
ಇರಾನ್-ಇಸ್ರೇಲ್ ಯುದ್ಧದ ಕಾರಣ ವಿಮಾನಯಾನ ರದ್ದಾಗಿದ್ದು, ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅಬುದಾಬಿಯಲ್ಲಿ ಸಿಲುಕಿದ್ದಾರೆ. ಇದೇ ವೇಳೆ, ಇರಾನ್ನಲ್ಲಿ ಇಂಟರ್ನೆಟ್ ಸ್ಥಗಿತಗೊಂಡಿದ್ದರಿಂದ ಎಂಬಿಬಿಎಸ್ ವಿದ್ಯಾರ್ಥಿಗಳು ಸೇರಿ 150ಕ್ಕೂ ಹೆಚ್ಚು ಕನ್ನಡಿಗರು ಸಂಪರ್ಕಕ್ಕೆ ಸಿಗದೆ ಅತಂತ್ರರಾಗಿದ್ದಾರೆ.
ಬೆಂಗಳೂರು/ಅಬುದಾಬಿ/ಟೆಹ್ರಾನ್ (ಮಾ.01): ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಅಮೆರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಏರ್ ಸ್ಟ್ರೈಕ್ನಿಂದಾಗಿ ಜಾಗತಿಕ ವಿಮಾನಯಾನ ಸಂಸ್ಥೆಗಳು ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ಹಾರಾಟವನ್ನು ರದ್ದುಗೊಳಿಸಿವೆ. ಇದರ ಪರಿಣಾಮವಾಗಿ ಬೆಂಗಳೂರಿಗೆ ಮರಳಬೇಕಿದ್ದ ನೂರಾರು ಪ್ರಯಾಣಿಕರು ವಿವಿಧ ದೇಶಗಳ ವಿಮಾನ ನಿಲ್ದಾಣಗಳಲ್ಲಿ ಬಾಕಿಯಾಗಿದ್ದಾರೆ. ಇವರಲ್ಲಿ ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಕೂಡ ಒಬ್ಬರು.
ಏರ್ಪೋರ್ಟ್ನಿಂದ ಡ್ರೋನ್ ಪ್ರತಾಪ್ ಸೆಲ್ಫಿ ವಿಡಿಯೋ:
ಅಬುದಾಬಿಯಿಂದ ಬೆಂಗಳೂರಿಗೆ ಬರಬೇಕಿದ್ದ ಡ್ರೋನ್ ಪ್ರತಾಪ್, ಅಲ್ಲಿನ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಸೆಲ್ಫಿ ವಿಡಿಯೋ ಹಂಚಿಕೊಂಡಿದ್ದಾರೆ. ‘ನಾನು ಈಗ ಅಬುದಾಬಿ ಏರ್ಪೋರ್ಟ್ನಲ್ಲಿದ್ದೇನೆ. ಇರಾನ್-ಇಸ್ರೇಲ್ ಯುದ್ಧದ ಕಾರಣದಿಂದಾಗಿ ನಮ್ಮ ಇತಿಯಾಡ್ ವಿಮಾನ ಸೇರಿದಂತೆ ಮುಂದಿನ 12 ಗಂಟೆಗಳ ಕಾಲ ಹೊರಡಬೇಕಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಲ್ಲಿ ನೂರಾರು ಪ್ರಯಾಣಿಕರು ಏನು ಮಾಡಬೇಕೆಂದು ತಿಳಿಯದೆ ಕಾಯುತ್ತಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ಎಲ್ಲರನ್ನೂ ಹೊರಗೆ ಕಾಯುವಂತೆ ಸೂಚಿಸಿದ್ದಾರೆ. ಮುಂದಿನ ಅಪ್ಡೇಟ್ಗಾಗಿ ನಾವು ಕಾಯುತ್ತಿದ್ದೇವೆ’ ಎಂದು ಪ್ರತಾಪ್ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಇರಾನ್ನಲ್ಲಿ 150ಕ್ಕೂ ಹೆಚ್ಚು ಕನ್ನಡಿಗರು ಅತಂತ್ರ:
ಒಂದೆಡೆ ವಿಮಾನ ಸಂಚಾರ ರದ್ದಾಗಿದ್ದರೆ, ಇನ್ನೊಂದೆಡೆ ಇರಾನ್ನ ಒಳಗಿರುವ ಕನ್ನಡಿಗರ ಸ್ಥಿತಿ ಗಂಭೀರವಾಗಿದೆ. ಇರಾನ್ನ ರಾಜಧಾನಿ ಟೆಹ್ರಾನ್ ಹಾಗೂ ಕುಮ್ಮು (Qom) ನಗರಗಳಲ್ಲಿ 150ಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದ 100ಕ್ಕೂ ಹೆಚ್ಚು ಮಂದಿ ಅಲ್ಲಿ ಸಿಲುಕಿದ್ದಾರೆ. ಇವರಲ್ಲಿ ಹೆಚ್ಚಿನವರು ಎಂಬಿಬಿಎಸ್ ವ್ಯಾಸಂಗಕ್ಕೆ ಹೋದ ವಿದ್ಯಾರ್ಥಿಗಳಾಗಿದ್ದಾರೆ. ಯುದ್ಧದ ಭೀತಿಯಿಂದಾಗಿ ಇರಾನ್ ಸರ್ಕಾರ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಮಧ್ಯಾಹ್ನದವರೆಗೆ ತಮ್ಮ ಮಕ್ಕಳೊಂದಿಗೆ ಮಾತನಾಡಿದ್ದ ಕರ್ನಾಟಕದ ಪೋಷಕರಿಗೆ ಈಗ ಸಂಪರ್ಕ ಸಾಧ್ಯವಾಗುತ್ತಿಲ್ಲ. ಫೋನ್ ಕರೆಗಳು ಹೋಗುತ್ತಿಲ್ಲ ಹಾಗೂ ಮೆಸೇಜ್ಗಳೂ ತಲುಪುತ್ತಿಲ್ಲ. ಇದರಿಂದಾಗಿ ಅಲಿಪುರದ ಮನೆಮನೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ತಮ್ಮ ಮಕ್ಕಳ ಕ್ಷೇಮದ ಬಗ್ಗೆ ಮಾಹಿತಿ ಇಲ್ಲದೆ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಸುರಕ್ಷಿತವಾಗಿದ್ದಾರೆ ಎಂದ ಇಂಡೋ-ಇರಾನ್ ಚೇಂಬರ್ಸ್:
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡೋ-ಇರಾನ್ ಚೇಂಬರ್ಸ್ ಆಫ್ ಕಾಮರ್ಸ್ನ ರಾಷ್ಟ್ರೀಯ ಅಧ್ಯಕ್ಷ ಹಕೀಮ್ ರಾಜಾ, ‘ನಮ್ಮ ಕುಟುಂಬದವರು ಮತ್ತು ಅನೇಕ ಸಂಬಂಧಿಕರು ಇರಾನ್ನಲ್ಲಿದ್ದಾರೆ. ಮಧ್ಯಾಹ್ನದವರೆಗೆ ಎಲ್ಲರ ಜೊತೆ ಸಂಪರ್ಕವಿತ್ತು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಆದರೆ ಈಗ ಇಂಟರ್ನೆಟ್ ಇಲ್ಲದ ಕಾರಣ ಮುಂದಿನ ಮಾಹಿತಿ ಸಿಗುತ್ತಿಲ್ಲ. 150ಕ್ಕೂ ಹೆಚ್ಚು ಕನ್ನಡಿಗರು ಅಲ್ಲಿರುವುದು ನಿಜ, ಸರ್ಕಾರ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು’ ಎಂದು ವಿನಂತಿಸಿದ್ದಾರೆ. ಒಟ್ಟಾರೆಯಾಗಿ, ಇರಾನ್ ಮತ್ತು ಇಸ್ರೇಲ್ ನಡುವಿನ ಶಕ್ತಿ ಪ್ರದರ್ಶನವು ನೂರಾರು ಮೈಲಿ ದೂರದಲ್ಲಿರುವ ಕನ್ನಡಿಗರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಕೇಂದ್ರ ವಿದೇಶಾಂಗ ಇಲಾಖೆಯು ಇರಾನ್ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಬೇಕಿದೆ.