
ಕಲಬುರಗಿಯಲ್ಲಿ ನಡೆದ ದಿಶಾ ಸಭೆಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಂಸದ ರಾಧಾಕೃಷ್ಣ ದೊಡ್ಮನಿ ಆನ್ಲೈನ್ನಲ್ಲಿ ಭಾಗವಹಿಸಿದ್ದನ್ನು ಮಾಜಿ ಸಂಸದ ಉಮೇಶ್ ಜಾಧವ್ ತೀವ್ರವಾಗಿ ಟೀಕಿಸಿದ್ದಾರೆ. ಇವರನ್ನು ‘ಆನ್ಲೈನ್ ಮಂತ್ರಿಗಳು’ ಎಂದು ಕರೆದ ಜಾಧವ್, ಕಾಟಾಚಾರಕ್ಕೆ ಸಭೆ ನಡೆಸಿದ್ದಾರೆ ಎಂದು ಕಿಡಿಕಾರಿದರು..
ಕಲಬುರಗಿ (ಮಾ.5): ಕಲಬುರಗಿಯಲ್ಲಿ ನಡೆದ ದಿಶಾ ಮೀಟಿಂಗ್ ಕೇವಲ ಹೆಸರಿಗೆ ಮಾತ್ರ. ಸಂಸದರು, ಸಚಿವರು ಆನ್ ಲೈನ್ ಪಾಲ್ಗೊಂಡಿದ್ದಾರೆ. ನೇರವಾಗಿ ಮೀಟಿಂಗ್ ಮಾಡಲು ಇವರಿಗೆ ಪುರುಸೊತ್ತಿಲ್ಲ. ಪ್ರೀಯಾಂಕ್ ಖರ್ಗೆ ಆನ್ಲೈನ್ ಮಿನಿಸ್ಟರ್ ಆಗಿದ್ದಾರೆ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಡಾ ಉಮೇಶ್ ಜಾಧವ್ ಕಿಡಿಕಾರಿದರು.
ಕಲಬುರಗಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಉಮೇಶ್ ಜಾಧವ್, ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ದಿಶಾ ಮೀಟಿಂಗ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಂಸದ ರಾಧಾಕೃಷ್ಣ ದೊಡ್ಮನಿ ಅವರು ಬೆಂಗಳೂರಿನಿಂದ ಆನ್ ಲೈನ್ ನಲ್ಲಿ ಪಾಲ್ಹೊಂಡಿದ್ದರು. ಹಾಗಾಗಿ ಇವರೆಲ್ಲಾ ಆನ್ ಲೈನ್ ಮಿನಿಸ್ಟರ್ಸ್. ನಮ್ಮ ಸರ್ಕಾರ ಇದ್ದಾಗ, ನಾನು ಸಂಸದನಾಗಿದ್ದಾಗ ಹೀಗೆ ಮಾಡಿಲ್ಲ, ಖುದ್ದಾಗಿ ಭಾಗಿಯಾಗಿದ್ದೆ ಆದರೆ ಇವರು(ಪ್ರಿಯಾಂಕ್ ಖರ್ಗೆ) ಬಹಳ ಒತ್ತಾಯದ ನಂತರ ಮೀಟಿಂಗ್ ಕರೆದಿದ್ರು. ಇಷ್ಟಾದ್ರೂ ಮೀಟಿಂಗ್ನಲ್ಲಿ ನೇರವಾಗಿ ಭಾಗವಹಿಸದೇ ಕಾಟಾಚಾರಕ್ಕೆ ಎನ್ನುವಂತೆ ಆನ್ ಲೈನ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಉಮೇಶ ಜಾಧವ್ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಗೆ ಬಂದು ಮಿಟಿಂಗ್ ಮಾಡೋಕೆ ಸಚಿವರಿಗೂ ಮತ್ತು ಸಂಸದರಿಗೂ ಫುರುಸೊತ್ತಿಲ್ಲ ಎಂದರೆ ಇವರೇನು ಅಭಿವೃದ್ಧಿ ಮಾಡ್ತಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.