
ಇರಾನ್-ಇಸ್ರೇಲ್ ಸಂಘರ್ಷದ ಕಾರಣ, ಆಲ್ ಇಂಗ್ಲೆಂಡ್ ಓಪನ್ ಟೂರ್ನಿಗೆ ತೆರಳುತ್ತಿದ್ದ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಬಳಿ ಸ್ಪೋಟದ ಸದ್ದು ಕೇಳಿದ್ದು, ಸದ್ಯ ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಸುರಕ್ಷಿತ ಸ್ಥಳದಲ್ಲಿದ್ದಾರೆ.
ದುಬೈ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಕ್ಷಿಪಣಿ ದಾಳಿಗಳ ಪರಿಣಾಮ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತದ ಸ್ಟಾರ್ ಶಟ್ಲರ್ ಹಾಗೂ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಪಿ.ವಿ. ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.
ಮಂಗಳವಾರ ಆರಂಭಗೊಳ್ಳಲಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಟೂರ್ನಿಗಾಗಿ ಸಿಂಧು ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ಗೆ ಪ್ರಯಾಣಿಸುತ್ತಿದ್ದರು. ಈ ಪ್ರಯಾಣದಲ್ಲಿ ದುಬೈ ಅವರ ಸಂಪರ್ಕ ಕೇಂದ್ರವಾಗಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ಏಕಾಏಕಿ ಉಲ್ಬಣಗೊಂಡ ಸಂಘರ್ಷದಿಂದಾಗಿ ವಿಶ್ವದ ಅತ್ಯಂತ ಜನನಿಬಿಡ ಪ್ರಯಾಣ ಕೇಂದ್ರಗಳಲ್ಲಿ ಒಂದಾಗಿರುವ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ವಿಮಾನ ನಿಲ್ದಾಣದ ಬಳಿ ಸ್ಪೋಟ
ಸಿಂಧು ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ದುಬೈನಲ್ಲಿ ಎದುರಿಸುತ್ತಿರುವ ಸ್ಥಿತಿಗತಿಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. “ವಿಮಾನ ನಿಲ್ದಾಣದ ಸಮೀಪ ಸ್ಪೋಟ ಸಂಭವಿಸುತ್ತಿರುವ ಶಬ್ದಗಳು ಕೇಳಿಸುತ್ತಿವೆ. ಕಳೆದ ಒಂದು ಗಂಟೆಯಿಂದ ಇಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಸದ್ಯ ನಮಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಮತ್ತು ಹೈ ಕಮಿಷನರ್ ಅವರು ನಿರಂತರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ನಮಗೆ ಸಂಪೂರ್ಣ ಸುರಕ್ಷತೆ ಒದಗಿಸಲಾಗುತ್ತಿದೆ,” ಎಂದು ಅವರು ಧನ್ಯವಾದ ಅರ್ಪಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೆ
ನಾವು ಎದುರಿಸುತ್ತಿರುವ ಸಂಕಷ್ಟ ಇನ್ನೂ ಮುಂದುವರಿದೇ ಇದೆ. ಗಂಟೆಗಂಟೆಗೂ ಪರಿಸ್ಥಿತಿ ಹೆಚ್ಚು ಭಯಾನಕವಾಗುತ್ತಿದೆ. ಕೆಲ ಗಂಟೆಗಳ ಹಿಂದೆ, ನಾವು ವಿಮಾನ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದ ಸ್ಥಳದ ಸಮೀಪವೇ ಭಾರೀ ಸ್ಪೋಟ ಸಂಭವಿಸಿತು. ಹೊಗೆ ಮತ್ತು ಅವಶೇಷಗಳಿಗೆ ಅತ್ಯಂತ ಹತ್ತಿರದಲ್ಲಿದ್ದ ನನ್ನ ಕೋಚ್ ತಕ್ಷಣವೇ ಆ ಪ್ರದೇಶದಿಂದ ಹೊರಗೆ ಓಡಬೇಕಾಯಿತು. ಅದು ನಮ್ಮೆಲ್ಲರಿಗೂ ಅತ್ಯಂತ ಉದ್ವಿಗ್ನ ಮತ್ತು ಭಯಾನಕ ಕ್ಷಣವಾಗಿತ್ತು.
ಈಗ ನಾವು ಎಲ್ಲರೂ ಸುರಕ್ಷಿತರಾಗಿದ್ದೇವೆ. ನಾವೆಲ್ಲರೂ ಈಗ ಸುರಕ್ಷಿತರಾಗಿದ್ದೇವೆ ಮತ್ತು ಹೆಚ್ಚು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ, ದುಬೈ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ದುಬೈ ಅಧಿಕಾರಿಗಳ ಅವಿಶ್ರಾಂತ ಪ್ರಯತ್ನಗಳಿಗೆ ಧನ್ಯವಾದಗಳು. ನಮ್ಮ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ನಿರಂತರ ಸಹಕಾರ ನೀಡುತ್ತಿರುವ ದುಬೈನಲ್ಲಿನ ಭಾರತೀಯ ಹೈ ಕಮಿಷನ್ಗೆ ವಿಶೇಷವಾಗಿ ಹೃತ್ಪೂರ್ವಕ ಧನ್ಯವಾದಗಳು. ಪರಿಸ್ಥಿತಿ ಶಾಂತಗೊಳ್ಳಲಿದೆ ಎಂಬ ಆಶಾವಾದದೊಂದಿಗೆ ಕಾಯುತ್ತಿದ್ದೇವೆ.
ವಿಮಾನ ನಿಲ್ದಾಣದಲ್ಲಿ ಸುತ್ತಮುತ್ತ ನಡೆಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿರುವ ಸಿಂಧು, ಇನ್ಸ್ಟಾಗ್ರಾಮ್ನಲ್ಲೂ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮುಂದಿನ ಸೂಚನೆ ದೊರೆಯುವವರೆಗೆ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸಂದೇಶದೊಂದಿಗೆ ವಿಡಿಯೋವನ್ನು ಶೇರ್ ಮಾಡಿರುವ ಅವರು, ಅಲ್ಲಿನ ಉದ್ವಿಗ್ನ ವಾತಾವರಣವನ್ನು ಸ್ಪಷ್ಟವಾಗಿ ತೋರಿಸಿದ್ದಾರೆ.
ಸಿಂಧು ಮಾತ್ರವಲ್ಲದೆ, ವಿವಿಧ ದೇಶಗಳಿಗೆ ತೆರಳಬೇಕಿದ್ದ ಸಾವಿರಾರು ಪ್ರಯಾಣಿಕರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಪರಿಣಾಮ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ, ಜಾಗತಿಕ ವಿಮಾನ ಸಂಚಾರ ತೀವ್ರವಾಗಿ ವ್ಯತ್ಯಯಗೊಂಡಿದೆ.
ಈ ಘಟನೆ, ಯುದ್ಧ ಮತ್ತು ರಾಜಕೀಯ ಸಂಘರ್ಷಗಳು ಕೇವಲ ಗಡಿಗಳಲ್ಲೇ ಸೀಮಿತವಾಗದೆ, ಕ್ರೀಡೆ, ಪ್ರವಾಸೋದ್ಯಮ ಮತ್ತು ಸಾಮಾನ್ಯ ನಾಗರಿಕರ ಬದುಕಿನ ಮೇಲೂ ಎಷ್ಟು ದೊಡ್ಡ ಪರಿಣಾಮ ಬೀರುತ್ತವೆ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ.
Scroll to load tweet…