
ಹೊಳೇನರಸೀಪುರದ ಲಕ್ಷ್ಮಿ ನರಸಿಂಹ ಸ್ವಾಮಿ ರಥೋತ್ಸವದ ಅಲಂಕಾರ ವಿಚಾರದಲ್ಲಿ ರಾಜಕೀಯ ನುಸುಳಿದೆ. ಸಂಸದ ಶ್ರೇಯಸ್ ಪಟೇಲ್ ನೀಡಿದ ಬಟ್ಟೆ ಬಳಸಿದ್ದಕ್ಕೆ ರೇವಣ್ಣ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಲಕ್ಷ್ಮಿ ನರಸಿಂಹ ಸ್ವಾಮಿಯ ರಥೋತ್ಸವದಲ್ಲಿ ರಥದ ಅಲಂಕಾರ ವಿಚಾರದಲ್ಲಿ ಗಲಾಟೆ:
ಹಾಸನ: ಮಾಜಿ ಪ್ರಧಾನಿ ದೇವೇಗೌಡರ ತವರು ಹೊಳೆನರಸೀಪುರದ ಲಕ್ಷ್ಮಿ ನರಸಿಂಹ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಾಳೆ ನಡೆಯಲಿದ್ದು, ಅದಕ್ಕಾಗಿ ಸಲ ಸಿದ್ಧತೆಗಳು ನಡೆದಿವೆ. ಹೀಗಿರುವಾಗ ಲಕ್ಷ್ಮಿ ನರಸಿಂಹ ಸ್ವಾಮಿ ರಥೋತ್ಸವದ ಅಲಂಕಾರ ವಿಚಾರದಲ್ಲಿ ಗೊಂದಲ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹಾಸನದ ಸಂಸದ ಕಾಂಗ್ರೆಸ್ನ ಶ್ರೇಯಸ್ ಪಟೇಲ್ ಕೊಡಿಸಿರೋ ಬಟ್ಟೆ ರಥಕ್ಕೆ ಹಾಕಿರುವುದಕ್ಜೆ ಜೆಡಿಎಸ್ನ ಹೆಚ್ ಡಿ ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಹಳೆ ಬಟ್ಟೆ ಈ ಬಾರಿ ಹಾಕೋದು ಅಂತ ತೀರ್ಮಾನ ಆಗಿತ್ತು ಅನ್ನೋದು ರೇವಣ್ಣ ವಾದವಾಗಿದ್ದು, ಇದರಿಂದ ಲಕ್ಷ್ಮೀನರಸಿಂಹ ದೇವಾಲಯದ ಮುಂಭಾಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ದೇವಾಲಯದ ಮುಂಭಾಗಕ್ಕೆ ಆಗಮಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಜೆಡಿಎಸ್ ಕಾರ್ಯಕರ್ತರು ನಾವು ರಥಕ್ಕೆ ಹೂವು ಹಾಕೋದಕ್ಕೂ ಬಿಡೋದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ. ರಥಕ್ಕೆ ಸಂಸದ ಶ್ರೇಯಸ್ ಪಟೇಲ್ ನೀಡಿರುವ ಬಟ್ಟೆಯನ್ನು ತೆಗೆಯುವವರೆಗೂ ಸ್ಥಳ ಬಿಟ್ಟು ಹೋಗಲ್ಲ ಅಂತಾ ರೇವಣ್ಣ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದರಿಮದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು
ದೇವಾಲಯದ ಮುಂಭಾಗವೇ ಶಾಸಕ ಹೆಚ್.ಡಿ.ರೇವಣ್ಣ ಹಾಗೂ ಕಾರ್ಯಕರ್ತರು ನಿಂತಿದ್ದು, ಘೋಷಣೆ ಕೂಗಿದ್ದಾರೆ. ಇದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಘಟನೆಯ ಹಿನ್ನೆಲೆ ಎಸಿ ಹಾಗೂ ತಹಸೀಲ್ದಾರ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ದೇವಾಲಯದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಇದನ್ನೂ ಓದಿ: ಗುಂಡಿನ ಗಮ್ಮತ್ತು: ಬೆಳಗಾವಿ ರಾಯಭಾಗದಲ್ಲಿ ಕಂಠಪೂರ್ತಿ ಕುಡಿದು ಬಾರ್ ಮುಂದೆಯೇ ಮಲಗಿದ ನಾರಿ
ಘಟನೆಗೆ ಸಂಬಂಧಿಸಿದಂತೆ ಹೊಳೆನರಸೀಪುರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಶಾಸಕ ಹೆಚ್.ಡಿ ರೇವಣ್ಣ, ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ ವಿಚಾರವಾಗಿ ನಾವು ಈ ಹಿಂದೆ ತಹಶೀಲ್ದಾರ್ ಜೊತೆ ಸಭೆ ನಡೆಸಿದ್ದೆವು. ಆಗ ರಥೋತ್ಸವದ ಬಗ್ಗೆ ಯಾವುದೇ ತೀರ್ಮಾನ ಆಗಿರಲಿಲ್ಲ, ಹಿಂದಿನಿಂದ ನಡೆದುಕೊಂಡು ಬಂದ ರೀತಿಯೇ ಮುಂದುವರೆಯಲು ತೀರ್ಮಾನ ಆಗಿತ್ತು. ಹೊಸ ಬಟ್ಟೆಯನ್ನ ರಥಕ್ಕೆ ಹಾಕೋ ತೀರ್ಮಾನ ಆಗಿರಲಿಲ್ಲ, ಇಂದು ಮಧ್ಯಾಹ್ನ ಅಧಿಕಾರಿಗಳೇ ಹಳೆ ಬಟ್ಟೆಯನ್ನ ರಥೋತ್ಸವಕ್ಕೆ ಹಾಕಿದ್ದರು. ಆದರೆ ಇಂದು ದಿಢೀರ್ ಆಗಿ ರಥದಿಂದ ಹಳೇ ಬಟ್ಟೆ ತೆಗೆದಿದ್ದಾರೆ. ಕೇಳಿದಾಗ ಇದು ಜಿಲ್ಲಾಧಿಕಾರಿ ಆದೇಶ ಎಂದು ಹೇಳಿದರು.
ಹಾಗಿದ್ರೆ ಜಿಲ್ಲಾಧಿಕಾರಿ ಆದೇಶದ ಪ್ರತಿ ಕೊಡಿ ಎಂದು ಆಗ್ರಹಿಸಿದ್ದೇನೆ. ಇಲ್ಲಿವರೆಗೂ ಯಾವುದೇ ಆದೇಶದ ಪ್ರತಿ ನೀಡಿಲ್ಲ, ನಾನು ಸ್ಥಳೀಯ ಶಾಸಕನಿದ್ದೇನೆ, ನನ್ನನ್ನು ಕಡೆಗಣಿಸಲಾಗಿದೆ, ಒಬ್ಬ ಶಾಸಕನನ್ನ ಕರೆದು ತೀರ್ಮಾನ ಮಾಡಬೇಕಿತ್ತಲ್ವಾ? ಇದರಿಂದ ನನ್ನ ಹಕ್ಕಿಗೆ ಚ್ಯುತಿ ಬಂದಿದೆ. ಆದರೂ ಪರವಾಗಿಲ್ಲ, ರಥೋತ್ಸವ ನಡೆಯಲಿ ನನ್ನ ಅಭ್ಯಂತರವಿಲ್ಲ, ನನಗೆ ರಥೋತ್ಸವ ನಿಲ್ಲಿಸೋ ಉದ್ದೇಶವೇನಿಲ್ಲ ಯಾರದ್ದೋ ಕುಮ್ಮಕ್ಕಿಗೆ ಹೀಗೆ ಮಾಡುತ್ತಿರಬಹುದು ಸರಿಯಾದ ರೀತಿ ರಥೋತ್ಸವ ನಡೆಸಲಿ, ಸ್ವ ಹಿತಾಸಕ್ತಿಯಿಂದ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.