
ಗಂಗಾವತಿಯಲ್ಲಿ ಇರಾನ್ ನಾಯಕ ಖಮೇನಿ ಹತ್ಯೆ ಕುರಿತ ಇನ್ಸ್ಟಾಗ್ರಾಂ ಸ್ಟೇಟಸ್ ಎರಡು ಗುಂಪುಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಸಮಾಜದಲ್ಲಿ ಶಾಂತಿ ಕದಡಿದ ಆರೋಪದ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಎರಡೂ ಕಡೆಯ ಐವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಕೊಪ್ಪಳ (ಮಾ.04): ಇತ್ತೀಚೆಗೆ ನಡೆದ ಇರಾನ್ನ ಸರ್ವೋಚ್ಚ ಧರ್ಮಗುರು ಅಯತೊಲ್ಲಾ ಅಲಿ ಖಮೈನಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ಸ್ಟೇಟಸ್ವೊಂದು ಗಂಗಾವತಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗಂಗಾವತಿ ನಗರ ಠಾಣೆಯ ಪೊಲೀಸರು, ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ ಆರೋಪದ ಮೇಲೆ ಎರಡೂ ಕಡೆಯವರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ:
ನಗರದ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚಿನ್ನಿ ಎಂಬ ಯುವಕ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಖಮೈನಿ ಹತ್ಯೆ ಕುರಿತಾದ ಸ್ಟೇಟಸ್ ಹಾಕಿದ್ದನು. ಈ ವಿಚಾರವಾಗಿ ಅನ್ಯಕೋಮಿನ ಯುವಕರು ತನಗೆ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದನು. ಆದರೆ, ಪೊಲೀಸರ ತನಿಖೆಯ ವೇಳೆ ಈ ಗಲಾಟೆಯು ಎರಡು ಹಂತಗಳಲ್ಲಿ ನಡೆದಿರುವುದು ಮತ್ತು ಎರಡೂ ಕಡೆಯವರಿಂದ ಪ್ರಚೋದನೆ ಉಂಟಾಗಿರುವುದು ಬೆಳಕಿಗೆ ಬಂದಿದೆ.
ಮಸೀದಿ ಬಳಿ ಶುರುವಾದ ಜಗಳ:
ಪೊಲೀಸ್ ದೂರಿನ ಪ್ರಕಾರ, ನಿನ್ನೆ ಸಂಜೆ ಸುಮಾರು 6:10ರ ವೇಳೆಗೆ ನಗರದ ದೊಡ್ಡ ಜಾಮೀಯಾ ಮಸೀದಿ ಹತ್ತಿರ ಖರ್ಜೂರ ವ್ಯಾಪಾರಕ್ಕೆ ಬಂದಿದ್ದ ಚಂದ್ರಶೇಖರ್ ಮತ್ತು ಸಾಹಿಲ್ ನಡುವೆ ಸ್ಟೇಟಸ್ ವಿಚಾರಕ್ಕೆ ಮಾತಿನ ಚಕಮಕಿ ನಡೆದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ಅಲ್ಲಿಂದ ಕಳುಹಿಸಿದ್ದರು. ಆದರೆ, ಈ ವಿವಾದ ಅಲ್ಲಿಗೆ ಮುಗಿಯಲಿಲ್ಲ.
ಸಂತೆ ಬಯಲಿನಲ್ಲಿ ಎರಡನೇ ಸುತ್ತಿನ ಗಲಾಟೆ:
ಅದೇ ದಿನ ರಾತ್ರಿ 8:15ರ ಸುಮಾರಿಗೆ ಸಂತೆ ಬಯಲು ಪ್ರದೇಶದಲ್ಲಿ ಚಂದ್ರಶೇಖರ್, ಸುರೇಶ್ ಮತ್ತು ಸಾಹಿಲ್, ಇಮ್ರಾನ್ ಹಾಗೂ ಸರ್ಫರಾಜ್ ತಂಡಗಳು ಮತ್ತೆ ಮುಖಾಮುಖಿಯಾಗಿವೆ. ಈ ವೇಳೆ ಎರಡೂ ಕಡೆಯವರು ಗುಂಪು ಸೇರಿಕೊಂಡು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಸಾರ್ವಜನಿಕವಾಗಿ ಗದ್ದಲ ಸೃಷ್ಟಿಸಿದ್ದಾರೆ. ಈ ವರ್ತನೆಯು ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವಂತಿದ್ದ ಕಾರಣ, ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿದ್ದಾರೆ.
ಐವರ ವಿರುದ್ಧ ಎಫ್ಐಆರ್ ದಾಖಲು:
ಕೇವಲ ವ್ಯಕ್ತಿಗತ ದೂರುಗಳನ್ನು ಆಧರಿಸದೆ, ನಗರದ ಶಾಂತಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಗಂಗಾವತಿ ನಗರ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ಚಂದ್ರಶೇಖರ್ ಅಲಿಯಾಸ್ ಚಿನ್ನಿ, ಸುರೇಶ್, ಸಾಹಿಲ್, ಇಮ್ರಾನ್ ಮತ್ತು ಸರ್ಫರಾಜ್ ಸೇರಿದಂತೆ ಇತರರ ಮೇಲೆ 194(2) ಬಿಎನ್ ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಎಚ್ಚರಿಕೆ:
ಸೋಶಿಯಲ್ ಮೀಡಿಯಾದಲ್ಲಿ ಸೂಕ್ಷ್ಮ ವಿಚಾರಗಳ ಬಗ್ಗೆ ಪೋಸ್ಟ್ ಹಾಕುವಾಗ ಎಚ್ಚರಿಕೆ ವಹಿಸಬೇಕು ಮತ್ತು ಯಾವುದೇ ಪೋಸ್ಟ್ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗಂಗಾವತಿ ಪೊಲೀಸರು ಎಚ್ಚರಿಸಿದ್ದಾರೆ. ಸದ್ಯ ನಗರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದ್ದು, ವದಂತಿಗಳಿಗೆ ಕಿವಿಗೊಡದಂತೆ ನಾಗರಿಕರಲ್ಲಿ ಮನವಿ ಮಾಡಲಾಗಿದೆ.