![]()
ಟಿ20 ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಸಿಡಿಸಿ ಭಾರತವನ್ನು ಸೆಮಿಫೈನಲ್ಗೆ ತಲುಪಿಸಿದ ಸಂಜು ಸ್ಯಾಮ್ಸನ್ಗೆ ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆ ಎದುರಾಗಿದೆ. ಈ ಕುರಿತು ಕೇರಳ ಕಾಂಗ್ರೆಸ್ ಘಟಕವು ಕೇಂದ್ರ ಸಚಿವರಿಗೆ ದೂರು ನೀಡಿದೆ.
ಕೋಲ್ಕತಾ: ಟಿ20 ವಿಶ್ವಕಪ್ನ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಭಾರತ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನ ಹೀರೋ, ಕೇರಳದ ಆಟಗಾರ ಸಂಜು ಸ್ಯಾಮ್ಸನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆ ಮಾಡಲಾಗಿದೆ. ಈ ಬಗ್ಗೆ ಕೇರಳ ಕಾಂಗ್ರೆಸ್ ಘಟಕ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ದೂರು ನೀಡಿದೆ.
ಸಂಜು ಸ್ಯಾಮ್ಸನ್ ಮೈಬಣ್ಣದ ಬಗ್ಗೆ ಅವಮಾನಕರ ಪೋಸ್ಟ್
ಭಾನುವಾರ ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ಈ ಪಂದ್ಯ ನಡೆದಿತ್ತು. ಸಂಜು 50 ಎಸೆತಗಳಲ್ಲಿ ಅಜೇಯ 97 ರನ್ ಸಿಡಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದರು. ಪಂದ್ಯ ಮುಗಿದ ಬೆನ್ನಲ್ಲೇ ‘X’ (ಹಿಂದಿನ ಟ್ವಿಟರ್) ನಲ್ಲಿ ವಿವಾದಾತ್ಮಕ ಪೋಸ್ಟ್ ಒಂದು ಕಾಣಿಸಿಕೊಂಡಿದೆ. ಸಂಜು ಫೋಟೋ ಹಾಕಿ, ‘ಕಪ್ಪು ಶಕ್ತಿಗಳನ್ನು ಸೋಲಿಸಲು ಕಪ್ಪು ಶಕ್ತಿಗಳಿಗೇ ಸಾಧ್ಯ, ಚೆನ್ನಾಗಿ ಆಡಿದ್ದೀಯಾ ಸಂಜು ಸ್ಯಾಮ್ಸನ್’ ಎಂದು ಬರೆಯಲಾಗಿತ್ತು. ಈ ಪೋಸ್ಟ್ ವೆಸ್ಟ್ ಇಂಡೀಸ್ ಆಟಗಾರರು ಮತ್ತು ಸಂಜು ಇಬ್ಬರನ್ನೂ ಗುರಿಯಾಗಿಸಿಕೊಂಡಿತ್ತು.
ಈ ಪೋಸ್ಟ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಜು ಅವರ ಮೈಬಣ್ಣವನ್ನು ನಿಂದಿಸುವ ಈ ಪೋಸ್ಟ್ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ಘಟನೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇರಳ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಿ ‘X’ ಮೂಲಕವೇ ತಮ್ಮ ಆಕ್ರೋಶವನ್ನು ಹೊರಹಾಕಿದೆ.
Scroll to load tweet…
‘ಇಂತಹ ಕೆಟ್ಟ ಜನಾಂಗೀಯ ನಿಂದನೆಗೆ ಭಾರತದಲ್ಲಿ ಜಾಗವಿಲ್ಲ. ಕೇರಳದ ಹೆಮ್ಮೆಯಾದ ಸಂಜು ಸ್ಯಾಮ್ಸನ್ ಅವರನ್ನು ಗುರಿಯಾಗಿಸಿ ಇಂತಹ ಅಸಹ್ಯಕರ ಕಾಮೆಂಟ್ ಪೋಸ್ಟ್ ಮಾಡಿದ ಖಾತೆಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಕೇಂದ್ರ ಸಚಿವರನ್ನು ಒತ್ತಾಯಿಸುತ್ತೇವೆ’ ಎಂದು ಕಾಂಗ್ರೆಸ್ ತನ್ನ ಪೋಸ್ಟ್ನಲ್ಲಿ ಹೇಳಿದೆ. ಅತ್ತ, ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸಂಜು, ತಾನು ಸದ್ಯಕ್ಕೆ ಸೋಶಿಯಲ್ ಮೀಡಿಯಾ ಮತ್ತು ಫೋನ್ನಿಂದ ದೂರ ಉಳಿದಿರುವುದಾಗಿ ಹೇಳಿಕೊಂಡಿದ್ದಾರೆ.
‘ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇತ್ತು. ಫೋನ್ ಮತ್ತು ಸೋಶಿಯಲ್ ಮೀಡಿಯಾ ಆಫ್ ಮಾಡಿ, ನನ್ನ ಮೇಲೆ ನಾನು ಗಮನ ಹರಿಸಿದೆ. ಇಂತಹ ಮಹತ್ವದ ಪಂದ್ಯದಲ್ಲಿ ತಂಡವನ್ನು ಗೆಲ್ಲಿಸಿದ್ದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಸಂಜು ಹೇಳಿದ್ದಾರೆ. ಹೊರಗಿನ ಟೀಕೆಗಳು ಅಥವಾ ನಿಂದನೆಗಳು ತನ್ನ ಆಟದ ಮೇಲೆ ಪರಿಣಾಮ ಬೀರದಂತೆ ಸಂಜು ತೋರಿದ ಎಚ್ಚರಿಕೆಯನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ಆದರೆ, ಸಂಜು ವಿರುದ್ಧದ ಈ ಸೈಬರ್ ದಾಳಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ.
ಹೇಗಿತ್ತು ಸಂಜು ಸ್ಯಾಮ್ಸನ್ ಆಟ?
ವೆಸ್ಟ್ ಇಂಡೀಸ್ ನೀಡಿದ್ದ 196 ರನ್ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ತಲಾ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಸೂರ್ಯ 16 ಎಸೆತಗಳನ್ನು ಎದುರಿಸಿ ಕೇವಲ 18 ರನ್ ಬಾರಿಸಿದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರು, ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 97 ರನ್ ಸಿಡಿಸುವ ಮೂಲಕ ತಂಡವನ್ನು ಇನ್ನೂ 4 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿಸಿದರು.
ಸೆಮಿಫೈನಲ್ನಲ್ಲಿ ಭಾರತ-ಇಂಗ್ಲೆಂಡ್ ಫೈಟ್!
ಇದೀಗ ಹಾಲಿ ಚಾಂಪಿಯನ್ ಟೀಂ ಇಂಡಿಯಾ ಎರಡನೇ ಸೆಮಿಫೈನಲ್ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಮಾರ್ಚ್ 05ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಮುಂಬೈನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ.