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೈಯ್ಯಪ್ಪನಹಳ್ಳಿ ಲೆವೆಲ್ ಕ್ರಾಸಿಂಗ್ನಲ್ಲಿ ಹೆಚ್ಚುವರಿ 2-ಲೇನ್ ಮೇಲ್ಸೇತುವೆ ನಿರ್ಮಾಣ ಕುರಿತು ಕೂಡ ಕೆ-ರೈಡ್ ಮತ್ತು ಬಿ-ಸ್ಮೈಲ್ ಅಧಿಕಾರಿಗಳು ಚರ್ಚಿಸಿದ್ದಾರೆ. ಒಟ್ಟಾರೆ ಮಾರುತಿ ಸೇವಾನಗರದಲ್ಲಿ ಉದ್ಭವಿಸಿರುವ ಟ್ರಾಫಿಕ್ ಜಂಜಾಟಕ್ಕೆ ಮುಕ್ತಿ ಸಿಕ್ಕರೆ, ಸಾವಿರಾರು ಮಂದಿ ನಿಟ್ಟುಸಿರು ಬಿಡಲಿದ್ದಾರೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು