ದಾವಣಗೆರೆಯ ದುಗ್ಗಮ್ಮ ಜಾತ್ರೆ ಭಕ್ತಿ, ಪರಂಪರೆ ಮತ್ತು ಶೌರ್ಯದ ಸಂಗಮ. ಇನ್ನು ಜಾತ್ರೆ ಪ್ರಯುಕ್ತ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ ಎಲ್ಲರ ಗಮನ ಸೆಳೆಯಿತು. ಪೈಲ್ವಾನರ ಬಿಗಿಪಟ್ಟು ನೋಡುಗರ ಎದೆ ಝಲ್ ಎನಿಸುವಂತಿತ್ತು. ದೇಶ-ವಿದೇಶಗಳಿಂದ ಆಗಮಿಸಿದ ಪೈಲ್ವಾನರ ದಂಗಲ್ ರೋಚಕವಾಗಿತ್ತು.
ದಾವಣಗೆರೆ ಎಂದರೆ ದೇಸಿ ಕುಸ್ತಿಗೆ ಹೆಸರುವಾಸಿ. ದೇಶದ ಗರಡಿಗಳಲ್ಲಿ ಪಳಗಿರುವ ಪೈಲ್ವಾನ್ರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಉದಾಹರಣೆಗಳಿವೆ. ಅದರಂತೆ ದಾವಣಗೆರೆಯಲ್ಲಿ ನಡೆಯುವ ಕೆಂಪು ಮಣ್ಣಿನ ಕುಸ್ತಿ ಅಖಾಡ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಎರಡು ಪ್ರತಿ ವರ್ಷಕ್ಕೊಮ್ಮೆ ದುರ್ಗಾಂಭಿಕ ದೇವಿ ಜಾತ್ರೆ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ಕುಸ್ತಿ ಅಖಾಡದಲ್ಲಿ ಸೆಣಸಾಟ ನಡೆಸಲು ದೇಶ-ವಿದೇಶಗಳಿಂದ ಪೈಲ್ವಾನರು ಆಗಮಿಸುತ್ತಾರೆ.
ಈ ಬಾರಿ ಬೀರಲಿಂಗೇಶ್ವರ ಕುಸ್ತಿ ಅಖಾಡ ತುಸು ಜೋರಾಗಿದೆ. ಎಲ್ಲಿ ನೋಡಿದರೂ ಕಟ್ಟು ಮಸ್ತ್ ಆದ ಪೈಲ್ವಾನರು ಕಾಣಸಿಗುತ್ತಿದ್ದರು. ಅಖಾಡದಲ್ಲಿ ಜಂಗ್ಗಿ ಕುಸ್ತಿ ಮಾಡಲು ತಮ್ಮ ಹೆಸರನ್ನು ನೊಂದಾಯಿಸಿದ್ದರು. ಈ ಅಖಾಡದಲ್ಲಿ ಹೆಸರು ಮಾಡಲು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಪೈಲ್ವಾನರು ಆಗಮಿಸಿದ್ದು ವಿಶೇಷ.
ಹರಿಯಾಣದಿಂದ ಶೇರಾ ಗುಜ್ಜರ್, ವಿಕ್ಕಿ, ಪಂಜಾಬ್ ನಿಂದ ಶಾನ್ ವೀರ್ ಕೊಹಾಲಿ, ಮಹಾರಾಷ್ಟ್ರದಿಂದ ಶಿವ, ಕಾಲಿಚರಣ್ ಸೋಲಂಕರ್, ವಿಕ್ರಮ್ ಘೋರಪಡೆ, ಯುಪಿಯಿಂದ ಅಭಿ ನಾಯಕ್, ರೋಹಿತ್ ಘೋಜಿ, ಕುಹಲಿಯಿಂದ ಲಕ್ಕಿ, ಮತ್ತು ಕರ್ನಾಟಕದಿಂದ ಸಂಜು ಹಾಗೂ ಗಣೇಶ್ ಪೈಲ್ವಾನ್, ಕಾರ್ತಿಕ್ ಕಾಟೆ ಇದ್ದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ನಿಂದ ಜಲಾಲ್ ಹಾಗೂ ಮಿರ್ಜಾ ಪೈಲ್ವಾನ್ ಸೇರಿದಂತೆ ದಕ್ಷಿಣ ಆಫ್ರಿಕಾದಿಂದ ಒಬ್ಬರು, ಈಜಿಪ್ಟ್ನಿಂದ ಒಬ್ಬರು, ಖಜಕಿಸ್ತಾನ್ನಿಂದ ಇಬ್ಬರು ಪೈಲ್ವಾನರು ಸೆಣಸಾಡಲು ಆಗಮಿಸಿದ್ದು ವಿಶೇಷವಾಗಿತ್ತು. ಕೊನೆಯ ವೆಚ್ಚ ಇರಾನ್ ಮಿರ್ಜಾ ಹಾಗೂ ಮಹಾರಾಷ್ಟ್ರದ ರವಿರಾಜ್ ಮಧ್ಯೆ ತೀವ್ರ ಪೈಪೋಟಿ ಏರ್ಪಟಿತ್ತು. ಆದರೆ ಸಮಬಲದಲ್ಲಿ ಪಂದ್ಯ ಅಂತ್ಯವಾಯಿತು.
ದಾವಣಗೆರೆ ದುರ್ಗಾಂಭಿಕಾ ದೇವಿ ಜಾತ್ರೆಯ ಜಂಗಿ ಕುಸ್ತಿ ಇಷ್ಟು ದಿನ ರಾಷ್ಟ್ರೀಯ ಕುಸ್ತಿಯಾಗಿತ್ತು. ಆದರೆ ಈಗ ಅಂತಾರಾಷ್ಟ್ರೀಯ ಕುಸ್ತಿ ಕಣವಾಗಿ ಮಾರ್ಪಟ್ಟಿದೆ. ಕಳೆದ ಮೂರು ವರ್ಷಗಳಿಂದ ಫೈನಲ್ ಪಂದ್ಯ ಮಾತ್ರ ಡ್ರಾ ಆಗುತ್ತಿದೆ, ಬೆಳ್ಳಿ ಗದೆಯನ್ನು ಯಾರು ತೆಗೆದುಕೊಂಡು ಹೋಗುತ್ತಿಲ್ಲ. ಒಟ್ಟಾರೆ ದಾವಣಗೆರೆಯ ದುಗ್ಗಮ್ಮನ ಜಾತ್ರೆ ಭಕ್ತಿಯ ಜೊತೆ ಶೌರ್ಯಕ್ಕೆ ಸಾಕ್ಷಿಯಾಗಿತ್ತು.





