Jr NTR Bangalore visit: ಕರ್ನಾಟಕ ನನ್ನ ಅಮ್ಮನ ಮನೆ: ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ | Jr Ntr Speaks In Kannada At Kims Hospital New Building Inauguration Bengaluru

Jr NTR Bangalore visit: ಕರ್ನಾಟಕ ನನ್ನ ಅಮ್ಮನ ಮನೆ: ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲೇ ಭಾಷಣ | Jr Ntr Speaks In Kannada At Kims Hospital New Building Inauguration Bengaluru


ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಜೂನಿಯರ್ ಎನ್‌ಟಿಆರ್, ಕನ್ನಡದಲ್ಲಿಯೇ ಮಾತನಾಡಿ ಅಭಿಮಾನಿಗಳ ಮನಗೆದ್ದರು. ತಮ್ಮ ತಾತ ಇದೇ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದನ್ನು ಮತ್ತು 2009ರ ಅಪಘಾತದ ನಂತರ ಇದೇ ಆಸ್ಪತ್ರೆ ತಮ್ಮ ಪ್ರಾಣ ಉಳಿಸಿದ್ದನ್ನು  ಭಾವನಾತ್ಮಕವಾಗಿ ಸ್ಮರಿಸಿದರು..

ಬೆಂಗಳೂರು (ಮಾ.8): ಬೆಂಗಳೂರಿನಲ್ಲಿ ನಡೆದ ಕಿಮ್ಸ್ (KIMS) ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಜೂನಿಯರ್ ಎನ್‌ಟಿಆರ್, ಕನ್ನಡದಲ್ಲೇ ಮಾತನಾಡುವ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ‘ಎಲ್ಲರಿಗೂ ನಮಸ್ಕಾರ’ಎನ್ನುತ್ತಲೇ ಮಾತು ಆರಂಭಿಸಿದರು. ಕರ್ನಾಟಕದೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು.

ಕರ್ನಾಟಕಕ್ಕೆ ಬರುವುದು ಯಾವಾಗಲೂ ನನಗೆ ಖುಷಿ ಕೊಡುತ್ತೆ

ತಮ್ಮ ತಾಯಿಯ ಹುಟ್ಟೂರು ಕುಂದಾಪುರ ಎನ್ನುವುದನ್ನು ಹೆಮ್ಮೆಯಿಂದ ಸ್ಮರಿಸಿದ ತಾರಕ್, ಕರ್ನಾಟಕಕ್ಕೆ ಬರುವುದು ನನಗೆ ಯಾವಾಗಲೂ ಬಹಳ ಖುಷಿ ಕೊಡುತ್ತದೆ. ಕರ್ನಾಟಕಕ್ಕೆ ಬರೋದಂದ್ರೆ ನನಗೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದ ಹಾಗೆ ಫೀಲ್ ಆಗುತ್ತೆ ಎಂದು ಹೇಳುವ ಮೂಲಕ ಎನ್‌ಟಿಆರ್ ಮತ್ತೊಮ್ಮೆ ಕನ್ನಡಿಗರ ಮನಸು ಗೆದ್ದರು.

ತಾತನ ಶಂಕುಸ್ಥಾಪನೆ; ಮೊಮ್ಮಗನಿಂದ ಉದ್ಘಾಟನೆ!

ಇವತ್ತು ನಾನು ಬಂದಿರುವುದು ಕೇವಲ ಕಾರ್ಯಕ್ರ ಅಲ್ಲ, ಇದರೊಂದಿಗೆ ನನಗೆ ಭಾವನಾತ್ಮಕ ನಂಟಿದೆ ಎಂದ ಎನ್‌ಟಿಆರ್, ನಮ್ಮ ತಾತನವರು (ಮೇರು ನಟ ಎನ್.ಟಿ. ರಾಮರಾವ್) 1983ರಲ್ಲಿ ಇದೇ ಕಾಲೇಜಿಗೆ ಶಂಕುಸ್ಥಾಪನೆ ಮಾಡಿದ್ದರು. ಅಷ್ಟು ವರ್ಷಗಳ ನಂತರ, ಅದೇ ಮಾರ್ಚ್ ತಿಂಗಳಿನಲ್ಲಿ ನನ್ನ ಕೈಯಿಂದ ಈ ಆಸ್ಪತ್ರೆ ಉದ್ಘಾಟನೆ ಆಗುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯ. ಆ ಮಹಾನುಭಾವನ ಮತ್ತು ಅಭಿಮಾನಿಗಳ ಆಶೀರ್ವಾದದಿಂದ ನಾನಿಲ್ಲಿ ನಿಂತಿದ್ದೇನೆ’ ಎಂದು ಭಾವುಕರಾದರು.

ಜೀವ ಉಳಿಸಿದ ಕಿಮ್ಸ್ ಸಿಬ್ಬಂದಿಗೆ ಕೃತಜ್ಞತೆ

2009ರಲ್ಲಿ ಭೀಕರ ಅಪಘಾತದ ದಿನಗಳನ್ನು ಸ್ಮರಿಸಿದ ಎನ್‌ಟಿಆರ್, ‘ಅಂದು ಅಪಘಾತವಾದಾಗ ನನ್ನನ್ನು ಕಾಪಾಡಿದ್ದು ಇದೇ ಭಾಸ್ಕರ್ ರಾವ್ ಮತ್ತು ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ ವರ್ಗ. ಅವರಿಗೆ ನಾನು ಜನ್ಮಜನ್ಮಾಂತರಕ್ಕೂ ಋಣಿಯಾಗಿರುತ್ತೇನೆ. ಅವರು ನನಗೆ ಕೇವಲ ವೈದ್ಯರಲ್ಲ, ನನ್ನ ಕುಟುಂಬದ ಸದಸ್ಯರಿದ್ದಂತೆ’ ಎಂದು ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಕಿಮ್ಸ್ ಆಸ್ಪತ್ರೆ ದೇಶದಲ್ಲೇ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಅವರು ಹಾರೈಸಿದರು.

ಜಾಗ್ರತೆಯಿಂದ ಮನೆಗೆ ಹೋಗಿ: ಅಭಿಮಾನಿಗಳಿಗೆ ಕಳಕಳಿಯ ವಿನಂತಿ

ಭಾಷಣದ ಕೊನೆಯಲ್ಲಿ ಅಭಿಮಾನಿಗಳ ಬಗ್ಗೆ ಕಾಳಜಿ ತೋರಿದ ಎನ್‌ಟಿಆರ್, ‘ಜಾಗ್ರತೆಯಿಂದ ಮನೆಗೆ ಹೋಗಿ. ನಮ್ಮ ಮನೆಯಲ್ಲಿ ನಡೆದ ಘಟನೆ (ಅಪಘಾತದ ನೋವು) ನಿಮ್ಮ ಕುಟುಂಬದಲ್ಲಿ ಆಗಬಾರದು ಎಂದು ನಾನು ಆಶಿಸುತ್ತೇನೆ. ನೀವು ನೀಡುವ ಈ ಪ್ರೀತಿಗೆ ನಾನು ಸದಾ ತಲೆ ಬಾಗಿ ನಮಸ್ಕರಿಸುತ್ತೇನೆ’ ಎಂದು ಕೈಬೀಸುತ್ತಾ ವೇದಿಕೆಯಿಂದ ನಿರ್ಗಮಿಸಿದರು. ಜ್ಯು. ಎನ್‌ಟಿಆರ್ ಕಾರ್ಯಕ್ರಮಕ್ಕೆ ಆಗಮಿಸುವ ಸುದ್ದಿ ಕೇಳಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಕಾರಿನ ಸನ್‌ರೂಫ್ ನಲ್ಲಿ ಅಭಿಮಾನಿಗಳತ್ತ ನಮಸ್ಕರಿಸುತ್ತ ತೆರಳಿದರು.



Source link

Leave a Reply

Your email address will not be published. Required fields are marked *