
‘ಮುದ್ದುಸೊಸೆ’ ಧಾರಾವಾಹಿಯ ಮದುವೆ ದೃಶ್ಯದ ಶೂಟಿಂಗ್ ವೇಳೆ, ನಾಯಕ ನಟ ತ್ರಿವಿಕ್ರಮ್, ನಾಯಕಿ ಪ್ರತಿಮಾ ಠಾಕೂರ್ ಅವರಿಗೆ ತಮಾಷೆಗಾಗಿ ನಿಜವಾಗಿಯೂ ಮೂರು ಗಂಟು ಹಾಕಲು ಮುಂದಾದರು. ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ನಟಿ ತಕ್ಷಣವೇ ಅವರ ಕೈಯನ್ನು ತಳ್ಳಿರುವ ವಿಡಿಯೋ ವೈರಲ್ ಆಗಿದೆ.
ಶೂಟಿಂಗ್ ವೇಳೆ ನಟ- ನಟಿಯರು ಅದೆಷ್ಟೋ ಬಾರಿ ಮದುವೆಯಾಗುವುದು ಉಂಟು. ನಾಯಕಿಯರು ತಾಳಿ ಕಟ್ಟಿಸಿಕೊಳ್ಳುವುದು ಉಂಟು. ಆದರೆ ಹಿಂದೂ ಸಂಪ್ರದಾಯದಲ್ಲಿ ಮಂಗಳಸೂತ್ರಕ್ಕೆ ಬಹಳ ಮಹತ್ವ ಇದೆ. ಹಾಗಿದ್ದ ಮೇಲೆ ನಟಿಯರು ಅದು ಹೇಗೆ ಅಷ್ಟು ಸುಲಭವಾಗಿ ತಾಳಿ ಕಟ್ಟಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಹಲವು ಬಾರಿ ವೀಕ್ಷಕರನ್ನು ಕಾಡುವುದು ಉಂಟು. ಆದರೆ ಎಲ್ಲವೂ ವೀಕ್ಷಕರಿಗೆ ತೋರಿಸಿದಂತೆ ಶೂಟಿಂಗ್ ಸಮಯದಲ್ಲಿ ನಡೆಯುವುದಿಲ್ಲ. ಅಲ್ಲಿ ನಾಯಕರು ಮಂಗಳಸೂತ್ರವನ್ನು ಕುತ್ತಿಗೆಗೆ ಕಟ್ಟುವಂತೆ ಮಾಡುತ್ತಾರೆ ಅಷ್ಟೇ. ಆದರೆ ಅಲ್ಲಿ ಮೂರು ಗಂಟು ಹಾಕುವುದಿಲ್ಲ.
ಆದರೆ ಕೆಲವೊಮ್ಮೆ ಶೂಟಿಂಗ್ನಲ್ಲಿ ಫನ್ನಿ ಘಟನೆಗಳೂ ನಡೆಯುವುದು ಉಂಟು. ಅದೇ ರೀತಿ, ಕಲರ್ಸ್ ಕನ್ನಡ ಮುದ್ದುಸೊಸೆ ಸೀರಿಯಲ್ನಲ್ಲಿ ನಡೆದಿದ್ದು, ಅದನ್ನು ಮುದ್ದುಸೊಸೆ ಫ್ಯಾನ್ಸ್ ಪೇಜ್ನಲ್ಲಿ ಶೇರ್ ಮಾಡಲಾಗಿದೆ. ಅಷ್ಟಕ್ಕೂ ಸದ್ಯ ಈ ಸೀರಿಯಲ್ ರೋಚಕ ಹಂತ ತಲುಪಿದೆ. ಸಾವಿತ್ರಿಯ ಕುತಂತ್ರ ಕಾರಣದಿಂದ ಭದ್ರ ಹಾಗೂ ವಿದ್ಯಾ ಸಂಸಾರ ಮುರಿದುಬೀಳುವ ಮಟ್ಟಕ್ಕೆ ಬಂದಿದೆ. ಭದ್ರ – ವಿನಂತಿ ಮದುವೆ ಮಾಡಿಸಬೇಕು ಎನ್ನುವ ಕಾರಣಕ್ಕೆ ಇಂಥದ್ದೊಂದು ಕುತಂತ್ರ ಮಾಡಲಾಗುತ್ತಿದೆ. ಇದರಿಂದ ಶಿವರಾಮೇಗೌಡ, ಭದ್ರ ಹಾಗೂ ವಿದ್ಯಾ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಹೊಸ ಟ್ವಿಸ್ಟ್ ಲಭಿಸಿದೆ. ಪತಿ ಭದ್ರ ಮತ್ತು ವಿನಂತಿ ಒಂದೇ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಇದರಿಂದ ಸೀರಿಯಲ್ನಲ್ಲಿ ಏನಾಗಬಹುದು ಎನ್ನುವ ಕುತೂಹಲ ಇದದ್ದೇ.
ಶೂಟಿಂಗ್ನಲ್ಲಿ ಆಗಿದ್ದೇನು?
ಇದರ ನಡುವೆ ಭದ್ರ ಮತ್ತು ವಿದ್ಯಾ ಮದುವೆ ನಡೆಯುವ ಶೂಟಿಂಗ್ನಲ್ಲಿ, ಭದ್ರ ಪಾತ್ರಧಾರಿ ನಟ ತ್ರಿವಿಕ್ರಮ್ ನಿಜಕ್ಕೂ ವಿದ್ಯಾ ಪಾತ್ರಧಾರಿ ಪ್ರತಿಮಾ ಠಾಕೂರ್ ಅವರಿಗೆ ಮೂರು ಗಂಟು ಹಾಕುವಂತೆ ತಮಾಷೆ ಮಾಡಿದಾಗ, ನಟಿ ಪ್ರತಿಮಾ ಶಾಕ್ ಆಗಿ ಹೋದರು. ಕೂಡಲೇ ನಟನ ಅವರ ಕೈಯನ್ನು ದೂರಕ್ಕೆ ತಳ್ಳಿದರು. ಕೊನೆಗೆ ನಟ ತ್ರಿವಿಕ್ರಮ ತಾವು ತಮಾಷೆ ಮಾಡಿರುವುದಾಗಿ ಜೋರಾಗಿ ನಕ್ಕರು.
ಫನ್ನಿ ವಿಡಿಯೋ
ಈಗ ಶೇರ್ ಮಾಡಲಾಗಿರುವ ವಿಡಿಯೋದಲ್ಲಿ ಮುದ್ದುಸೊಸೆ (Muddu Sose) ಶೂಟಿಂಗ್ನಲ್ಲಿ ನಡೆದ ಕೆಲವೊಂದು ಫನ್ನಿ ಘಟನೆಗಳ ಬಗ್ಗೆ ವಿಡಿಯೋ ನೀಡಲಾಗಿದೆ. ಶೂಟಿಂಗ್ ಸಮಯದಲ್ಲಿ ನಟ-ನಟಿಯರು ಹಾಗೂ ಇಡೀ ಸೀರಿಯಲ್ ತಂಡ ಸೀರಿಯಲ್ ಕೆಲಸದ ನಡುವೆಯೂ ಹೇಗೆಲ್ಲಾ ತಮಾಷೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ನೋಡಬಹುದಾಗಿದೆ.