
ಬಹ್ರೇನ್ನಲ್ಲಿ ಇಸ್ರೇಲ್ನ ‘ಮೊಸಾದ್’ ಪರ ಕೆಲಸ ಮಾಡುತ್ತಿದ್ದ ಭಾರತೀಯ ಗೂಢಚಾರನನ್ನು ಬಂಧಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣದ ವದಂತಿಯನ್ನು ಭಾರತ ಸರ್ಕಾರ ನಿರಾಕರಿಸಿದೆ. ಕೇಂದ್ರ ವಾರ್ತಾ ಇಲಾಖೆಯ (PIB) ಫ್ಯಾಕ್ಟ್ ಚೆಕ್ ತಂಡವು ಈ ಸುದ್ದಿಯನ್ನು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.
ನವದೆಹಲಿ (ಮಾ.10): ಇಸ್ರೇಲ್ನ ಗುಪ್ತಚರ ಸಂಸ್ಥೆ ‘ಮೊಸಾದ್’ ಪರ ಕೆಲಸ ಮಾಡುತ್ತಿದ್ದ ಭಾರತೀಯ ಗೂಢಚಾರನನ್ನು ಬಹ್ರೇನ್ನಲ್ಲಿ ಬಂಧಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಯನ್ನು ಭಾರತ ಸರ್ಕಾರ ಅಧಿಕೃತವಾಗಿ ನಿರಾಕರಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ವಾರ್ತಾ ಇಲಾಖೆಯ (PIB) ಫ್ಯಾಕ್ಟ್ ಚೆಕ್ ತಂಡ, ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸಂದೇಶದ ಪ್ರಕಾರ, ಬಹ್ರೇನ್ನಲ್ಲಿ ಟೆಲಿಕಾಂ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ‘ನಿತಿನ್ ಮೋಹನ್’ ಎಂಬ ಭಾರತೀಯ ವ್ಯಕ್ತಿಯನ್ನು ಅಲ್ಲಿನ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹೇಳಲಾಗಿತ್ತು. ಈತ ಇಸ್ರೇಲ್ನ ಮೊಸಾದ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬಹ್ರೇನ್ನ ಆಯಕಟ್ಟಿನ ಸ್ಥಳಗಳ ಫೋಟೋಗಳು, ವಿಡಿಯೋಗಳು ಮತ್ತು ಭೌಗೋಳಿಕ ದತ್ತಾಂಶಗಳನ್ನು ವಿದೇಶಿ ಸಂಸ್ಥೆಗಳಿಗೆ ಸೋರಿಕೆ ಮಾಡಿದ್ದಾನೆ ಎಂಬ ಗಂಭೀರ ಆರೋಪವನ್ನು ಆ ಪೋಸ್ಟ್ನಲ್ಲಿ ಮಾಡಲಾಗಿತ್ತು.
ಅಷ್ಟೇ ಅಲ್ಲದೆ, ಬಹ್ರೇನ್ ಆಂತರಿಕ ಸಚಿವಾಲಯದ ಹಿನ್ನೆಲೆ ಇರುವ ಫೋಟೋದ ಮುಂದೆ ವ್ಯಕ್ತಿಯೊಬ್ಬ ನಿಂತಿರುವ ಚಿತ್ರವನ್ನೂ ಈ ಸುಳ್ಳು ಸುದ್ದಿಯೊಂದಿಗೆ ಹಂಚಿಕೊಳ್ಳಲಾಗಿತ್ತು.
ವಿದೇಶಾಂಗ ಸಚಿವಾಲಯದ (MEA) ಸ್ಪಷ್ಟನೆ
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ಫ್ಯಾಕ್ಟ್ ಚೆಕ್ ಘಟಕ, “ಬಹ್ರೇನ್ನಲ್ಲಿ ಭಾರತೀಯ ಗೂಢಚಾರನನ್ನು ಬಂಧಿಸಿ ದೇಶದ್ರೋಹದ ಆರೋಪ ಹೊರಿಸಲಾಗಿದೆ ಎಂಬ ಸುದ್ದಿ ಶುದ್ಧ ಸುಳ್ಳು” ಎಂದು ಸ್ಪಷ್ಟಪಡಿಸಿದೆ. ಇಂತಹ ತಪ್ಪು ಮಾಹಿತಿಗಳು ಅನಗತ್ಯ ಆತಂಕವನ್ನು ಸೃಷ್ಟಿಸುವುದಲ್ಲದೆ, ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆ ತರುತ್ತವೆ ಎಂದು ಸರ್ಕಾರ ಎಚ್ಚರಿಸಿದೆ.
ಸಾರ್ವಜನಿಕರಿಗೆ ಸರ್ಕಾರದ ಮನವಿ
ಇಂತಹ ಸೂಕ್ಷ್ಮ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಎಡಿಟ್ ಮಾಡಿದ ಫೋಟೋಗಳು ಮತ್ತು ದಿಕ್ಕು ತಪ್ಪಿಸುವ ಬರಹಗಳ ಮೂಲಕ ಇಂತಹ ಪೋಸ್ಟ್ಗಳನ್ನು ನಂಬಿಸಲು ಪ್ರಯತ್ನಿಸಲಾಗುತ್ತದೆ. ಆದ್ದರಿಂದ ನಿಖರ ಮಾಹಿತಿಗಾಗಿ ಕೇವಲ PIB, ವಿದೇಶಾಂಗ ಸಚಿವಾಲಯ ಅಥವಾ ಸರ್ಕಾರದ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸುವಂತೆ ಸೂಚಿಸಲಾಗಿದೆ.
Scroll to load tweet…