ಕುಂಬಳಗೋಡು ಠಾಣೆ ಪಿಐ ವಿರುದ್ಧ 10 ಲಕ್ಷ ರೂ.ಲಂಚ ಕೇಳಿದ ಆರೋಪ: ಪೊಲೀಸ್ ಆಯುಕ್ತರಿಗೆ ವಕೀಲರಿಂದ ದೂರು
ಬೆಂಗಳೂರು, ಮಾರ್ಚ್ 05: ಲಂಚ ಪಡೆದ ಆರೋಪದಡಿ ಕುಂಬಳಗೋಡು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಗಂಭೀರ ದೂರು ದಾಖಲಾಗಿದೆ. ಪಿಐ ಮಂಜುನಾಥ ಹೂಗಾರ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ನಂತರ 30 ಸಾವಿರ ರೂ. ಪಡೆದು ಮೂವರನ್ನು ಬಿಡಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ವಕೀಲ ವರ್ಷಿತ್ ರೆಡ್ಡಿ ಅವರು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೂರು.
ಅಕ್ರಮ ಬಂಧನದಲ್ಲಿಟ್ಟು ಲಂಚಕ್ಕೆ ಬೇಡಿಕೆ
ಫೆಬ್ರವರಿ 25 ರಂದು ಕುಂಬಳಗೋಡು ಠಾಣಾ ವ್ಯಾಪ್ತಿಯ ಎಂ.ಆರ್. ಬಾರ್ನಲ್ಲಿ ರಾಕೇಶ್, ಸ್ವಾಮಿ ಮತ್ತು ಗೋಪಿ ಎಂಬ ಮೂವರು ಕ್ಯಾಶಿಯರ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಘಟನೆ ವೇಳೆ ಬಾರ್ ಸಿಬ್ಬಂದಿ ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಮೂವರನ್ನು ಠಾಣೆಗೆ ಕರೆದೊಯ್ದಿದ್ದರು. ಮೂವರನ್ನು ಸುಮಾರು ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಹಣಕ್ಕೆ ಬೇಡಿಕೆ ಇಡಲಾಗಿದೆ. ಈ ವೇಳೆ ರಾಕೇಶ್ ತನ್ನ ಸ್ನೇಹಿತ ಕಾರ್ತಿಕ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನಂತರ ಕಾರ್ತಿಕ್ ಕುಂಬಳಗೋಡು ಠಾಣೆಗೆ ತೆರಳಿ ವಿಚಾರಿಸಿದಾಗ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಎಂದು ದೂರದಲ್ಲಿ ನಮೂದಿಸಲಾಗಿದೆ.
ಇದನ್ನೂ ಓದಿ ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ!
ನಂತರ ವಕೀಲರೊಂದಿಗೆ ಸ್ಥಳಕ್ಕೆ ತೆರಳಿದಾಗಲೂ ಲಂಚಕ್ಕಾಗಿ ಒತ್ತಾಯಿಸಲಾಗಿದೆ. ಕೊನೆಗೆ 30 ಸಾವಿರ ರೂ. ಹಣ ಪಡೆದು ಮೂವರನ್ನು ಬಿಡಿಸಿದ್ದಾಗಿ ಆರೋಪಿಸಲಾಗಿದೆ. ಇನ್ನು ಪಿಐ ಮಂಜುನಾಥ ಹೂಗಾರ ಲಂಚ ಕೇಳುತ್ತ ಹೇಳಿದ ವಿಡಿಯೋವೂ ಸೆರೆ ಹಿಡಿದಿದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.