ಶಾಲೆಯ ಬಾಲಕಿಯರ ಕಿರು ವಸತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಶಾಲೆ ನಡೆಸಲು ಅನುಮತಿ ಪಡೆದಿರಲಿಲ್ಲ ಆಸಾಮಿ!
ದೇವನಹಳ್ಳಿ, ಫೆಬ್ರವರಿ 28: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ (ದೇವನಹಳ್ಳಿ) ಪಟ್ಟಣದಲ್ಲಿನ ವಸತಿ ಶಾಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಆರೋಪಿ ಧನಂಜಯ್ ಬಾಲಕರ ಹಾಸ್ಟೆಲ್ಗೆ ಮಾತ್ರ ಅನುಮತಿ ಪಡೆದಿದ್ದರೂ, ಬಾಲಕಿಯರ ವಸತಿ ವ್ಯವಸ್ಥೆ ಇಲ್ಲದೆ ಅಕ್ರಮವಾಗಿ ನಡೆಸುತ್ತಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ಬಾಲಕರ ವಸತಿ ಶಾಲೆಯ ಪರವಾನಗಿಯನ್ನು ನವೀಕರಿಸಲಾಗಿಲ್ಲ
ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಆರೋಪದ ಬೆನ್ನಲ್ಲೇ ಧನಂಜಯ್ಯನ ಮತ್ತೊಂದು ಅವ್ಯವಹಾರ ಬಟಾಬಯಲಾಗಿದೆ. ಬಾಲಕ ಮತ್ತು ಬಾಲಕಿಯರ ವಸತಿ ಶಾಲೆ ನಡೆಸುತ್ತಿದ್ದ ಧನಂಜಯ್ ಕೇವಲ ಬಾಲಕರ ಶಾಲೆಗೆ ಮಾತ್ರ ಅನುಮತಿ ಪಡೆದಿದ್ದು, ಬಾಲಕಿಯರ ವಸತಿ ಶಾಲೆ ನಡೆಸಲು ಪರವಾನಗಿ ಪಡೆದಿಲ್ಲ ಎಂಬುದು ತಿಳಿದು ಬಂದಿದೆ. ಇದಲ್ಲದೆ ಕಳೆದ ವರ್ಷದಿಂದ ಬಾಲಕರ ಹಾಸ್ಟೆಲ್ ಲೈಸನ್ಸ್ ನವೀಕರಣವೂ ಮಾಡಿಸದ ಆಡಳಿತ ಮಂಡಳಿ ವಸತಿ ಶಾಲೆ ನಡೆಸುತ್ತಿದೆ.
ದೌರ್ಜನ್ಯದ ಘಟನೆ ಬಹಿರಂಗವಾದ ನಂತರವೇ ಹಾಸ್ಟೆಲ್ ಕಾರ್ಯಾಚರಣೆ ಕುರಿತು ಗಮನಕ್ಕೆ ಬಂದಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಶಾಲೆ ವಸತಿ ನಡೆಸಲು ಸಮಾಜ ಕಲ್ಯಾಣ ಅನುಮತಿ ಅಗತ್ಯವೆಂದು ಡಿಡಿಪಿಐ ಸ್ಪಷ್ಟಪಡಿಸಿದ್ದಾರೆ, ಖಾಸಗಿ ಶಾಲೆಗಳು ವ್ಯಾಪ್ತಿಗೆ ಬರುವುದಿಲ್ಲವೆಂದು ಸಮಾಜ ಕಲ್ಯಾಣ ಇಲಾಖೆ ಹೇಳಿದೆ. ಈ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಹಾಗೂ ನಿರ್ಲಕ್ಷ್ಯ ಬಯಲಾಗಿದ್ದರೆ, ಪ್ರಕರಣದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ ಶಾಲೆಯ ಬಾಲಕಿಯರಿಗೆ ಕಿರುಕುಳ; ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸೋ ಕೇಸ್!
ನಡೆದಿದ್ದೇನು?
ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಬಾಲಕಿಯರಿಗೆ ಅದರ ಮಾಲೀಕ ಧನಂಜಯ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪದಡಿ ದೂರು ದಾಖಲಿಸಿದ್ದಾರೆ. ಧನಂಜಯ್ ರಾತ್ರಿವೇಳೆ ಮದ್ಯದ ಅಮಲಿನಲ್ಲಿ ಬಾಲಕಿಯರ ಕೊಠಡಿಗೆ ತೆರಳಿ, ಒಮ್ಮೆ ವಾರ್ಡನ್ ಕೊಠಡಿಗೆ ಕರೆಸಿ ಕಿರುಕುಳ ನೀಡುತ್ತಿದ್ದ. ತಾತನಾಗಿದ್ದರೂ ಪುಟ್ಟ ಬಾಲಕಿಯರ ಮೇಲೆ ದೌರ್ಜನ್ಯ ಎಸಗುತ್ತಿದ್ದವನ ಕರ್ಮಕಾಂಡವನ್ನು ಸಹಿಸಲಾಗದ ಮಕ್ಕಳು ಆತನ ಪತ್ನಿ ಶೈಲಜಾಗೆ ಈ ಬಗ್ಗೆ ಹೇಳಿದ್ದರು. ಆದರೆ ಆಕೆಯೂ ಗಂಡನ ನೀಚ ಕೃತ್ಯಕ್ಕೆ ಸಾಥ್ ನೀಡಿ, ಕಿರುಕುಳದ ಬಗ್ಗೆ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.